ಬಿಜೆಪಿ ಸೇರುವುದಾಗಿ ಘೋಷಿಸಿದ ಎಸ್. ಪಿ. ಮುದ್ದಹನುಮೇಗೌಡ
ತುಮಕೂರು, ಸೆಪ್ಟೆಂಬರ್ 04; ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಮಾಜಿ ಸಂಸದ ಎಸ್. ಪಿ. ಮುದ್ದಹನುಮೇಗೌಡ ಬಿಜೆಪಿ ಸೇರಲಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಅವರು ಕುಣಿಗಲ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿ.
ಶನಿವಾರ ಬೆಂಗಳೂರಿನಲ್ಲಿ ಎಸ್. ಪಿ. ಮುದ್ದಹನುಮೇಗೌಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭೇಟಿ ಮಾಡಿದ್ದರು. ಈ ಭೇಟಿಯ ಬಳಿಕ ಬಿಜೆಪಿ ಸೇರುವುದಾಗಿ ಘೋಷಣೆ ಮಾಡಿದ್ದಾರೆ. ಒಂದು ವಾರದಲ್ಲಿ ಅವರು ಅಧಿಕೃತವಾಗಿ ಪಕ್ಷ ಸೇರ್ಪಡೆಯಾಗುವ ಸಾಧ್ಯತೆ ಇದೆ.
ಎಸ್. ಪಿ. ಮುದ್ದಹನುಮೇಗೌಡ ಗುರುವಾರ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದರು. ಪಕ್ಷ ತೊರೆಯುವ ತೀರ್ಮಾನವನ್ನು ಪ್ರಕಟಿಸಿದ್ದರು, ಅಂದೇ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಎರಡು ಬಾರಿ ಕುಣಿಗಲ್ನಿಂದ ಶಾಸಕರಾಗಿ ಆಯ್ಕೆಯಾಗಿದ್ದ ಮುದ್ದಹನುಮೇಗೌಡ, 2014ರಲ್ಲಿ ಸಂಸದರಾಗಿದ್ದರು.
ತುಮಕೂರು ಲೋಕಸಭಾ ಕ್ಷೇತ್ರದಿಂದ 2014ರ ಚುನಾವಣೆಯಲ್ಲಿ ಎಸ್. ಪಿ. ಮುದ್ದಹನುಮೇಗೌಡ 4,29,868 ಮತಗಳನ್ನು ಪಡೆದು ಜಯಗಳಿಸಿದ್ದರು. ಹಾಲಿ ಸಂಸದರಾಗಿದ್ದರೂ 2019ರ ಲೋಕಸಭೆ ಚುನಾವಣೆಯಲ್ಲಿ ಅವರಿಗೆ ಪಕ್ಷದ ಟಿಕೆಟ್ ಕೈ ತಪ್ಪಿತ್ತು, ಆಗಲೇ ಅವರು ಪಕ್ಷದ ವಿರುದ್ಧ ಅಸಮಾಧಾನಗೊಂಡಿದ್ದರು.

ಒಂದು ವಾರದಲ್ಲಿ ಬಿಜೆಪಿ ಸೇರ್ಪಡೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ ಬಳಿಕ ಮಾತನಾಡಿದ ಎಸ್. ಪಿ. ಮುದ್ದಹನುಮೇಗೌಡ, "ನಾನು ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆ. ಮುಖಂಡರ ಜೊತೆ ಮಾತುಕತೆ ನಡೆಸಿದ್ದೇನೆ. ಒಂದು ವಾರದೊಳಗೆ ಪಿತೃಪಕ್ಷ ಬರುವುದರೊಳಗೆ ಅಧಿಕೃತವಾಗಿ ಬಿಜೆಪಿ ಸೇರಲಿದ್ದೇನೆ" ಎಂದರು.

ಕುಣಿಗಲ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿ
ಎಸ್. ಪಿ. ಮುದ್ದಹನುಮೇಗೌಡ 2023ರ ವಿಧಾನಸಭೆ ಚುನಾವಣೆಗೆ ಕುಣಿಗಲ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಕ್ಷೇತ್ರದ ಹಾಲಿ ಶಾಸಕರು ಕಾಂಗ್ರೆಸ್ನ ಡಾ. ರಂಗನಾಥ್. ಡಿ. ಕೆ. ಶಿವಕುಮಾರ್ ಆಪ್ತರಾದ ಇವರಿಗೆ ಟಿಕೆಟ್ ಸಿಗುವುದು ಖಚಿತ. ಬಿಜೆಪಿ ಸೇರಿದ ಮೇಲೆ ಎಸ್. ಪಿ. ಮುದ್ದಹನುಮೇಗೌಡರಿಗೆ ಟಿಕೆಟ್ ಸಿಗಲಿದೆಯೇ? ಎಂದು ಕಾದು ನೋಡಬೇಕು.
1994 ಮತ್ತು 1999ರ ಚುನಾವಣೆಯಲ್ಲಿ ಕುಣಿಗಲ್ ಕ್ಷೇತ್ರದಿಂದ ವಿಧಾನಸಭೆ ಚುನಾವಣೆ ಕಣಕ್ಕಿಳಿದು ಮುದ್ದಹನುಮೇಗೌಡ ಗೆಲುವು ಕಂಡಿದ್ದರು. 2014ರ ಚುನಾವಣೆಯಲ್ಲಿ ತುಮಕೂರಿನಿಂದ ಲೋಕಸಭಾ ಚುನಾವಣೆ ಕಣಕ್ಕಿಳಿದು ಜಯಗಳಿಸಿದ್ದರು. 2019ರ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿತ್ತು.

