ತುಮಕೂರಿಗೆ ಭೇಟಿ ನೀಡಿದ ಬರ ಅಧ್ಯಯನ ತಂಡ: ಪರಿಶೀಲನೆ
ತುಮಕೂರು, ನವೆಂಬರ್,3: ಮಳೆಯಿಲ್ಲದೆ ಹತ್ತು ತಾಲೂಕನ್ನು ಬರ ಪೀಡಿತ ತಾಲ್ಲೂಕೆಂದು ಘೋಷಿಸಿರುವ ಹಿನ್ನೆಲೆ ರಾಜ್ಯಕ್ಕೆ ಬರ ಅಧ್ಯಯನ ತಂಡ ಆಗಮಿಸಿ ಇಂದು ಜಿಲ್ಲೆಗೆ ಭೇಟಿ ನೀಡಿತು.
ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಕೇಂದ್ರದ ಇಂಧನ ಇಲಾಖೆ ಉಪನಿರ್ದೇಶಕ ಕಮಲ್ ಚೌಹಾಣ್, ನೀತಿ ಆಯೋಗದ ಸಂಶೋಧನಾಧಿಕಾರಿ ಗಣೇಶ್ರಾಮ್ ಹಾಗೂ ಬೆಂಗಳೂರಿನ ಭಾರತೀಯ ಆಹಾರ ನಿಗಮದ ಕೇಂದ್ರ ಡಿಜಿಎಂ ಎಲ್. ಚಾತ್ರೂ ನಾಯ್ಕ್ ರವರನ್ನೊಳಗೊಂಡ ಕೇಂದ್ರ ಬರ ಅಧ್ಯಯನ ತಂಡವನ್ನು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ, ಸಂಸದ ಎಸ್.ಪಿ. ಮುದ್ದಹನುಮೇಗೌಡ, ಜಿಲ್ಲಾಧಿಕಾರಿ ಕೆ.ಪಿ. ಮೋಹನ್ರಾಜ್ ಬರಮಾಡಿಕೊಂಡರು.

ತಂಡಕ್ಕೆ ಜಿಲ್ಲಾಧಿಕಾರಿ ಪವರ್ ಪಾಯಿಂಟ್ ಪ್ರಸೆಂಟೇಷನ್ ಮೂಲಕ ಕೃಷಿ, ತೋಟಗಾರಿಕೆ ಸೇರಿದಂತೆ ನಾನಾ ಇಲಾಖೆಗಳಲ್ಲಿ ಬರ ಪರಿಸ್ಥಿಯಿಂದ ರೈತರಿಗಾರಿರುವ ನಷ್ಟದ ಬಗ್ಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ಬೆಳೆ ನಷ್ಟದ ಬಗ್ಗೆ ಕೇಂದ್ರ ತಂಡದ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಚರ್ಚಿಸಿದರು.[3 ತಂಡದಿಂದ ಬರ ಅಧ್ಯಯನ, 15 ಜಿಲ್ಲೆಗಳಲ್ಲಿ ಪ್ರವಾಸ]
ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಜಿಲ್ಲೆಯ ಬರ ಪರಿಸ್ಥಿತಿ ಚರ್ಚಿಸಿ ಮಾಹಿತಿ ಪಡೆದ ಕೇಂದ್ರ ತಂಡದ ಅಧಿಕಾರಿಗಳು ತುಮಕೂರು ತಾಲೂಕಿನ ಬೆಳೆದರ ಗ್ರಾಮಕ್ಕೆ ಭೇಟಿ ನೀಡಿ ರೈತರ ಹೊಲಗಳಲ್ಲಿರುವ ಬೆಳೆಗಳ ಮಾಹಿತಿ ಪಡೆದುಕೊಂಡರು.
ಮಧುಗಿರಿ ತಾಲ್ಲೂಕು ಜಡೆಗೊಂಡನಹಳ್ಳಿ, ಚಿನ್ನೇನಹಳ್ಳಿ, ಪಾವಗಡ ತಾಲೂಕು ರಾಜವಂತಿ, ಕಣಿವೇನಹಳ್ಳಿ, ಅಗಸರ ಕಟ್ಟೆ, ಕೊರಟಗೆರೆ ತಾಲೂಕಿನ ಜನಪನಹಳ್ಳಿಗೆ ಕನ್ನೇನಹಳ್ಳಿಗಳಿಗೆ ತೆರಳಿದ ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳು ಶೇಂಗಾ ಮತ್ತು ಮುಸುಕಿನ ಜೋಳದ ಬೆಳೆಗಳು ಹಾಳಾಗಿರುವುದನ್ನು ಖುದ್ದು ವೀಕ್ಷಿಸಿ, ಕುಡಿವ ನೀರಿನ ಸಮಸ್ಯೆ, ಜಾನುವಾರುಗಳ ಮೇವಿನ ಸಮಸ್ಯೆ ಹಾಗೂ ಗೋಶಾಲೆ ತೆರೆಯುವ ಕುರಿತು ರೈತರೊಂದಿಗೆ ಚರ್ಚೆಸಿ, ಅಗತ್ಯ ನೆರವು ಕೊಡಿಸುವುದಾಗಿ ತಿಳಿಸಿದರು.

