ದೆಹಲಿಯಲ್ಲಿ ಕರ್ನಾಟಕ ಪರ ಧ್ವನಿಯಾಗಿದ್ದರು ಅನಂತ್: ಸಿದ್ದಲಿಂಗ ಸ್ವಾಮೀಜಿ
ತುಮಕೂರು, ನವೆಂಬರ್ 12: ಕೇಂದ್ರ ಸಚಿವ ಅನಂತಕುಮಾರ್ ನಿಧನಕ್ಕೆ ಮಾಜಿ ಸಚಿವ- ಬಿಜೆಪಿ ಮುಖಂಡ ಸೊಗಡು ಶಿವಣ್ಣ ತುಮಕೂರಿನಲ್ಲಿ ಸೋಮವಾರ ಸಂತಾಪ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಹಿರಿಯ ಕಾರ್ಯಕರ್ತರನ್ನು ನಾವು ಕಳೆದುಕೊಂಡಿದ್ದೇವೆ. ನಮ್ಮ ರಾಜ್ಯದಿಂದ ಮಲ್ಲಿಕಾರ್ಜುನಯ್ಯ, ಅನಂತ್ ಕುಮಾರ್ ರಾಷ್ಟ್ರಮಟ್ಟಕ್ಕೆ ಹೋಗಿದ್ದವರು. ದುರದೃಷ್ಟದಿಂದ ಇಬ್ಬರನ್ನೂ ನಾವು ಕಳೆದುಕೊಂಡಿದ್ದೇವೆ ಎಂದಿದ್ದಾರೆ.
ಒಂದು ಕಡೆ ದುಃಖ ಆಗಿದೆ. ಆದರೆ ಅವರ ಪ್ರೀತಿಯಿಂದ ನಾವು ಸರಿದೂಗಿಸುತ್ತೇವೆ. ಅವರ ಕುಟುಂಬಕ್ಕೆ ದೇವರು ಧೈರ್ಯ ನೀಡಲಿ. ಅವರ ತಾಯಿ- ತಂದೆ ಕೊಟ್ಟ ಶಕ್ತಿಯನ್ನು ನಾವೆಲ್ಲಾ ಅನುಭವಿಸಿದ್ದೇವೆ. ನಮ್ಮ ಪಕ್ಷದಲ್ಲಿ ಅನೇಕ ಬಾರಿ ಕಷ್ಟ ಬಂದಾಗ ಅವರು ಸರಿದೂಗಿಸಿದ್ದಾರೆ. ಎಷ್ಟೇ ದುಃಖ, ಕಷ್ಟ ಇದ್ದರೂ ಸಹಿಸಿಕೊಂಡು ಕಾರ್ಯಕರ್ತರನ್ನು ಸರಿದೂಗಿಸುತ್ತಿದ್ದರು ಎಂದಿದ್ದಾರೆ.
ಅಂತಹ ಮನಸ್ಥಿತಿಗೆ ನಾವು ಬೆಲೆ ಕಟ್ಟುವುದಕ್ಕೆ ಆಗಲ್ಲ. ರಾಜ್ಯ, ರಾಷ್ಟ್ರದ ಕಾರ್ಯಕರ್ತರಿಗೆ ಈ ದುಃಖ ತಡೆದುಕೊಳ್ಳುವ ಸ್ಥೈರ್ಯ ಸಿಗಲಿ. ಅನಂತಕುಮಾರ್ ಹಾದಿಯನ್ನು ನಾವು ಉಳಿಸಿಕೊಂಡು ಹೋಗುತ್ತೇವೆ. ನಮ್ಮ ಉಸಿರು ಇರುವವರೆಗೂ ಅವರ ಗುರಿಯನ್ನು ನಡೆಸಿಕೊಂಡು ಹೋಗುತ್ತೇವೆ ಎಂದರು.

"ಕರ್ನಾಟಕದ ರಾಜಕಾರಣ ಒಂದು ದೊಡ್ಡ ಶಕ್ತಿ ಕಳೆದುಕೊಂಡಿದೆ"
ಕೇಂದ್ರ ಸಚಿವ ಅನಂತಕುಮಾರ್ ನಿಧನಕ್ಕೆ ಸಿದ್ದಗಂಗಾ ಕಿರಿಯ ಶ್ರೀ ಸಿದ್ದಲಿಂಗ ಸ್ವಾಮಿಜಿ ಸಂತಾಪ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಪಾಲಿಗೆ ದೆಹಲಿಯಲ್ಲಿ ಗಟ್ಟಿ ಧ್ವನಿಯಾಗಿದ್ದವರು ಅನಂತಕುಮಾರ್. ಕರ್ನಾಟಕದ ರಾಜಕಾರಣದಲ್ಲಿ ವಿಶಿಷ್ಟವಾದ ಛಾಪನ್ನು ಮೂಡಿಸಿದ್ದರು ಎಂದು ಹೇಳಿದರು.

ದೆಹಲಿಯ ರಾಜಕಾರಣದಲ್ಲಿ ಮಹತ್ವದ ಸ್ಥಾನ ಪಡೆದುಕೊಂಡು, ಕರ್ನಾಟಕವನ್ನು ಪ್ರತಿನಿಧಿಸುವಂತಹ ಧೀಮಂತ ನಾಯಕನಾಗಿದ್ದ ಅನಂತಕುಮಾರ್, ರಾಜಕಾರಣ ಅಲ್ಲದೆ ಸಾಂಸ್ಕೃತಿಕ ಮತ್ತು ಸೇವಾ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದರು. ಕರ್ನಾಟಕದ ರಾಜಕಾರಣ ಒಂದು ದೊಡ್ಡ ಶಕ್ತಿ ಕಳೆದುಕೊಂಡಿದೆ. ಶ್ರೀಮಠದ ಬಗ್ಗೆ ಅವರು ಭಕ್ತಿ- ಪ್ರೀತಿ ಇಟ್ಟುಕೊಂಡಿದ್ದರು ಎಂದರು.












Click it and Unblock the Notifications