ತುಮಕೂರು : ಕೊಂಡ ಹಾಯುವ ವೇಳೆ 30 ಜನರಿಗೆ ಗಾಯ
ತುಮಕೂರು, ಮಾರ್ಚ್ 08 : ಕೊಂಡಹಾಯುವ ವೇಳೆ ಆಯ ತಪ್ಪಿ ಬಿದ್ದ ಯುವಕನನ್ನು ರಕ್ಷಣೆ ಮಾಡಲು ಹೋಗಿ 30ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ತುಮಕೂರಿನಲ್ಲಿ ನಡೆದಿದೆ. ಗಾಯಗೊಂಡವರಿಗೆ ಬೆಂಗಳೂರು ಮತ್ತು ತುಮಕೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ತುಮಕೂರು ತಾಲೂಕಿನ ಹೆತ್ತೇನಹಳ್ಳಿ ಗ್ರಾಮದ ಗ್ರಾಮ ದೇವತೆ ಜಾತ್ರೆಯ ವೇಳೆ ಈ ದುರ್ಘಟನೆ ನಡೆದಿದೆ. ಶಿವರಾತ್ರಿ ದಿನದಿಂದು ಗ್ರಾಮ ದೇವರ ಜಾತ್ರೆ ನಡೆದಿತ್ತು. ರಾತ್ರಿಯಿಂದ ಕೊಂಡ ಹಾಯುವ ಸೇವೆ ನಡೆಯುತ್ತಿತ್ತು. [ಕೊಡಗಿನಲ್ಲೊಂದು ಗುಡಿಗೋಪುರವಿಲ್ಲದ ದೇಗುಲ!]

ಮಂಗಳವಾರ ಮುಂಜಾನೆ 4 ಗಂಟೆ ಸುಮಾರಿಗೆ ಕೊಂಡಕ್ಕೆ ಯುವಕನೊಬ್ಬ ಆಯತಪ್ಪಿ ಬಿದ್ದಿದ್ದ. ಆತನನ್ನು ರಕ್ಷಣೆ ಮಾಡಲು ಜನರು ಹೋಗುವ ವೇಳೆ ನೂಕುನುಗ್ಗಲು ಸಂಭವಿಸಿ 30ಕ್ಕೂ ಅಧಿಕ ಜನರು ಕೊಂಡಕ್ಕೆ ಬಿದ್ದು, ಗಾಯಗೊಂಡರು. ಗ್ರಾಮ ದೇವರ ಜಾತ್ರೆಗಾಗಿ ಹೆತ್ತೇನಹಳ್ಳಿ ಸುತ್ತಮುತ್ತಲಿನ 7 ಗ್ರಾಮಗಳ ಸಾವಿರಾರು ಜನರು ಆಗಮಿಸಿದ್ದರು. [ಈಡೇನಹಳ್ಳಿ ಗ್ರಾಮಸ್ಥರನ್ನು ಒಂದುಗೂಡಿಸಿದ ಹನುಮಂತ]
ಗಾಯಗೊಂಡವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಬೆಂಗಳೂರಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ತುಮಕೂರು ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.












Click it and Unblock the Notifications