ತುಮಕೂರು ಸಿದ್ದಗಂಗಾ ಮಠಕ್ಕೆ ಕೆ. ಅಣ್ಣಾಮಲೈ ಭೇಟಿ
ತುಮಕೂರು, ಫೆಬ್ರವರಿ 27 : ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದರು. ಸಿದ್ದಲಿಂಗ ಮಹಾಸ್ವಾಮಿಗಳ ಆಶೀರ್ವಾದ ಪಡೆದ ಅವರು, ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು.
ಗುರುವಾರ ಕೆ. ಅಣ್ಣಾಮಲೈ ಅವರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದರು. ಪರಮ ಪೂಜ್ಯ ಡಾ. ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ನಮನ ಸಲ್ಲಿಸಿದರು. ಸಿದ್ದಲಿಂಗ ಮಹಾಸ್ವಾಮಿಗಳ ಆಶೀರ್ವಾದವನ್ನು ಪಡೆದರು, ಮಾತುಕತೆ ನಡೆಸಿದರು.
ಸಿದ್ದಗಂಗಾ ಮಠದ ವಿದ್ಯಾರ್ಥಿಗಳ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಅಣ್ಣಾಮಲೈ ಅವರು ಮಕ್ಕಳ ಜೊತೆ ಸಂವಾದ ನಡೆಸಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಮಠದ ಫೇಸ್ಬುಕ್ ಪುಟದಲ್ಲಿ ಅಣ್ಣಾಮಲೈ ಭೇಟಿಯ ಚಿತ್ರಗಳನ್ನು ಶೇರ್ ಮಾಡಲಾಗಿದೆ.

ಕೆ. ಅಣ್ಣಾಮಲೈ 2011ರ ಕರ್ನಾಟಕ ಬ್ಯಾಚ್ ಐಪಿಎಸ್ ಅಧಿಕಾರಿ. ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿ ಕರ್ತವ್ಯ ನಿರ್ವಹಣೆ ಮಾಡುವಾಗಲೇ 2019ರ ಮೇನಲ್ಲಿ ಅವರು ರಾಜೀನಾಮೆ ಸಲ್ಲಿಸಿದ್ದರು. ಕೇಂದ್ರ ಸರ್ಕಾರ ರಾಜೀನಾಮೆ ಅಂಗೀಕರಿಸಿತ್ತು.
ಅಣ್ಣಾಮಲೈ ಕರ್ನಾಟಕದ 'ಸಿಂಗಂ' ಎಂದೇ ಖ್ಯಾತಿ ಪಡೆದಿದ್ದಾರೆ. ಐಪಿಎಸ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ಅಣ್ಣಾಮಲೈ ತಮಿಳುನಾಡಿನ ರಾಜಕೀಯಕ್ಕೆ ಪ್ರವೇಶ ಮಾಡಲಿದ್ದಾರೆ ಎಂಬ ಸುದ್ದಿಗಳಿವೆ.
ರಾಜೀನಾಮೆ ನೀಡಿದ ಬಳಿಕ ಮಾತನಾಡಿದ್ದ ಅಣ್ಣಾಮಲೈ, "ನಾನು ಸರ್ವೀಸ್ಗೆ ಸೇರಿ 9 ವರ್ಷಗಳು ಕಳೆದವು. ಆದರೆ, ನಾನು ನನ್ನ ಕುಟುಂಬಕ್ಕೆ ಸಮಯ ಕೊಡಲು ಆಗುತ್ತಿಲ್ಲ. ನಾನು ಈ ವೃತ್ತಿಗೆ ಸೇರಿದ ನಂತರ ಒಂದೇ ಒಂದು ಮದುವೆ ಅಟೆಂಡ್ ಮಾಡಿದ್ದೇನೆ" ಎಂದು ಹೇಳಿದ್ದರು.
"ನಾನು ಇಲ್ಲಿ ಇರುವುದಕ್ಕೆ ಕೆಲವು ಪ್ರಮುಖರು ಕಾರಣರಾಗಿದ್ದರು. ಆದರೆ, ಕೊನೆ ಪಕ್ಷ ಅವರ ಅಂತ್ಯಕ್ರಿಯೆಗೂ ಹೋಗುವುದಕ್ಕೆ ಆಗಲಿಲ್ಲ. ತಂದೆ-ತಾಯಿ, ಬಂಧು-ಬಳಗ ಎಲ್ಲಾ ಊರಲ್ಲಿ ಇದ್ದಾರೆ. ನಾನು ಇಲ್ಲಿದ್ದು, ಏನು ಮಾಡಲಿ" ಎಂದು ಪ್ರಶ್ನಿಸಿದ್ದರು.












Click it and Unblock the Notifications