ಜನರಿಗೆ ಕೊಟ್ಟ ಭರವಸೆ ಈಡೇರಿಸಿದ ಡಾ.ಜಿ.ಪರಮೇಶ್ವರ
ತುಮಕೂರು, ನವೆಂಬರ್ 05 : ಕೊರಟಗೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಜಿ.ಪರಮೇಶ್ವರ ಅವರು ಕ್ಷೇತ್ರದ ಜನರಿಗೆ ಕೊಟ್ಟ ಒಂದು ಭರವಸೆಯನ್ನು ಈಡೇರಿಸಿದ್ದಾರೆ. ಕ್ಷೇತ್ರದ ಜನರು ಶಾಸಕರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ವಿಧಾನಸಭೆ ಚುನಾವಣೆ ಸಮಯದಲ್ಲಿ ಹಳ್ಳಿಗಳಲ್ಲಿ ಡಾ.ಜಿ.ಪರಮೇಶ್ವರ ಅವರು ಪ್ರಚಾರ ನಡೆಸುತ್ತಿದ್ದರು. ಆಗ ಹಳ್ಳಿಯ ಜನ ಅದರಲ್ಲೂ ಹೆಚ್ಚು ಶಾಲೆಗೆ ಹೋಗುವ ಹೆಣ್ಣು ಮಕ್ಕಳು ನಮ್ಮ ಊರಿಗೆ ಬಸ್ಸಿನ ಅವಶ್ಯಕತೆ ಇದೆ ಎಂದು ಬೇಡಿಕೆ ಇಟ್ಟಿದ್ದರು.
ಆಗ ಪರಮೇಶ್ವರ ಅವರು ಬಸ್ ಸೌಕರ್ಯವನ್ನು ಕಲ್ಪಿಸುವ ಭರವಸೆ ನೀಡಿದ್ದರು. 'ನಾನು ಮಾತಾಡುವ ಶಾಸಕ ಆಗುವುದಿಲ್ಲ ಬದಲಾಗಿ ನಿಮ್ಮ ಕಾಯಕ ಮಾಡುವ ಶಾಸಕ ಆಗುತ್ತೇನೆ' ಎಂದು ಜನರಿಗೆ ಭರವಸೆ ನೀಡಿದ್ದರು.

ಗ್ರಾಮೀಣ ಭಾಗದ ಜನರ ಸಮಸ್ಯೆ ಆಲಿಸಿದ್ದ ಪರಮೇಶ್ವರ ಅವರುಮೊದಲು ಗ್ರಾಮೀಣ ಪ್ರದೇಶಗಳಲ್ಲಿ ಅಚ್ಚುಕಟ್ಟಾಗಿ ರಸ್ತೆ ನಿರ್ಮಿಸಿ, ಬಸ್ಸುಗಳ ವ್ಯವಸ್ಥೆ ಮಾಡಿಕೊಡುತ್ತೇನೆ ಎಂದು ಹೇಳಿದ್ದರು. ಈಗ ನುಡಿದಂತೆ ನಡೆದುಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ತುಮಕೂರು ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಸಭೆಯಲ್ಲಿ ಕೊರಟಗೆರೆ ಕ್ಷೇತ್ರದ ವಿದ್ಯಾರ್ಥಿಗಳಿಗೆ ಬಸ್ಸುಗಳ ವ್ಯವಸ್ಥೆಯನ್ನು ಶೀಘ್ರವಾಗಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಈಗ ಕ್ಷೇತ್ರದ 13 ಮಾರ್ಗಗಳಿಗೆ ನೂತನ ಗ್ರಾಮೀಣ ಸಾರಿಗೆ ಬಸ್ಸುಗಳು ಸಂಚಾರ ಆರಂಭವಾಗಿದೆ. 24 ಮಾರ್ಗಗಳಿಗೆ ಪ್ರಸ್ತಾನೆ ಇದ್ದು ಇನ್ನು ಉಳಿದ 11 ಮಾರ್ಗಗಳ ಸಂಚಾರ ಶೀಘ್ರದಲ್ಲೇ ಆರಂಭವಾಗುವ ನಿರೀಕ್ಷೆಇದೆ.

ತಮ್ಮ ಬಹುದಿನದ ಬೇಡಿಕೆಯನ್ನು ಈಡೇರಿಸಿದ ಶಾಸಕರಿಗೆ ಗ್ರಾಮೀಣ ಭಾಗದ ಜನರು ಮತ್ತು ವಿದ್ಯಾರ್ಥಿಗಳು ಧನ್ಯವಾದಗಳನ್ನು ಅರ್ಪಿಸಿದ್ದಾರೆ.












Click it and Unblock the Notifications