ಮಧುಗಿರಿ ಬೆಟ್ಟದಲ್ಲಿ ಕಾಣೆಯಾದ ಟೆಕ್ಕಿ ಗೌರವ್ ಬಚಾವ್!
ಮಧುಗಿರಿ, ಜೂನ್ 23: ಇಡೀ ಏಷ್ಯಾದಲ್ಲೇ ಅತಿ ದೊಡ್ಡ ಏಕಶಿಲಾ ಬೆಟ್ಟವೆಂಬ ಹೆಗ್ಗಳಿಕೆಯ ಮಧುಗಿರಿ ಬೆಟ್ಟವು ಚಾರಣಿಗರನ್ನು ಸದಾ ಕೈಬೀಸಿ ಕರೆಯುತ್ತಿರುತ್ತದೆ. ಪಡ್ಡೆ ಹುಡುಗರಿಗಂತೂ 'ಒಂದು ಕೈ ನೋಡೇ ಬಿಡುವ' ಅನ್ನಿಸುವಷ್ಟು ಸೆಳೆತ ಆ ಬೆಟ್ಟದತ್ತ. ಮಧುಗಿರಿ ಬೆಟ್ಟವು 3,930 ಅಡಿ ಎತ್ತರದಲ್ಲಿದ್ದು, ಬೆಂಗಳೂರಿನಿಂದ ನೂರಾರು ಕಿಮೀ ದೂರದಲ್ಲಿದೆ.
ತುಮಕೂರು ಜಿಲ್ಲೆಯಲ್ಲಿರುವ ಮಧುಗಿರಿ ಬೆಟ್ಟದಲ್ಲಿ ನಿನ್ನೆ ವೀಕೆಂಡ್ ಆಚರಿಸಲು ದೆಹಲಿ ಮೂಲದ ಬೆಂಗಳೂರಿನ ಟೆಕ್ಕಿ ಮತ್ತು ಆತನ ಮತ್ತೊಬ್ಬ ಇಂಜಿನಿಯರ್ (ರಕ್ಷಣಾ ಸಚಿವಾಯಲದಲ್ಲಿ ಇಂಜಿನಿಯರ್) ಮಿತ್ರ ನಿನ್ನೆ ಸಂಜೆ ವೇಳೆಯಲ್ಲಿ ಬೆಟ್ಟ ಹತ್ತುವ ದುಸ್ಸಾಹಸಕ್ಕೆ ಮುಂದಾಗಿದ್ದಾರೆ.
22 ವರ್ಷದ ಗೌರವ್ ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಟೆಕ್ಕಿ ಬೆಟ್ಟ ಏರುತ್ತಾ ಏರುತ್ತಾ ಏಕಾಂಗಿಯಾಗಿ ಬಿಟ್ಟು ಕೆಳಗಿಳಿದು ಬರಲೂ ಆಗದೆ ಇಡೀ ರಾತ್ರಿ ಪ್ರಾಣಭಯದಲ್ಲಿ ಕಳೆದಿದ್ದಾರೆ. ಮೊದಲೇ ಮಧುಗಿರಿ ಬೆಟ್ಟದ ತಪ್ಪಲಿನಲ್ಲಿ ಕರಡಿಗಳು ಹೆಚ್ಚಾಗಿವೆ. ಆದರೆ ಗೌರವ್ ಅದೃಷ್ಟ ಒಂದಷ್ಟು ತರಚಿದ ಗಾಯಗಳೊಂದಿಗೆ ಪಾರಾಗಿ ಬಂದಿದ್ದಾರೆ.
ಪಾರು ಮಾಡಿದ್ದು ಯಾರು? :
ಗೌರವ್ ಮತ್ತು ಪ್ರಿಯಾಂಕ್ ಶರ್ಮಾ ಇಬ್ಬರೂ ನಿನ್ನೆ ಬೆಳಗ್ಗೆಯೆಲ್ಲಾ ಮಧುಗಿರಿ ಸುತ್ತಮುತ್ತ ಓಡಾಡಿಕೊಂಡಿದ್ದರು. ಆ ವೇಳೆಯಲ್ಲೇ ಮಧುಗಿರಿ ಬೆಟ್ಟದತ್ತ ಇಬ್ಬರೂ ಮೋಹಗೊಂಡಿದ್ದಾರೆ. ಏನೇ ಆಗಲಿ ಬೆಟ್ಟವನ್ನು ತುಳಿಯಲೇ ಬೇಕು ಎಂದು ನಿರ್ಧರಿಸಿದವರೇ ಮಧ್ಯಾಹ್ನದ ವೇಳೆಗೆ ಮೆಟ್ಟದಡಿಗೆ ಬಂದು ಬೆಟ್ಟವೇರುವ ಲೆಕ್ಕಾಚಾರ ಹಾಕಿದ್ದಾರೆ. ತುಸು ಹೆಚ್ಚು ಸಾಹಸಿಗ ಗೌರವ್ ಮುಂದುಮುಂದು ಹೋಗಿ ಸರಾಗವಾಗಿ ಬೆಟ್ಟವೇರುತ್ತಾ ಸಾಗಿದ್ದಾನೆ. ಆದರೆ ಪ್ರಿಯಾಂಕ ಸಂಜೆಯಾಗುತ್ತಿದ್ದಂತೆ ಅರ್ಧ ಬೆಟ್ಟ ತಲುಪಿದ್ದಾಗ ಬೆಟ್ಟ ಹತ್ತುವುದು ತನ್ನ ಕೈಲಾಗದು ಎಂದು ನಿರ್ಧರಿಸಿ, ಕೆಳಗಿಳಿಯುತ್ತಾ ಬಂದಿದ್ದಾರೆ.
