ಬಸ್ ಅಪಘಾತದಲ್ಲಿ ನಾಲ್ವರು ಸಾವು; ಲಾರಿಯಲ್ಲಿದ್ದ ಸೋಪ್ ಬಾಕ್ಸ್ ಗೆ ಮುಗಿಬಿದ್ದ ಜನ
ತುಮಕೂರು, ನವೆಂಬರ್ 3: ತುಮಕೂರು ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ಬಸ್ ಅಪಘಾತವಾಗಿದೆ. ಬೆಳಗಾವಿಯಿಂದ ಬೆಂಗಳೂರಿಗೆ ಹೊರಟಿದ್ದ ನ್ಯಾಷನಲ್ ಟ್ರಾವಲ್ಸ್ ಖಾಸಗಿ ಬಸ್ ತುಮಕೂರು ನಗರ ಹೊರವಲಯದ ರಂಗಾಪುರದ ಬಳಿ ಚಲಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು, ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಸ್ಸಿನಲ್ಲಿದ್ದ ಮೂವರು ಪ್ರಯಾಣಿಕರು ಮೃತಪಟ್ಟಿದ್ದು, ಹದಿಮೂರು ಜನ ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಲಾರಿಯು ರಸ್ತೆ ತಡೆಗೋಡೆಗೆ ಡಿಕ್ಕಿ ಹೊಡೆದು, ಸರ್ವೀಸ್ ರಸ್ತೆಗೆ ಉರುಳಿದೆ. ಲಾರಿ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿದ್ದು, ಚಾಲಕ ಪರಾರಿಯಾಗಿದ್ದಾನೆ. ಮೃತರ ವಿವರ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಲಾರಿ ಉರುಳಿದ್ದೇ ತಡ ಲಾರಿಯಲ್ಲಿದ್ದ ಸೋಪಿನ ಬಾಕ್ಸ್ ಗಾಗಿ ಜನರು ಮುಗಿಬಿದ್ದರು. ಬಸ್ ನಲ್ಲಿ ಗಾಯಗೊಂಡು ಚೀರುತ್ತಿದ್ದರೂ ಕಣ್ಣೆತ್ತಿಯೂ ನೋಡಲಿಲ್ಲ. ಕಣ್ಣಮುಂದೆಯೇ ಸೋಪಿನ ಬಾಕ್ಸ್ ಗಳು ನಾಪತ್ತೆಯಾಗುತ್ತಿದ್ದರೂ ಪೊಲೀಸರು ಅಸಹಾಯಕರಾಗಿ ನಿಂತಿದ್ದರು.

ತುಮಕೂರು ಗ್ರಾಮಾಂತರ ಸಿಪಿಐ ರಾಮಕೃಷ್ಣಪ್ಪ, ಪಿಎಸ್ಐ ಲಕ್ಷ್ಮಯ್ಯ ಸ್ಥಳಕ್ಕೆ ಭೇಟಿ ನೀಡಿದರು. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು.












Click it and Unblock the Notifications