ತುಮಕೂರಲ್ಲಿ ರೈತನಿಗೆ ಅವಮಾನ; ಟ್ವೀಟ್ ಮಾಡಿದ ಆನಂದ್ ಮಹೀಂದ್ರ!
ತುಮಕೂರು, ಜನವರಿ 25; ತುಮಕೂರಿನ ಕಾರು ಶೋ ರೂಂ ಸೇಲ್ಸ್ ಏಜೆಂಟ್ ಯುವ ರೈತ ಕೆಂಪೇಗೌಡನಿಗೆ ಮಾಡಿದ ಅವಮಾನ ಭಾರೀ ಸುದ್ದಿಯಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಮಹೀಂದ್ರ ಕಂಪನಿ ಅಧ್ಯಕ್ಷ ಆನಂದ್ ಮಹೀಂದ್ರ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ರಾಮನಪಾಳ್ಯದಲ್ಲಿನ ಶೋ ರೂಂಗೆ ಬೋಲೆರೋ ವಾಹನ ಖರೀದಿಗೆ ಹೋಗಿದ್ದ ಯುವ ರೈತ ಕೆಂಪೇಗೌಡನಿಗೆ ಅಮಮಾನ ಮಾಡಲಾಗಿತ್ತು. ಬಳಿಕ ಕೆಂಪೇಗೌಡ ಒಂದೇ ಗಂಟೆಯಲ್ಲಿ 10 ಲಕ್ಷ ರೂ.ಗಳನ್ನು ತಂದು ಸಿಬ್ಬಂದಿ ಮುಂದಿಟ್ಟು ವಾಹನ ನೀಡುವಂತೆ ಪಟ್ಟು ಹಿಡಿದಿದ್ದ.
ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯ ಕೆಂಪೇಗೌಡ ಎನ್ನುವ ರೈತನ ಬಟ್ಟೆ ನೋಡಿ ಸೇಲ್ಸ್ ಏಜೆಂಟ್ಗಳು ಅವಮಾನ ಮಾಡಿದ್ದರು. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಶೋ ರೂಂ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.

ಘಟನೆ ಕುರಿತು ತನಿಖೆ; ಈ ಘಟನೆ ಬಗ್ಗೆ ಮಹೀಂದ್ರ ಕಂಪನಿ ಅಧ್ಯಕ್ಷ ಆನಂದ್ ಮಹೀಂದ್ರ ಮತ್ತು ಸಿಇಒ ವಿಜಯ್ ನಕ್ರಾ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಡೀಲರ್ ನಮ್ಮ ಯಾವುದೇ ನಿಯಮದಿಂದ ದೂರ ಸರಿದಿದ್ದು ದೃಢಪಟ್ಟರೆ ಸಿಬ್ಬಂದಿಗೆ ತರಬೇತಿ ಕೊಡಿಸುವುದು ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಆನಂದ್ ಮಹೀಂದ್ರ ಮತ್ತು ಸಿಒಇ ಟ್ವೀಟ್
The Core Purpose of @MahindraRise is to enable our communities & all stakeholders to Rise.And a key Core Value is to uphold the Dignity of the Individual. Any aberration from this philosophy will be addressed with great urgency. https://t.co/m3jeCNlV3w
— anand mahindra (@anandmahindra) January 25, 2022
ವಿಜಯ್ ನಕ್ರಾ ತಮ್ಮ ಟ್ವೀಟ್ನಲ್ಲಿ, "ಗ್ರಾಹಕರಿಗೆ ಅತ್ಯುತ್ತಮ ಅನುಭವ ಒದಗಿಸಬೇಕು ಎನ್ನುವ ನಮ್ಮ ಪ್ರಯತ್ನದಲ್ಲಿ ಡೀಲರ್ಗಳ ಪಾತ್ರ ಅತಿ ಮುಖ್ಯ. ನಮ್ಮ ಗ್ರಾಹಕರನ್ನು ಗೌರವ ಮತ್ತು ಘನತೆಯಿಂದ ಕಾಣಬೇಕು ಎನ್ನುವುದು ನಮ್ಮ ನಿಯಮ. ಘಟನೆಯ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಸೂಕ್ತ ಕ್ರಮ ಕೈಗೊಳ್ಳುತ್ತೇವೆ" ಎಂದು ಭರವಸೆ ನೀಡಿದ್ದಾರೆ.
