ಶಬರಿಮಲೆಯಲ್ಲಿ ಭುಗಿಲೆದ್ದ ಆಕ್ರೋಶ: ಇಂದು ಕೇರಳದಲ್ಲಿ ಮುಷ್ಕರ
Recommended Video

ತಿರುವನಂತಪುರಂ, ಅಕ್ಟೋಬರ್ 18: ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶವನ್ನು ಖಂಡಿಸಿ ಕೇರಳದಾದ್ಯಂತ ಇಂದು 12 ಗಂಟೆಗಳ ಕಾಲ ಮುಷ್ಕರ ನಡೆಸಲು ಶಬರಿಮಲೆ ರಕ್ಷಣಾ ಸಮಿತಿ ನಿರ್ಧರಿಸಿದೆ.
ಋತುಮತಿಯಾಗುವ ವಯಸ್ಸಿನ ಹೆಣ್ಣುಮಕ್ಕಳಿಗೆ ಕೇರಳದ ಶಬರಿಮಲೆಯ ಅಯ್ಯಪ್ಪ ದೇವಾಲಯದಲ್ಲಿದ್ದ ನಿರ್ಬಂಧವನ್ನು ತೆರವುಗೊಳಿಸಿ, ಸರ್ವೋಚ್ಚ ನ್ಯಾಯಾಲಯ ನೀಡಿದ ಐತಿಹಾಸಿಕ ತೀರ್ಪನ್ನು ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಬುಧವಾರದಿಂದ ದೇವಾಲಯವನ್ನು ಮತ್ತೆ ತೆರೆಯಲಾಗಿದ್ದು, ದೇವಾಲಯ ಪ್ರವೇಶಿಸಲು ಯತ್ನಿಸಿದ ಮಹಿಳೆಯರನ್ನು ತಡೆದ ಘಟನೆ ನಡೆಯಿತು. ಈ ಕಾರಣದಿಂದಲೇ ಬುಧವಾರ ಶಬರಿಮಲೆಯಲ್ಲಿ ಬಿಗಿಬಂದೋಬಸ್ತ್ ನಿಯೋಜಿಸಲಾಗಿತ್ತು.

12 ಗಂಟೆ ಮುಷ್ಕರ
ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಒಟ್ಟು 12 ಗಂಟೆಗಳ ಕಾಲ ಕೇರಳ ಮುಷ್ಕರಕ್ಕೆ ಕರೆನೀಡಲಾಗಿದೆ. ಶಬರಿಮಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರು ಬೀಡುಬಿಟ್ಟಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ.

ನಿಷೇಧಾಜ್ಞೆ ಜಾರಿ
ಶಬರಿಮಲೆಯತ್ತ ಸಾವಿರಾರು ಜನರು ಪ್ರಯಾಣ ಬೆಳೆಸಿದ್ದು, ಭಕ್ತರ ಹಿತದೃಷ್ಟಿಯಿಂದ ಶಬರಿಮಲೆಯ ನಾಲ್ಕು ಸೂಕ್ಷ್ಮ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ನೀಲಕ್ಕಳ್, ಪಂಪಾ, ಪಟ್ಟಣಂ ತಿಟ್ಟಿಯಲ್ಲಿ ಸಿಆರ್ ಪಿಸಿ ಸೆಕ್ಷನ್ 144 ಅಡಿಯಲ್ಲಿ ಪೊಲೀಸರು ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.

ಭುಗಿಲೆದ್ದ ಆಕ್ರೋಶ
ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಅ.17 ರಂದು ಮೊದಲ ಬಾರಿಗೆ ಶಬರಿಮಲೆ ಅಯ್ಯಪ್ಪ ದೇವಾಲಯ ತೆರೆಯುತ್ತಿದ್ದಂತೆಯೇ ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ವಿರೋಧಿಸುವ ಗುಂಪು, ಯಾವುದೇ ಕಾರಣಕ್ಕೂ ದೇವಾಲಯಕ್ಕೆ ಮಹಿಳೆಯರು ಪ್ರವೇಶಿಸದಂತೆ ಎಚ್ಚರಿಕೆ ವಹಿಸಿತ್ತು. ರಸ್ತೆಯಲ್ಲೇ ಆಕ್ರೋಶ ಭುಗಿಲೆದ್ದಿತ್ತು. ವರದಿಗೆಂದು ಬಂದ ಮಾಧ್ಯಮಗಳ ವಾಹನಗಳು ಧ್ವಂಸಗೊಂಡವು, ಹಲ್ಲೆ ಪ್ರಕರಣಗಳೂ ನಡೆದಿದ್ದು ವರದಿಯಾಯ್ತು. ದೇವಾಲಯ ಪ್ರವೇಶಕ್ಕೆಂದು ಬಂದಿದ್ದ ಕೆಲವು ಮಹಿಳೆಯರು ಪ್ರತಿಭಟನೆಯ ಕಾವು ನೋಡಿ ವಾಪಸ್ಸಾದ ಘಟನೆಯೂ ನಡೆಯಿತು.

ತೀರ್ಪಿನಲ್ಲಿ ಏನಿತ್ತು?
10 ರಿಂದ 50 ವರ್ಷ ವಯಸ್ಸಿನ ಮಹಿಳೆಯರು ಋತುಮತಿಯಾಗುವ ಕಾರಣ ಕೇರಳದ ಶಬರಿಮಲೆ ಅಯ್ಯಪ್ಪ ದೇವಾಲಯ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಈ ವಯಸ್ಸಿನ ಮಹಿಳೆಯರು ದೇವಾಲಯಕ್ಕೆ ಪ್ರವೇಶಿಸುವುದರಿಂದ ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂದು ವಾದಿಸಲಾಗಿತ್ತು. ಈ ನಿರ್ಬಂಧವನ್ನು ಸೆ.28 ರಂದು ಸುಪ್ರೀಂ ಕೋರ್ಟ್ ತೆರವುಗೊಳಿಸಿ ಐತಿಹಾಸಿಕ ತೀರ್ಪು ನೀಡಿತ್ತು.











Click it and Unblock the Notifications