ತುಮಕೂರು: ಪ್ರೀತಿಸಿ ಮದುವೆ ಆದ 15 ದಿನದಲ್ಲೇ ಬೀದಿ ಹೆಣವಾದ
ತುಮಕೂರು, ಡಿಸೆಂಬರ್ 19: ತುಮಕೂರು ಜಿಲ್ಲೆಯಲ್ಲಿ ಭೀಕರ ಕೊಲೆಯೊಂದು ಗುರುವಾರ ಸಂಜೆ ವೇಳೆ ನಡೆದಿದೆ. ಪತ್ನಿಯ ಮುಂದೆಯೇ ನವವರನನ್ನು ಆರು ಮಂದಿ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ.
ತುಮಕೂರು ಜಿಲ್ಲೆ ಕೊರಟಗೆರೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಶ್ರೀನಿವಾಸ್ ಮತ್ತು ಆತನ ಪತ್ನಿ ಅಕ್ಷತಾ ಮಧುಗಿರಿಯಿಂದ ಕಾರಿನಲ್ಲಿ ತೆರಳುತ್ತಿದ್ದ ವೇಳೆ ದಾಳಿ ಮಾಡಿದ ಆರು ಜನರ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ.
ಕೊಲೆಯಾದ ಬಾಗಲಕುಂಟೆ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದು. ಕೊಲೆಗೆ ಹಳೆ ದ್ವೇಷ ಕಾರಣ ಎನ್ನಲಾಗುತ್ತಿದ್ದು, ಆತನ ಸ್ನೇಹಿತರೇ ಕೊಲೆ ಮಾಡಿದ್ದಾಗಿ ಅನುಮಾನಿಸಲಾಗಿದೆ.

ಬಾಗಲಗುಂಟೆಯಲ್ಲಿ ಹೂ ವ್ಯಾಪಾರ ಮಾಡುತ್ತಿದ್ದ ಶ್ರೀನಿವಾಸ್ ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ಯುವತಿ ಅಕ್ಷತಾಳನ್ನು ಪ್ರೀತಿಸಿದ್ದ ಶ್ರೀನಿವಾಸ್ ಹದಿನೈದು ದಿನಗಳ ಹಿಂದಷ್ಟೆ ರಿಜಿಸ್ಟರ್ ಮದುವೆ ಆಗಿದ್ದ. ನಂತರ ಎರಡೂ ಕುಟುಂಬದವರ ರಾಜಿ ಪಂಚಾಯಿತಿ ಮಾಡಿ ನವವಿವಾಹತರನ್ನು ಮನೆಗೆ ಸೇರಿಸಿಕೊಂಡಿದ್ದರು.
ಮದುವೆಯಾದ ಬಳಿಕ ಇಂದು ಮೊದಲ ಬಾರಿಗೆ ಹುಟ್ಟೂರಿಗೆ ಬಂದಿದ್ದ ಶ್ರೀನಿವಾಸ್ ಹಿಂದುರಿಗಿ ಬೆಂಗಳೂರಿಗೆ ತೆರಳುವ ವೇಳೆ ಕೊರಟಗೆರೆ ಪೋಲಿಸ್ ಠಾಣೆ ಸಮೀಪದ ಜಿ ನಾಗೇನಹಳ್ಳಿ ಬಳಿ ಕಾರಿನಲ್ಲಿ ಬಂದ ಆರು ಮಂದಿ ಗುಂಪು ಮಾರಕಾಸ್ತ್ರಗಳಿಂದ ಶ್ರೀನಿವಾಸ್ ಮೇಲೆ ದಾಳಿ ಮಾಡಿ ಕೊಚ್ಚಿ ಕೊಲೆ ಮಾಡಿದ್ದಾರೆ. ಆತನ ಪತ್ನಿಯನ್ನು ಆಕೆಯ ಮನೆಯವರು ಕರೆದುಕೊಂಡು ಹೋಗಿದ್ದಾರೆ.
ಕೊರಟಗೆರೆ ಪೋಲಿಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ.












Click it and Unblock the Notifications