ಇನ್ನು ಆನಂದ್ ಮಹೀಂದ್ರ ಟ್ವೀಟ್ ಮಾಡಿ, "ಮಹೀಂದ್ರ ಕಂಪನಿಯ ಮುಖ್ಯ ಉದ್ದೇಶವೇ ನಮ್ಮ ಸಮುದಾಯಗಳು ಮತ್ತು ಎಲ್ಲ ಸಹಭಾಗಿಗಳಿಗೆ ಶಕ್ತಿ ತುಂಬುವುದು. ವ್ಯಕ್ತಿಯ ಘನತೆ ಎತ್ತಿಹಿಡಿಯುವುದು ನಮ್ಮ ಸಂಸ್ಥೆಯ ಉದ್ದೇಶ. ಈ ಮೌಲ್ಯದೊಂದಿಗೆ ರಾಜಿ ಆಗುವುದು ಅಥವಾ ನಮ್ಮ ನೀತಿಗಳಿಂದ ದೂರ ಹೋಗುವ ಯಾವುದೇ ಬೆಳವಣಿಗೆಯನ್ನು ಅತ್ಯಂತ ಗಂಭೀರವಾಗಿ ಮತ್ತು ತುರ್ತಾಗಿ ಗಮನಿಸುತ್ತೇವೆ" ಎಂದು ಹೇಳಿದ್ದಾರೆ.
ಘಟನೆ ವಿವರ; ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯ ಕೆಂಪೇಗೌಡ ಎನ್ನುವ ರೈತ ಜನವರಿ 4ರಂದು ಮಹೀಂದ್ರ ಶೋ ರೂಂಗೆ ಹೋಗಿ ಗೂಡ್ಸ್ ವಾಹನ ಬುಕ್ ಮಾಡಿ ಬಂದಿದ್ದರು. ಕಳೆದ ವಾರ 2 ಲಕ್ಷ ಹಣದೊಂದಿಗೆ ವಾಹನ ತರಲು ಹೋಗಿದ್ದರು. ಆಗ ಶೋ ರೂಂ ಸೇಲ್ಸ್ ಏಜೆಂಟ್ ಸೇರಿದಂತೆ 7 ಜನರು ಕೆಂಪೇಗೌಡರ ಬಟ್ಟೆ ನೋಡಿ ತಮಾಷೆ ಮಾಡಿದ್ದರು.
ನೀವು ವಾಹನ ತೆಗೆದುಕೊಂಡು ಹೋಗಲು ಬಂದಿಲ್ಲ. ನಿಮ್ಮ ಯೋಗ್ಯತೆಗೆ 10 ರೂಪಾಯಿ ಇಲ್ಲ ಎಂದು ಅವಮಾನ ಮಾಡಿದ್ದರು. ಸುಮ್ಮನೆ ಶೋ ರೂಂಗೆ ಬಂದಿದ್ದೀರಿ ಎಂದು ಸುಮಾರು 25 ನಿಮಿಷಗಳ ಕಾಲ ಕಿಚಾಯಿಸಿದ್ದರು.
ಈ ಅವಮಾನವನ್ನು ಸವಾಲಾಗಿ ತೆಗೆದುಕೊಂಡ ಕೆಂಪೇಗೌಡ ಒಂದು ಗಂಟೆಯಲ್ಲಿ 10 ಲಕ್ಷ ರೂ. ತಂದು ಏಜೆಂಟ್ ಮುಂದಿಟ್ಟು ತಕ್ಷಣ ವಾಹನ ಕೊಡಿ ಎಂದು ಪಟ್ಟು ಹಿಡಿದಿದ್ದರು. ಬಳಿಕ ತಪ್ಪಿನ ಅರಿವಾದ ಸಿಬ್ಬಂದಿ ಎರಡು ದಿನದಲ್ಲಿ ವಾಹನ ನೀಡುವುದಾಗಿ ಕಳಿಸಿದ್ದರು. ಕೆಂಪೇಗೌಡರ ಕ್ಷಮೆ ಕೇಳಿದ್ದರು.
ದಿ. ವಿಷ್ಣುವರ್ಧನ್, ದಿ. ಅಂಬರೀಶ್ ಅಭಿನಯದ 'ದಿಗ್ಗಜರು' ಸಿನಿಮಾದ ಒಂದು ದೃಶ್ಯ ಇದೇ ಮಾದರಿಯಲ್ಲಿತ್ತು. ಸಾಮಾಜಿಕ ಜಾಲತಾಣದಲ್ಲಿ ಘಟನೆ ವೈರಲ್ ಆಗಿತ್ತು. ಶೋ ರೂಂ ಸಿಬ್ಬಂದಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದರು.












Click it and Unblock the Notifications