ಫೋನ್ ನಲ್ಲಿ ಕೇಂದ್ರ ಸಚಿವರಿಗೆ ಬೆದರಿಕೆ; ಸರಕಾರಿ ನೌಕರ ಕೇರಳ ಪೊಲೀಸರ ವಶಕ್ಕೆ
ಕೋಳಿಕ್ಕೋಡ್ (ಕೇರಳ), ಜೂನ್ 5: ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಮುರಳೀಧರನ್ ಅವರಿಗೆ ಫೋನ್ ಮೂಲಕ ಬೆದರಿಕೆ ಒಡ್ಡಿದ್ದ ವ್ಯಕ್ತಿಯನ್ನು ಕೇರಳ ಪೊಲೀಸರು ಕೋಳಿಕ್ಕೋಡ್ ನಲ್ಲಿ ಬಂಧಿಸಿದ್ದಾರೆ. ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಸೈಯದ್ ಮಹಮ್ಮದ್ ಬಂಧಿತ ಆರೋಪಿ. ಆತ ಕೇಂದ್ರ ಅಬಕಾರಿ ಇಲಾಖೆ ಸಿಬ್ಬಂದಿ.
ಮಂಗಳವಾರ ರಾತ್ರಿ ಕೋಳಿಕ್ಕೋಡ್ ನಲ್ಲಿರುವ ಪೊಲೀಸ್ ಕಂಟ್ರೋಲ್ ರೂಮ್ ಗೆ ಫೋನ್ ಮಾಡಿ, ಬೆದರಿಕೆ ಹಾಕಿದ್ದ. ಆ ನಂತರ ಕೋಳಿಕ್ಕೋಡ್ ಪೊಲೀಸರು ತಿರುವನಂತಪುರಂನ ಬಿಎಸ್ ಎನ್ ಎಲ್ ಸಿಬ್ಬಂದಿ ಹೆಸರಲ್ಲಿ ಆ ಸಂಖ್ಯೆ ಇದ್ದದ್ದು ಪತ್ತೆ ಹಚ್ಚಿದರು. ಸ್ಥಳೀಯ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ.
ಆಗ ಆತ, ನಾಲ್ಕು ವರ್ಷದ ಹಿಂದೆ ಹೈದರಾಬಾದ್ ನಲ್ಲಿ ತರಬೇತಿ ಕಾರ್ಯಕ್ರಮಕ್ಕೆ ತೆರಳಿದ್ದೆ. ಅಲ್ಲಿ ವ್ಯಕ್ತಿಯೊಬ್ಬರ ಪರಿಚಯ ಆಯಿತು. ನನ್ನ ಹೆಸರಲ್ಲಿ ಮೊಬೈಲ್ ಸಂಪರ್ಕ ಪಡೆದು, ಸಿಮ್ ಕಾರ್ಡ್ ಅನ್ನು ಅವನಿಗೆ ನೀಡಿದೆ ಎಂದು ತಿಳಿಸಿದ್ದಾನೆ. ಈ ಅಧಿಕಾರಿಗಳಿಗೆ ಮೂಲಭೂತ ಸಂಘಟನೆಗಳೊಂದಿಗೆ ಸಂಪರ್ಕ ಇದೆಯಾ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಆನ್ ಲೈನ್ ಪ್ರೊಫೈಲ್ ಮತ್ತಿತರ ವಿವರ ಕಲೆ ಹಾಕುತ್ತಿದ್ದಾರೆ. ಮೊಬೈಲ್ ಫೋನ್ ವಶಕ್ಕೆ ಪಡೆದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.












Click it and Unblock the Notifications