ಕಾಂಗ್ರೆಸ್ ತೊರೆದಿದ್ದ ಮುದ್ದಹನುಮೇಗೌಡ
ಎಸ್. ಪಿ. ಮುದ್ದಹನುಮೇಗೌಡ ಗುರುವಾರ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಭೇಟಿ ಮಾಡಿದ್ದರು. ಬಳಿಕ ಮಾತನಾಡಿದ್ದ ಅವರು, "ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ಮುಕ್ತಗೊಳಿಸುವಂತೆ ಕೇಳಿದ್ದೇನೆ. ಪಕ್ಷ ಬಿಡಬೇಕಾದರೆ ಪಕ್ಷ ಕಾರಣವಾಗಿರಬೇಕು ಅಥವ ನಾನು ಕಾರಣವಾಗಿರಬೇಕು. ಅದು ನನ್ನ ಕಡೆಯಿಂದ ಆಗಿದ್ದರೆ ಸ್ಪಷ್ಟವಾಗಿ ಹೇಳಬೇಕು. ಒಂದು ರಾಷ್ಟ್ರೀಯ ಪಕ್ಷ ಬಿಡಲು ಬಲವಾದ ಕಾರಣ ಇರಬೇಕು ಅಲ್ಲವೇ?" ಎಂದರು. ಅಂದು ಸಂಜೆಯೇ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.

4 ಬಾರಿ ಟಿಕೆಟ್ ತಪ್ಪಿಸಿದರು
ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಎಸ್. ಪಿ. ಮುದ್ದಹನುಮೇಗೌಡ, "ನಾನು ನಾಯಕರನ್ನು ಭೇಟಿ ಮಾಡಿ ನನ್ನ ಸ್ಪಷ್ಟ ನಿರ್ಧಾರವನ್ನು ತಿಳಿಸಿದ್ದೇನೆ. ನಾನು ಅತ್ಯಂತ ಕ್ರಿಯಾಶೀಲವಾಗಿ ಪಕ್ಷ ಸಂಘಟನೆ ಮಾಡಿದ್ದೇನೆ. 4 ಬಾರಿ ನಾನು ಚುನಾವಣೆಗೆ ಸ್ಪರ್ಧೆ ಮಾಡದಂತೆ ತಪ್ಪಿಸಲಾಗಿದೆ. 2019ರಲ್ಲಿ ಹಾಲಿ ಸಂಸದನಾಗಿದ್ದರೂ ಸ್ಪರ್ಧೆಗೆ ನನಗೆ ಅವಕಾಶ ನೀಡಲಿಲ್ಲ" ಎಂದು ಆರೋಪಿಸಿದ್ದರು.
ಎಸ್. ಪಿ. ಮುದ್ದಹನುಮೇಗೌಡ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಸಹ ಭೇಟಿಯಾಗಿದ್ದರು. "ಸಿದ್ದರಾಮಯ್ಯ ಪಕ್ಷ ತೊರೆಯುವ ನಿರ್ಧಾರ ಮಾಡಬೇಡಿ ಎಂದು ಹೇಳಿದ್ದಾರೆ. ಆದರೆ ಪಕ್ಷದಿಂದ ಬಿಡುಗಡೆ ಮಾಡಿ ಎಂದು ಕೇಳಿದ್ದೇನೆ. ಇಷ್ಟು ವರ್ಷ ನಡೆದ ರಾಜಕೀಯ ಧೋರಣೆಗಳು ಇಂದಿನ ತೀರ್ಮಾನಕ್ಕೆ ಕಾರಣ" ಎಂದು ಮುದ್ದಹನುಮೇಗೌಡ ಹೇಳಿದ್ದರು.

ಎಚ್. ಡಿ. ದೇವೇಗೌಡರಿಗೆ ಕ್ಷೇತ್ರ ತ್ಯಾಗ
2019ರ ಲೋಕಸಭೆ ಚುನಾವಣೆ ವೇಳೆ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿತ್ತು. ತುಮಕೂರಿನಲ್ಲಿ ಎರಡೂ ಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಎಚ್. ಡಿ. ದೇವೇಗೌಡ ಕಣಕ್ಕಿಳಿಸಲು ತೀರ್ಮಾನಿಸಲಾಯಿತು. ಆದ್ದರಿಂದ ಹಾಲಿ ಸಂಸದರಾಗಿದ್ದೂ ಎಸ್. ಪಿ. ಮುದ್ದಹನುಮೇಗೌಡ ಕ್ಷೇತ್ರ ತ್ಯಾಗ ಮಾಡಬೇಕಾಯಿತು.
ಆಗಲೇ ಅವರು ಮುಂದಿನ ಚುನಾವಣೆಯಲ್ಲಿ ಕುಣಿಗಲ್ ಕ್ಷೇತ್ರದ ಟಿಕೆಟ್ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಆದರೆ ಕಾಂಗ್ರೆಸ್ ನಾಯಕರು ಸರಿಯಾಗಿ ಸ್ಪಂದಿಸದ ಕಾರಣ ಪಕ್ಷ ತೊರೆದಿದ್ದಾರೆ. ಈಗ ಬಿಜೆಪಿ ಸೇರುತ್ತಿದ್ದಾರೆ.












Click it and Unblock the Notifications