ಸಿಟಿ ರವಿ ಕಾರು ಅಪಘಾತ ಪ್ರಕರಣ: ಬಿಜೆಪಿ ನೀಡಿದ ಸ್ಪಷ್ಟೀಕರಣವೇನು?
Recommended Video

ತುಮಕೂರು, ಫೆಬ್ರವರಿ 19: ಚಿಕ್ಕಮಗಳೂರು ಬಿಜೆಪಿ ಶಾಸಕ ಸಿಟಿ ರವಿ ಅವರಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತರಾದ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಸ್ಪಷ್ಟೀಕರಣ ನೀಡಿದೆ.
ಕೆಲವು ಮಾಧ್ಯಮಗಳಲ್ಲಿ ಘಟನೆಯ ನಂತರ ಸಿಟಿ ರವಿ ಬೆಂಗಳೂರಿಗೆ ಪರಾರಿಯಾದರು ಎಂದು ವರದಿ ಮಾಡಲಾಗಿತ್ತು. ಈ ವರದಿಯನ್ನು ತಳ್ಳಿಹಾಕಿರುವ ಬಿಜೆಪಿ, ದುರದೃಷ್ಟವಶಾತ್ ಈ ಘಟನೆ ಸಂಭವಿಸಿತು. ಮೃತರ ಕುಟುಂಬಕ್ಕೆ ನಾವು ಸಾಂತ್ವನ ಕೋರುತ್ತೇವೆ. ಆದರೆ ಘಟನೆಯ ನಂತರ ಸಿಟಿ ರವಿ ಅವರು ಮೃತರ ದೇಹವನ್ನು ಪೊಲೀಸರು ವಶ್ಕೆ ಪಡೆಯುವ ವರೆಗೂ ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವವರೆಗೂ ಜೊತೆಯಲ್ಲೇ ಇದ್ದರು. ಅವರು ಎಲ್ಲಿಯೂ ಪರಾರಿಯಾಗಿರಲಿಲ್ಲ, ಎಂದು ಬಿಜೆಪಿ ಸ್ಪಷ್ಟೀಕರಣ ನೀಡಿದೆ.
ಅಪಘಾತವಾಗುವಾಗ ಸಿಟಿ ರವಿ ಅವರು ಕಾರು ಚಾಲನೆ ಮಾಡುತ್ತಿರಲಿಲ್ಲ. ಅವರಿಗೆ ಯಾವುದೇ ಕುಡಿತದ ಅಭ್ಯಾಸವೂ ಇಲ್ಲ. ಅವರಿಗೂ ಎದೆಗೆ ಗಾಯವಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ.

ಪೊಲೀಸ್ ಇನ್ಸ್ ಪೆಕ್ಟರ್ ಅವರು ಘಟನಾ ಸ್ಥಳದಿಂದ ಹೋಗಲು ಅನುಮತಿ ನೀಡಿದ ನಂತರವೇ ಸಿಟಿ ರವಿ ಅವರು ಅಲ್ಲಿಂದ ಹೊರಟಿದ್ದಾರೆ. ಸಿಟಿ ರವಿ ಅವರಿದ್ದ ಕಾರನ್ನು ಪೊಲೀಸರು ಹೆಚ್ಚಿನ ತನಿಖೆಗಾಗಿ ವಶಕ್ಕೆ ಪಡೆದಿದ್ದಾರೆ. ರವಿ ಅವರಿಗೆ ಈಗಲೂ ಎದೆ ನೋವಿದ್ದು, ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಬಿಜೆಪಿ ಹೇಳಿದೆ.
ಕೊಲ್ಲೂರು ಪ್ರವಾಸಕ್ಕೆಂದು ತೆರಳಿದ್ದ 12 ಸ್ನೇಹಿತರಿದ್ದ ಎರಡು ಕಾರನ್ನು ತುಮಕೂರಿನ ಕುಣಿಗಲ್ ಬಳಿಯ ಊರ್ಕೇನಹಳ್ಳಿ ಬಳಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿತ್ತು. ಕಾರಿನಲ್ಲಿದ್ದ ಯುವಕರು ಮೂತ್ರ ವಿಸರ್ಜನೆಗೆಂದು ರಸ್ತೆ ಬದಿ ನಿಂತಿದ್ದ ಸಮಯದಲ್ಲಿ ವೇಗವಾಗಿ ಬಂದ ಕಾರೊಂದು ಯುವಕರ ಮೇಲೆ ಹರಿದ ಪರಿಣಾಮ ಇಬ್ಬರು ಮೃತರಾಗಿದ್ದರೆ, ಓರ್ವ ಗಂಭೀರವಾಗಿ ಗಾಯಗೊಂಡರು. ಡಿಕ್ಕಿ ಹೊಡೆದ ಕಾರಿನಲ್ಲಿ ಬಿಜೆಪಿ ಶಾಸಕ ಸಿಟಿ ರವಿ ಅವರೂ ಇದ್ದರು.












Click it and Unblock the Notifications