ಶಬರಿಮಲೆ ಬಾಗಿಲು ತೆರೆಯಲ್ಲ; ಭಕ್ತರಿಗೆ ಇಲ್ಲ ಅಯ್ಯಪ್ಪನ ದರ್ಶನ
ತಿರುವನಂತಪುರಂ, ಜೂನ್ 11 : ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದ ಬಾಗಿಲು ತೆರೆಯದಿರಲು ತೀರ್ಮಾನ ಕೈಗೊಳ್ಳಲಾಗಿದೆ. ಲಾಕ್ ಡೌನ್ ಪರಿಣಾಮ ಬಾಗಿಲು ಮುಚ್ಚಿದ್ದ ದೇಶದ ವಿವಿಧ ದೇವಾಲಯಗಳಲ್ಲಿ ಷರತ್ತುಗಳ ನಡುವೆ ದೇವರ ದರ್ಶನ ಪಡೆಯಲು ಅನುಮತಿ ನೀಡಲಾಗಿದೆ.
Recommended Video
ಗುರುವಾರ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದ ಅರ್ಚಕರು ಮತ್ತು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಸಭೆ ನಡೆಯಿತು. ಕೇರಳದ ದೇವಸ್ವಂ ಖಾತೆ ಸಚಿವ ಕಡಕಂಪಲ್ಲಿ ಸುರೇಂದ್ರನ್ ಸಹ ಸಭೆಯಲ್ಲಿ ಉಪಸ್ಥಿತರಿದ್ದರು.

ತಿಂಗಳ ಪೂಜೆಯಾಗಿ ಸದ್ಯಕ್ಕೆ ಅಯ್ಯಪ್ಪಸ್ವಾಮಿ ದೇವಾಲಯದ ಬಾಗಿಲು ತೆರೆಯುವುದು ಬೇಡ ಎಂದು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ದೇವಾಲಯದಲ್ಲಿ ನಡೆಯಬೇಕಿದ್ದ ಜಾತ್ರೆಯನ್ನು ರದ್ದುಗೊಳಿಸಲು ಸಭೆಯಲ್ಲಿ ಒಪ್ಪಿಗೆ ಸಿಕ್ಕಿತು.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಕಾರಣ ಸಾಮಾಜಿಕ ಅಂತರ ಕಾಪಾಡುವುದು ಸೇರಿದಂತೆ ವಿವಿಧ ಮಾರ್ಗಸೂಚಿಗಳನ್ನು ಶಬರಿಮಲೆಯಲ್ಲಿ ಪಾಲನೆ ಮಾಡುವುದು ಕಷ್ಟವಾಗಲಿದೆ. ಆದ್ದರಿಂದ, ಸಾರ್ವಜನಿಕರಿಗೆ ದೇವಾಲಯಕ್ಕೆ ಪ್ರವೇಶವನ್ನು ಮುಂದಿನ ಆದೇಶದ ತನಕ ನಿರಾಕರಿಸಲಾಗಿದೆ.
ಜೂನ್ 14ರಂದು ಶಬರಿಮಲೆಯಲ್ಲಿ ಮಾಸಿಕ ಪೂಜೆ ನಡೆಯಬೇಕಿತ್ತು. ದೇವಾಲಯದ ಬಾಗಿಲು ತೆರೆದರೆ ಕೇರಳ ಮಾತ್ರವಲ್ಲ ಅಕ್ಕಪಕ್ಕದ ರಾಜ್ಯಗಳಿಂದ ಸಹ ಭಕ್ತರು ಆಗಮಿಸುತ್ತಾರೆ. ಇದರಿಂದಾಗಿ ಕೊರೊನಾ ವೈರಸ್ ಸೋಂಕು ಹರಡುವ ಭೀತಿ ಇದೆ.












Click it and Unblock the Notifications