ಶಬರಿಮಲೆ ತೀರ್ಪು: ಕೇರಳ ಸರ್ಕಾರದ ನಡೆಗೆ ಬೇಸರ ವ್ಯಕ್ತಪಡಿಸಿದ RSS
ತಿರುವನಂತಪುರಂ, ಅಕ್ಟೋಬರ್ 04: 'ಭಕ್ತರ ಭಾವನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಕೇರಳ ಸರ್ಕಾರವು ಶಬರಿಮಲೆಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ಜಾರಿಗೊಳಿಸುತ್ತಿದೆ' ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ದೂರಿದೆ.
ಕೇರಳ ಸರ್ಕಾರವು ಸುಪ್ರೀಂ ಕೋರ್ಟ್ ತೀರ್ಪಿಗೆ ಪ್ರತಿಯಾಗಿ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸುವುದಿಲ್ಲ ಎಂದು ಬುಧವಾರ ಸ್ಪಷ್ಟಪಡಿಸಿದೆ. ಅಂದರೆ ಅದು ಶಬರಿಮಲೆ ದೇವಾಲಯದ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಭಕ್ತರ ಭಾವನೆಗಳಿಗೆ ಬೆಲೆ ನೀಡದೆ ಜಾರಿಗೊಳಿಸುತ್ತಿದೆ ಎಂದು ಆರೆಸ್ಸೆಸ್ ಹೇಳಿದೆ.
"ಸುಪ್ರೀಂ ಕೋರ್ಟ್ ತೀರ್ಪಿಗೆ ಗೌರವ ನೀಡಬೇಕೆಂಬುದು ಸತ್ಯ. ಅದರ ಜೊತೆಗೆ ಈ ತೀರ್ಪಿಗೆ ಸಂಬಂಧಿಸಿದಂತೆ ಧಾರ್ಮಿಕ ತಜ್ಞರನ್ನೂ ಸಂಪರ್ಕಿಸಿ, ಎಲ್ಲರೂ ಕೂತು ಚರ್ಚೆ ನಡೆಸಿ ಒಮ್ಮತದ ನಿರ್ಧಾರಕ್ಕೆ ಬರಬೇಕು. ಭಕ್ತರ ಭಾವನೆಗಳಿಗೂ ಬೆಲೆ ನೀಡಬೇಕು" ಎಂದು ಅದು ಅಭಿಪ್ರಾಯ ಪಟ್ಟಿದೆ.

ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಾಲಯದಲ್ಲಿ 10 ರಿಂದ 50 ವರ್ಷ ವಯಸ್ಸಿನ ಮಹಿಳೆಯರಿಗೆ ದೇವಾಲಯಕ್ಕೆ ಪ್ರವೇಶಿಸಲು ಅನುಮತಿ ಇರಲಿಲ್ಲ. ಈ ವಯಸ್ಸಿನ ಹೆಣ್ಣುಮಕ್ಕಳು ಋತುಮತಿಯಾಗುವ ಕಾರಣಕ್ಕೆ ಅವರು ದೇವಾಲಯಕ್ಕೆ ಕಾಲಿಡುವುದರಿಂದ ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆ ಬರುತ್ತದೆ ಎಂದು ವಾದಿಸಲಾಗುತ್ತಿತ್ತು. ಈ ಸಂಪ್ರದಾಯವನ್ನು ಕಳೆದ 800 ವರ್ಷಗಳಿಂದ ದೇವಾಲಯದ ಆಡಳಿತ ಮಂಡಳಿ ಪಾಲಿಸಿಕೊಂಡು ಬಂದಿತ್ತು.
ಆದರೆ ಈ ಪದ್ಧತಿಯಿಂದ ಮಹಿಳೆಯರನ್ನು ಅಸಮಾನರನ್ನಾಗಿ ಕಾಣಲಾಗುತ್ತಿದೆ ಎಂದ ಸುಪ್ರೀಂ ಕೋರ್ಟ್ ಸೆ.28 ರಂದು ಮಹಿಳೆಯರಿಗೆ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಿ ಐತಿಹಾಸಿಕ ತೀರ್ಪು ನೀಡಿತು. ಈ ತೀರ್ಪಿಗೆ ಪ್ರತಿಯಾಗಿ ಕೇರಳ ಸರ್ಕಾರ ಮರುಪರಿಶೀಲನಾ ಅರ್ಜಿ ಸಲ್ಲಿಸಬಹುದು ಎಂದು ಊಹಿಸಲಾಗಿತ್ತು. ಆದರೆ ಅದನ್ನು ತಳ್ಳಿಹಾಕಿದ ಕೇರಳ ಸರ್ಕಾರ, ತಾನು ಮರುಪರಿಶೀಲನಾ ಅರ್ಜಿ ಸಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.












Click it and Unblock the Notifications