ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ಗೆ 'ಸಿದ್ಧಗಂಗಾಶ್ರೀ' ಪ್ರಶಸ್ತಿ
ತುಮಕೂರು, ಡಿಸೆಂಬರ್ 13: ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಹಾಗೂ ಹಿತೈಷಿಗಳ ಸಂಘ ಕೊಡ ಮಾಡುವ 2021 ಮತ್ತು 2022ನೇ ಸಾಲಿನ 'ಸಿದ್ಧಗಂಗಾಶ್ರೀ' ಪ್ರಶಸ್ತಿಗೆ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ಆಯ್ಕೆ ಆಗಿದ್ದಾರೆ.
ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ವತಿಯಿಂದ ಕೊಡಮಾಡುವ 2021 ಮತ್ತು 2022ನೇ ಸಾಲಿನ 'ಸಿದ್ಧಗಂಗಾಶ್ರೀ' ಪ್ರಶಸ್ತಿಗೆ ಸಾಹಿತ್ಯ, ಧಾರ್ಮಿಕ, ಸಾಮಾಜಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಅನನ್ಯ ಕೊಡುಗೆ ಸಲ್ಲಿಸುತ್ತಿರುವ ಪ್ರಭು ಚನ್ನಬಸವಸ್ವಾಮಿಗಳು ಮತ್ತು ಡಾ.ಸಿ.ಎನ್. ಮಂಜುನಾಥ್ ಜೀವಮಾನ ಸಾಧನೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸಿದ್ಧಗಂಗಾ ಮಠದಲ್ಲಿ ದಿನಾಂಕ 18-12-2022ರಂದು ಭಾನುವಾರ 66ನೇ ಸರ್ವಸದಸ್ಯರ ವಾರ್ಷಿಕ ಮಹಾಧಿವೇಶನದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. 'ಸಿದ್ಧಗಂಗಾಶ್ರೀ' ಪ್ರಶಸ್ತಿಯು 1 ಲಕ್ಷ ರೂಪಾಯಿ ನಗದು, ಅಭಿನಂದನಾ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ.
ಇದೇ ಸಂದರ್ಭದಲ್ಲಿ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಹೆಸರಿನ 'ಸಿದ್ಧಗಂಗಾ ಶಿವಕುಮಾರ' ಪ್ರಶಸ್ತಿಯನ್ನು ಸಾಹಿತ್ಯ, ಸಾಮಾಜಿಕ , ಶೈಕ್ಷಣಿಕ ಮತ್ತು ಕೃಷಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ನಾಲ್ವರಿಗೆ ಪ್ರಶಸ್ತಿ ನೀಡಲಾಗುತ್ತಿದೆ . ಈ ಸಾಲಿನಲ್ಲಿ ಕಲಬುರಗಿಯ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷರು ಡಾ. ಭೀಮಾಶಂಕರ ಚಂದ್ರಶೇಖರ ಬಿಲಗುಂದಿ, ಮೈಸೂರಿನ ಸಾಹಿತಿ ಪ್ರೊ.ಎಸ್. ಮಲೆಯೂರು ಗುರುಸ್ವಾಮಿ, ಬೆಂಗಳೂರಿನ ವಿಜ್ಞಾನ ಮತ್ತು ತಂತ್ರಜ್ಞಾನ ತಜ್ಞರು ಡಾ.ವೈ.ಸಿ. ಕಮಲ ಮತ್ತು ರಾಯಚೂರಿನ ಕೃಷಿ ತಜ್ಞರು ಕವಿತಾ ಮಿಶ್ರಾ 'ಸಿದ್ಧಗಂಗಾ ಶಿವಕುಮಾರ' ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿಯು 15,000 ರೂಪಾಯಿ ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.

'ಕಾಯಕಯೋಗಿ' ಪ್ರಶಸ್ತಿಯನ್ನು ಸಾಹಿತಿಗಳಾದ ಧಾರವಾಡದ ರಂಜಾನ್ ದರ್ಗಾ ಅವರಿಗೆ ಪ್ರದಾನ ಮಾಡಲಾಗುತ್ತಿದ್ದು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಹೆಚ್.ಜಿ.ಈಶ್ವರಯ್ಯ, ತುಳಸೀರಾಮಯ್ಯ, ಲಕ್ಷ್ಮಯ್ಯ, ಆರ್.ಎಸ್. ಹುಚ್ಚಾಚಾರಿ, ಚನ್ನನಗೌಡ, ದೇವೆಂದ್ರ ಕಾರಂಜಿ, ಮಹೇಶ್ ಶಾಸ್ತಿ ಅವರಿಗೆ 'ಸಂಘಸಿರಿ' ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘಟನೆ ತಿಳಿಸಿದೆ.












Click it and Unblock the Notifications