ವಿವಿಧ ಜಿಲ್ಲೆಗಳನ್ನು ಅವಲೋಕಿಸಿದ ಕೇಂದ್ರ ತಂಡದ ಅಧಿಕಾರಿಗಳು ರೈತರು, ಸ್ಥಳೀಯ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಂದ ಜಿಲ್ಲೆಯ ಬರ ಪರಿಸ್ಥಿತಿ ಕುರಿತು ಮಾಹಿತಿ ಕಲೆ ಹಾಕಿದರು.[ನ.2ಕ್ಕೆ ಕೇಂದ್ರ ಬರ ಅಧ್ಯಯನ ತಂಡ ರಾಜ್ಯ ಪ್ರವಾಸ]
ಜಿಲ್ಲೆಯಲ್ಲಿ 3-4 ವರ್ಷಗಳಿಂದ ಬರ ಪರಿಸ್ಥಿತಿಯಿದ್ದು, ಕೃಷಿ ಇಲಾಖೆಯಿಂದ ರೈತರಿಗೆ ಬೆಳೆ ನಷ್ಟ, ಕುಡಿಯುವ ನೀರಿನ ಸಮಸ್ಯೆ, ಕಿರುನೀರು ಸರಬರಾಜಿನ ತೊಂದರೆ, ರಾಸುಗಳಿಗೆ ಪೌಷ್ಠಿಕ ಆಹಾರ ಒದಗಿಸಲು 79 ಗೋಶಾಲೆ ತೆರೆಯಲು,153 ಮೇವು ಕೇಂದ್ರ ತೆರೆಯಲು ಕೇಂದ್ರ ಸರ್ಕಾರಕ್ಕೆ ವರದಿ ನೀಡಿ ಶಿಫಾರಸ್ಸು ಮಾಡುವಂತೆ ಕೇಂದ್ರ ಬರ ಅಧ್ಯಯನ ತಂಡಕ್ಕೆ ಜಿಲ್ಲಾಡಳಿತ ಪ್ರಸ್ತಾವನೆ ಸಲ್ಲಿಸಿ ಮನವಿ ಮಾಡಿತು.
ಜಿಲ್ಲೆಗೆ ವಾಡಿಕೆಯಂತೆ ಮಳೆಯಾಗಿಲ್ಲ. ಸಾಲ ಸೂಲ ಮಾಡಿ ರೈತರು ಇಟ್ಟ ಬೆಳೆ ಕೈಗೆ ಸಿಗದೆ ಹಾಳಾಗುತ್ತಿದೆ, ಸಾಲ ತೀರಿಸಲಾಗದೆ ರೈತರು ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ. ಮಳೆ ಇಲ್ಲದ ಕಾರಣ ಅಂತರ್ಜಲ ಕುಸಿದಿದೆ. ಹೊಸದಾಗಿ 1400 ಅಡಿ ವರೆಗೂ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಜಿಲ್ಲೆಯ ರೈತರ ಸ್ಥಿತಿ ತುಂಬಾ ಚಿಂತಾಜನಕವಾಗಿದೆ ಎಂದು ಕೇಂದ್ರ ಬರ ಅಧ್ಯಯನ ತಂಡಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಮನವರಿಕೆ ಮಾಡಿಕೊಟ್ಟರು.












Click it and Unblock the Notifications