ಶಬರಿಮಲೆಯಲ್ಲಿ ಮುಂದುವರೆದ ಹಿಂಸಾಚಾರ, 1400 ಮಂದಿ ಬಂಧನ
ತಿರುವನಂತಪುರಂ, ಜನವರಿ 04: ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶದ ಬೆನ್ನಲ್ಲೆ ಕೇರಳದಲ್ಲಿ ಹಿಂಸಾಚಾರ ಹೆಚ್ಚಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು 1400 ಜನರನ್ನು ಶುಕ್ರವಾರ ಬಂಧಿಸಿದ್ದಾರೆ.
ಪರಿಸ್ಥಿತಿಯನ್ನು ಹತೋಟಿಗೆ ತರಲು, ಮುನ್ನೆಚ್ಚರಿಕಾ ಕ್ರಮವಾಗಿ ಇಷ್ಟು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ನಿನ್ನೆ ನಡೆದ ಬಂದ್ ಸಂದರ್ಭದಲ್ಲಿ ಹಿಂಸಾಚಾರ ನಡೆದು ಹಲವರು ಗಾಯಗೊಂಡಿದ್ದರು. ಒಬ್ಬ ಬಿಜೆಪಿ ಕಾರ್ಯಕರ್ತ ಹತನಾಗಿದ್ದ.
ಕೇರಳದಲ್ಲಿ ಪ್ರತಿಭಟನೆ ಹಿಂಸಾಚಾರ ಹೆಚ್ಚಾಗಿದ್ದು, ಭಾನುವಾರ ನಡೆಯಬೇಕಿದ್ದ ಮೋದಿ ಅವರ ಕೇರಳ ಭೇಟಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಮೋದಿ ಅವರ ಕಾರ್ಯಕ್ರಮ ಮುಂದೂಡಲ್ಪಟ್ಟಿರುವುದು ಇತರ ಕಾರಣಗಳಿಗಾಗಿಯೇ ಹೊರತು ಹಿಂಸಾಚಾರ, ಪ್ರತಿಭಟನೆಯ ಕಾರಣಕ್ಕೆ ಅಲ್ಲ ಎಂದು ಕೇರಳ ಬಿಜೆಪಿ ಹೇಳಿದೆ.

ಶುಕ್ರವಾರ ಬೆಳಿಗಿನ ಜಾವ ಮಲಬಾರ್ ದೇವಸಂ ಬೋರ್ಡ್ನ ಸದಸ್ಯ ಶಶಿಕುಮಾರ್ ಎಂಬುವರ ಮನೆಯ ಮೇಲೆ ಕಚ್ಚಾ ಬಾಂಬ್ ದಾಳಿ ಸಹ ಆಗಿದೆ. ನಿನ್ನೆ ಸಹ ಸಿಪಿಐಎಂ ಕಚೇರಿ ಮೇಲೆ ಕಚ್ಚಾ ಬಾಂಬ್ ದಾಳಿ ಆಗಿತ್ತು. ಗುರುವಾರದಂದು ಬಿಜೆಪಿ ಮತ್ತು ಕಮ್ಯೂನಿಸ್ಟ್ ಪಕ್ಷದ ಕಾರ್ಯಕರ ಮನೆಗಳ ಮೇಲೂ ದಾಳಿಗಳಾಗಿವೆ.
ಜನವರಿ 1 ರ ತಡರಾತ್ರಿ 3:45 ಕ್ಕೆ ಇಬ್ಬರು ಮಹಿಳೆಯರು ಅಯ್ಯಪ್ಪ ದೇವಾಲಯವನ್ನು ಪ್ರವೇಶಿಸಿದ್ದರು ಇದು ಕೇರಳದಲ್ಲಿ ಪ್ರತಿಭಟನೆಗೆ ಕಾರಣವಾಗಿತ್ತು. ನಿನ್ನೆ ರಾತ್ರಿ ಸಹ ಶ್ರೀಲಂಕಾದ ಮಹಿಳೆ ಒಬ್ಬರು ದೇವಾಲಯ ಪ್ರವೇಶಿಸಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಕೇರಳದಲ್ಲಿ ಪ್ರತಿಭಟನೆಗಳು ಇನ್ನೂ ಹೆಚ್ಚಾಗುವ ಆತಂಕ ಇದೆ. ಹಾಗಾಗಿಯೇ ಮುನ್ನೆಚ್ಚರಿಕಾ ಕ್ರಮವಾಗಿ 1400 ಜನರನ್ನು ಬಂಧಿಸಲಾಗಿದೆ.












Click it and Unblock the Notifications