'ನಮ್ಮ ಕುಟುಂಬವನ್ನು ನೆನೆಸದಿದ್ರೆ ಬಿಜೆಪಿಯವರಿಗೆ ತಿಂದಿದ್ದು ಅರಗಲ್ಲ'
ತುಮಕೂರು, ಅಕ್ಟೋಬರ್ 12: ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹರಿಯಲು ಕುಮಾರಸ್ವಾಮಿ, ರೇವಣ್ಣ ಹಾಗೂ ದೇವೇಗೌಡರು ಅಡ್ಡಿಯಾಗುತ್ತಿದ್ದಾರೆ ಎಂದು ಬಿಜೆಪಿಯವರು ಪದೇ ಪದೇ ಹೇಳ್ತಾರೆ. ಬೆಳಗಾಗೆದ್ದು ನಮ್ಮನ್ನು ನೆನಪು ಮಾಡಿಕೊಳ್ಳದಿದ್ದರೆ ಅವರಿಗೆ ತಿಂದ ಆಹಾರ ಜೀರ್ಣ ಆಗಲ್ಲ ಎಂದು ಲೋಕಪಯೋಗಿ ಸಚಿವ ಎಚ್.ಡಿ.ರೇವಣ್ಣ ಲೇವಡಿ ಮಾಡಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ತುಮಕೂರು ಜಿಲ್ಲೆ ಹಾಗೂ ಮಂಡ್ಯಕ್ಕೆ ಹೇಮಾವತಿ ನೀರನ್ನು ತೆಗೆದುಕೊಂಡು ಹೋಗಬೇಡಿ ಎಂದು ಎಲ್ಲೂ ಹೇಳಿಲ್ಲ. ಹಾಸನಕ್ಕೆ ಕಡಿಮೆಯಾದರೂ ಪರವಾಗಿಲ್ಲ, ತುಮಕೂರು ಜಿಲ್ಲೆಗೆ ಕೊಂಡೊಯ್ಯಿರಿ ಎಂದು ಹೇಳಿದ್ದೇವೆ. ಆದರೆ ಮಾಧ್ಯಮಗಳಲ್ಲಿ ನಾವೇ ತೊಡರುಗಾಲಾಗಿದ್ದೇವೆ ಎಂಬಂತೆ ಬಿಂಬಿಸಲಾಗುತ್ತಿದೆ ಎಂದರು.
ಹಾಸನ : 10 ವರ್ಷದ ರೈಲ್ವೇ ಮೇಲ್ಸೇತುವೆ ಯೋಜನೆಗೆ ಮರುಜೀವ
ಸತ್ಯದ ವರದಿ ಕೊಡಿ. ನಿಮ್ಮ ಘನತೆಯನ್ನು ಉಳಿಸಿಕೊಳ್ಳಿ ಎಂದು ರೇವಣ್ಣ ಹೇಳಿದರು. "ಇವೆಲ್ಲ ಮಾಧ್ಯಮ ಸೃಷ್ಟಿ ಅಲ್ಲ, ಬಿಜೆಪಿ ಶಾಸಕರು ಮತ್ತು ಜನರ ಅಭಿಪ್ರಾಯವನ್ನಷ್ಟೇ ನಾವು ಕೊಟ್ಟಿದ್ದೇವೆ" ಎಂದು ಪತ್ರಕರ್ತರು ಹೇಳಿದರು. ಆಗ ಸಚಿವರು ಮಾಜಿ ಸಂಸದ ಜಿ.ಎಸ್.ಬಸವರಾಜ್ ವಿರುದ್ಧ ಗುಡುಗಿ, ಹೇಮಾವತಿ ಜಲಾಶಯದ ಬೀಗದ ಕೈ ಅವರಿಗೇ ಕೊಟ್ಟು ಬಿಡುತ್ತೇವೆ. ಅವರು ಪುರುಸೊತ್ತಾಗಿದ್ದರೆ ನೀರು ಗಂಟಿ ಕೆಲಸ ಅವರೇ ಮಾಡಲಿ ಎಂದು ತಿರುಗೇಟು ನೀಡಿದರು.
ಕೇಂದ್ರದಲ್ಲಿ ಇವರದ್ದೇ ಸರಕಾರ ಇದೆ. ತಾಕತ್ತಿದ್ದರೆ ನೀರಾವರಿ ಯೋಜನೆಗೆ ಹೆಚ್ಚಿನ ಅನುದಾನ ತರಲಿ ಎಂದು ಸವಾಲು ಹಾಕಿದರು. ಎನ್.ಮಹೇಶ್ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ರೇವಣ್ಣ, ಯಾವ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದಾರೋ ಗೊತ್ತಿಲ್ಲ. ಅವರು ಒಳ್ಳೆಯ ಆಡಳಿತಗಾರ ಎಂದರು.
ಸಚಿವ ಸ್ಥಾನಕ್ಕೆ ಎನ್.ಮಹೇಶ್ ರಾಜೀನಾಮೆ, ಮೈತ್ರಿ ಸರ್ಕಾರಕ್ಕೆ ಪೆಟ್ಟು
ಮಹೇಶ್ ಅವರ ಖಾತೆಗೆ ನೀವು ಹೆಚ್ಚಾಗಿ ಹಸ್ತಕ್ಷೇಪ ಮಾಡಿದ್ದರಿಂದ ಬೇಸತ್ತು ರಾಜೀನಾಮೆ ನೀಡಿದ್ದಾರಂತಲ್ಲ ಎಂದು ಮಾಧ್ಯಮದವರು ಪ್ರಶ್ನಿಸಿದರು. ಆಗ ರೇವಣ್ಣ, ಸಚಿವರಾದ ಸಿ.ಎಸ್.ಪುಟ್ಟರಾಜು, ಎಸ್.ಆರ್.ಶ್ರೀನಿವಾಸ್, ಅರಸೀಕೆರೆ ಶಾಸಕ ಶಿವಲಿಂಗೇಗೌಡ, "ನಿಮಗೆ ಜವಾಬ್ದಾರಿ ಇಲ್ಲ. ನಾವೆಲ್ಲ ಚೆನ್ನಾಗಿಯೇ ಇದ್ದೇವೆ. ನೀವೇ ನಮ್ಮ ನಡುವೆ ಕಿಚ್ಚು ಹಚ್ಚುತ್ತಿದ್ದೀರಿ, ಒಡಕು ಉಂಟು ಮಾಡುತ್ತಿದ್ದೀರಿ" ಎಂದು ಎಲ್ಲರೂ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಕೆಂಡಾಮಂಡಲರಾದರು.
ಅನಿತಾ ಕುಮಾರಸ್ವಾಮಿ ಗೆಲುವಿಗಾಗಿ 'ಬಿ' ಫಾರಂಗೆ ಪೂಜೆ ಸಲ್ಲಿಸಿದ ರೇವಣ್ಣ
ರಾಜೀನಾಮೆ ಅಂಗೀಕಾರ ಆಗಲಿದೆಯೇ ಎಂಬ ಪ್ರಶ್ನೆಗೆ, ದೇವೇಗೌಡರು ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರು ಆ ಬಗ್ಗೆ ನೋಡಿಕೊಳ್ಳುತ್ತಾರೆ. ನನಗೆ ವಹಿಸಿದ ಖಾತೆಯನ್ನಷ್ಟೆ ನೋಡಿಕೊಳ್ಳುತ್ತೇನೆ ಎಂದು ರೇವಣ್ಣ ಉತ್ತರಿಸಿದರು.