Breaking; ತಿಪಟೂರಿನಿಂದ ಭಾರತ್ ಜೋಡೋ ಯಾತ್ರೆ ಆರಂಭ
ತುಮಕೂರು, ಅಕ್ಟೋಬರ್ 09; ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ತಿಪಟೂರಿನಿಂದ ಆರಂಭವಾಗಿದೆ. ಭಾನುವಾರ ಸಂಜೆ ಚಿಕ್ಕನಾಯಕನಹಳ್ಳಿಯಲ್ಲಿ ಪಾದಯಾತ್ರೆ ಅಂತ್ಯಗೊಳ್ಳಲಿದೆ.
ಶನಿವಾರ ಭಾರತ್ ಜೋಡೋ ಪಾದಯಾತ್ರೆ ತುಮಕೂರು ಜಿಲ್ಲೆ ತಲುಪಿತ್ತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಡಾ. ಜಿ. ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸೇರಿದಂತೆ ವಿವಿಧ ನಾಯಕರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಭಾನುವಾರ ತಿಪಟೂರಿನ ಕೆ. ಬಿ. ಕ್ರಾಸ್ನಿಂದ ಪಾದಯಾತ್ರೆ ಆರಂಭಗೊಂಡಿದೆ. ಹಲವಾರು ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕುತ್ತಿದ್ದಾರೆ. ಮಹಿಳೆಯರು, ಮಕ್ಕಳು ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಭೇಟಿ ಮಾಡಿದರು.

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ತಿಪಟೂರಿನ ಕೆಬಿ ಕ್ರಾಸ್ನಿಂದ ಆರಂಭವಾಗಿದೆ. 11 ಗಂಟೆಗೆ ಯಾತ್ರೆ ಚಿಕ್ಕನಾಯಕನಹಳ್ಳಿ ತಲುಪಲಿದ್ದು, ಕರ್ನಾಟಕ ಭವನದಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ.
4 ಗಂಟೆಗೆ ಪಾದಯಾತ್ರೆ ಮತ್ತೆ ಆರಂಭವಾಗಲಿದೆ. ಸಂಜೆ 7 ಗಂಟೆಗೆ ತುಮಕೂರಿನ ಮಾಲಿಗೇನಹಳ್ಳಿಯಲ್ಲಿ ವಿರಾಮ ಇರಲಿದ್ದು, ಇಂದು ರಾತ್ರಿ ಬರಕನಹಾಳು ಗೇಟ್ನಲ್ಲಿ ರಾತ್ರಿ ವಾಸ್ತವ್ಯ ಇರಲಿದೆ.
ಗುರುವಾರ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮಂಡ್ಯದ ಪಾಂಡವಪುರದಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕುವ ಮೂಲಕ ಪಾದಯಾತ್ರೆಗೆ ಶಕ್ತಿ ತುಂಬಿದ್ದರು. ಮಂಡ್ಯ ಜಿಲ್ಲೆಯಿಂದ ಪಾದಯಾತ್ರೆ ತುಮಕೂರು ಜಿಲ್ಲೆಗೆ ಆಗಮಿಸಿದೆ.
ಶನಿವಾರ ತುರುವೇಕೆರೆಯ ಅರಳೀಕೆರೆಪಾಳ್ಯದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ, "ರಾಜ್ಯದಲ್ಲಿ ಮುಂದಿನ ವರ್ಷ ನಮ್ಮದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರಲಿದ್ದು, 2023ರ ಚುನಾವಣೆಯಲ್ಲಿ ಬಹುಮತದೊಂದಿಗೆ ಗೆಲುವು ಸಾಧಿಸಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.












Click it and Unblock the Notifications