ಆದರೆ ಅತ್ತ ಗೌರವ್, ಪ್ರಿಯಾಂಕನಿಂದ ತುಂಬಾ ಮೇಲಕ್ಕೇ ಹೋಗಿ ನಾಟ್ ರೀಚಬಲ್ ಆಗಿದ್ದಾರೆ. ಕತ್ತಲು ಕವಿಯತೊಡಗಿದಂತೆ ಗೌರವ್ ದಿಕ್ಕುತಪ್ಪಿದ್ದಾನೆ. ಜತೆಗೆ, ಎಲ್ಲೋ ಜಾರಿಬಿದ್ದಿದ್ದಾನೆ. ಮಿತ್ರ ಪ್ರಿಯಾಂಕನ ಕೈಗೂ ಸಿಕ್ಕಿಲ್ಲ.
ಇತ್ತ ಬೆಟ್ಟದಿಂದಿಳಿದುಬಂದ ಪ್ರಿಯಾಂಕ್, ಗೌರವ್ ಅಪಾಯದಲ್ಲಿ ಸಿಲುಕಿರುವುದನ್ನು ಗ್ರಹಿಸಿದ್ದಾಣೆ. ತಡಮಾಡದೆ ದಾರಿಯಲ್ಲಿ ಎದುರಾದ ಊರಿನ ಜನಕ್ಕೂ ಮತ್ತು ಪೊಲೀಸ್ ಠಾಣೆಗೆ ತೆರಳಿ ವಿಷಯ ತಿಳಿಸಿದ್ದಾನೆ.
ಎಚ್ಚೆತ್ತ ಪೊಲೀಸರು ತಡಮಾಡದೆ ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿ, ಕಾರ್ಗತ್ತಿನಲ್ಲೇ ಕಾರ್ಯಾಚರಣೆಗಿಳಿದಿದ್ದಾರೆ. ಅಷ್ಟು ದೊಡ್ಡ ಬೆಟ್ಟದಲ್ಲಿ ಯಾವ ದಿಕ್ಕಿನಲ್ಲಿ ಅಂತ ಹುಡುಕುವುದೂ!? ಆದರೂ ಪ್ರಯತ್ನ ಜಾರಿಯಲ್ಲಿಟ್ಟಿದ್ದಾರೆ. ಈ ಮಧ್ಯೆ ಪ್ರಿಯಾಂಕ್, ಗೆಳೆಯ ಗೌರವನನ್ನು ಸಂಪರ್ಕಿಸಲು ಮೊಬೈಲ್ ಮೂಲಕ ಸತತವಾಗಿ ಪ್ರಯತ್ನಿಸಿದ್ದಾನೆ. ಕೊನೆಗೊಮ್ಮೆ ಫೋನ್ ರಿಂಗಾಗಿದೆ.

ತಕ್ಷಣ ಅವನಿಗೆ ಧೈರ್ಯ ತುಂಬುತ್ತಾ 'ಪೊಲೀಸರೆಲ್ಲಾ ಬಂದಿದ್ದಾರೆ. ನೂರಾರು ಮಂದಿ ಬೆಟ್ಟದಲ್ಲಿದ್ದೇವೆ. ಏನೂ ವರಿ ಮಾಡ್ಕೋಬೇಡ. ಸ್ವಲ್ಪ ಧೈರ್ಯ ತಂದುಕೋ' ಎಂದು ಹೇಳಿ ಗೆಳೆಯನಿಗೆ ಧೈರ್ಯ ತುಂಬಿದ್ದಾನೆ. ಮಾತಿನ ಮಧ್ಯೆ ತಾನೊಂದು ದೊಡ್ಡದಾದ ಮರದ ಕೆಳಗೆ ಇರುವನೆಂದು ಗೌರವ್ ತನ್ನ ಪಡಿಪಾಟಲನ್ನು ವಿವರಿಸಿದ್ದಾನೆ.
ಆ ಸುದ್ದಿ ಊರಿನವರ ಕಿವಿಗೆ ಬಿದ್ದಿದ್ದೇ ತಡ. ಭಡವ ಬದುಕಿದ್ದಾನೆ ಎಂದು ಸಮಾಧಾನಗೊಂಡು, ಊರವರೆಲ್ಲಾ ಪೊಲೀಸರು ಮತ್ತು ಅಹ್ನಿಶಾಮಕ ಸಿಬ್ಬಂದಿಯ ಜತೆ ಬೆಟ್ಟವನ್ನು ಇಂಚಿಂಚೂ ಅಳೆಯತೊಡಗಿದ್ದಾರೆ. ಕೊನೆಗೆ ಬೆಳಗಿನ ಜಾವದ ವೇಳೆಗೆ ಗೌರವ್ ಊರವರ ಕಣ್ಣಿಗೆ ಬಿದ್ದಿದ್ದಾನೆ.
ತೀವ್ರವಾಗಿ ಬಳಲಿದ್ದ ಗೌರವ್ ನನ್ನು ಸ್ಟ್ರೆಚರ್ ಮೇಲೆ ಕೆಳಗೆ ತಂದು ಆ್ಯಂಬುಲೆನ್ಸ್ ವಾಹನದಲ್ಲಿ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದ್ದಾರೆ. ಗೌರವ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಇತ್ತ ಗೌರವನ ಗೆಳೆಯ ಪ್ರಿಯಾಂಕ್ ಶರ್ಮಾ ಊರಿನವರ ಕಡೆ ತಿರುಗಿ ಕೈಮುಗಿದು, ಕೃತಜ್ಞತೆ ಸಲ್ಲಿಸಿದ್ದಾನೆ. (ಚಿತ್ರ ಕೃಪೆ)












Click it and Unblock the Notifications