ಸಿಎಂ ಹಾದಿಯಲ್ಲಿ ಡಿಸಿಎಂ: ಪರಮೇಶ್ವರ್ ಅವರಿಂದ ಜನಸಂಪರ್ಕ ಸಭೆ
ತುಮಕೂರು, ಜೂನ್ 22: ಸಿಎಂ ಕುಮಾರಸ್ವಾಮಿ ಅವರು ನಿನ್ನೆಯಷ್ಟೆ ಯಶಸ್ವಿಯಾಗಿ ಗ್ರಾಮ ವಾಸ್ತವ್ಯ ಮುಗಿಸಿದ ಬೆನ್ನಲ್ಲೆ ಡಿಸಿಎಂ ಪರಮೇಶ್ವರ್ ಅವರು ಸಹ ಅದೇ ಹಾದಿ ಹಿಡಿದಿದ್ದಾರೆ.
ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಇಂದು ತಮ್ಮ ಸ್ವಕ್ಷೇತ್ರ ಕೊರಟಗೆರೆಯ ತೋವಿನಕೆರೆ ಗ್ರಾಮದಲ್ಲಿ ಜನಸಂಪರ್ಕ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ ಆರಂಭವಾಗುವ ಜನಸಂಪರ್ಕದಲ್ಲಿ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮವು ಸಂಜೆ ವರೆಗೆ ನಡೆಯಲಿದೆ.
ಇಂದು ಸಂಜೆ ತೋವಿನಕೆರೆ ಗ್ರಾಮದಲ್ಲಿಯೇ ವಾಸ್ತವ್ಯವನ್ನು ಹೂಡುವ ಸಾಧ್ಯತೆ ಇದ್ದು, ನಾಳೆ ಬೆಳಿಗ್ಗೆ ಚಿನ್ನಹಳ್ಳಿ ಗ್ರಾಮದಲ್ಲಿ ಜನಸಂಪರ್ಕ ಸಭೆ ನಡೆಸಿ ಜನರ ಅವಹಾಲು ಸ್ವೀಕರಿಸಲಿದ್ದಾರೆ.

ಸಿಎಂ ಹಾದಿ ಹಿಡಿದ ಪರಮೇಶ್ವರ್
ನಿನ್ನೆಯಷ್ಟೆ ಕುಮಾರಸ್ವಾಮಿ ಅವರು ಯಾದಗಿರಿ ಜಿಲ್ಲೆಯ ಚಂಡರಕಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ನಡೆಸಿ ಜನರ ಅವಹಾಲು ಸ್ವೀಕರಿಸಿದ್ದರು. ಮತ್ತು ಈ ಕಾರ್ಯಕ್ರಮವು ಯಶಸ್ವಿಯೂ ಆಗಿದೆ. ಹಾಗಾಗಿ ಪರಮೇಶ್ವರ್ ಅವರು ಇದೇ ಹಾದಿಯನ್ನು ಹಿಡಿದಿದ್ದಾರೆ.

ಹಲವು ಅಧಿಕಾರಿಗಳು ಭಾಗಿಯಾಗಲಿದ್ದಾರೆ
ಪರಮೇಶ್ವರ್ ಅವರು ಇಂದು ನಡೆಸುವ ಜನಸಂಪರ್ಕ ಸಭೆಯಲ್ಲಿ ಕೊರಟಗೆರೆ ತಹಶೀಲ್ದಾರ್, ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಸಿಇಓ ಶುಭಾಕಲ್ಯಾಣ್ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಲಿದ್ದಾರೆ.

ಶಾಸಕರಿಂದಲೂ ಗ್ರಾಮ ವಾಸ್ತವ್ಯ?
ನಿನ್ನೆ ನಡೆದ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯವು ಸಾಕಷ್ಟು ಪ್ರಶಂಸೆಗೆ ಕಾರಣವಾಗಿದ್ದು, ಎಲ್ಲ ಶಾಸಕರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಗ್ರಾಮ ವಾಸ್ತವ್ಯ ಮಾಡಬೇಕು ಎಂದು ಅನಧಿಕೃತವಾಗಿ ಪಕ್ಷದ ಮುಖಂಡರುಗಳು ಸೂಚಿಸಿದ್ದಾರೆ.

ಈ ಮುಂಚೆಯೂ ಗ್ರಾಮ ವಾಸ್ತವ್ಯ ಮಾಡಿದ್ದ ಪರಮೇಶ್ವರ್
ಪರಮೇಶ್ವರ್ ಅವರು ಈ ಮುಂಚೆಯೂ ಗ್ರಾಮ ವಾಸ್ತವ್ಯ ಮಾಡಿದ್ದರು. 2013 ರ ಚುನಾವಣೆಯಲ್ಲಿ ಸೋತ ಬಳಿಕ ಕ್ಷೇತ್ರದ ಜೊತೆಗೆ ಸಂಪರ್ಕ ಹೆಚ್ಚಿಸಿಕೊಳ್ಳಲು, ದಲಿತರ ಮನೆಗಳಲ್ಲಿ ವಾಸ, ಅಲ್ಪಸಂಖ್ಯಾತರ ಮನೆಗಳಲ್ಲಿ ವಾಸ ಮುಂತಾದ ಕಾರ್ಯಕ್ರಮಗಳನ್ನು ಅವರು ಮಾಡಿದ್ದರು.












Click it and Unblock the Notifications