ಭಾರತ ಅನ್ ಲಾಕ್: ಜೂ.9ರಿಂದ ಮಾಲ್, ರೆಸ್ಟೋರೆಂಟ್, ಕಚೇರಿ ಓಪನ್!
ತಿರುವನಂತಪುರಂ, ಜೂನ್.05: ನೊವೆಲ್ ಕೊರೊನಾ ವೈರಸ್ ಸೋಂಕು ಹರಡುವಿಕೆ ಭೀತಿ ನಡುವೆ ಭಾರತವು ಸಹಜ ಸ್ಥಿತಿಗೆ ಮರಳುತ್ತಿದೆ. ರೆಸ್ಟೋರೆಂಟ್, ಮಾಲ್, ದೇವಸ್ಥಾನ ಹಾಗೂ ಸರ್ಕಾರಿ ಕಚೇರಿಗಳನ್ನು ತೆರೆಯಲು ಕೇಂದ್ರ ಸರ್ಕಾರ ಈಗಾಗಲೇ ಅನುಮತಿ ನೀಡಿದೆ.
ಕೇಂದ್ರ ಗೃಹ ಸಚಿವಾಲಯವು ಕೊರೊನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ರೆಸ್ಟೋರೆಂಟ್, ಮಾಲ್, ದೇವಸ್ಥಾನ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ಅಧಿಸೂಚನೆಯನ್ನು ಹೊರಡಿಸಿದೆ.
ಕೇರಳದಲ್ಲಿ ಜೂನ್.09ರಿಂದ ಎಲ್ಲ ದೇವಸ್ಥಾನ, ಮಾಲ್, ರೆಸ್ಟೋರೆಂಟ್ ಹಾಗೂ ಕಚೇರಿಗಳನ್ನು ಪುನರ್ ಆರಂಭಿಸಲಾಗುತ್ತದೆ. ಎಲ್ಲ ಕಡೆಗಳಲ್ಲಿ ಕೇಂದ್ರ ಸರ್ಕಾರದ ಅಧಿಸೂಚನೆಯನ್ನು ಪಾಲಿಸುವಂತೆ ಎಚ್ಚರಿಕೆ ವಹಿಸಲಾಗುತ್ತದೆ ಎಂದು ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಕೇರಳದಲ್ಲಿ ಶುಕ್ರವಾರ 111 ಮಂದಿಗೆ ಸೋಂಕು:
ಕೊರೊನಾ ವೈರಸ್ ಸೋಂಕು ಹರಡುವಿಕೆಯನ್ನು ಒಂದು ಹಂತದವರೆಗೂ ನಿಯಂತ್ರಿಸಿರುವ ಕೇರಳದಲ್ಲಿ ಶುಕ್ರವಾರ 111 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯು 1,694ಕ್ಕೆ ಏರಿಕೆಯಾಗಿದೆ. ಈ ಪೈಕಿ 973 ಸಕ್ರೀಯ ಪ್ರಕರಣಗಳು ಎಂದು ತಿಳಿದು ಬಂದಿದೆ. ಈ ಮಧ್ಯೆ ಕೇರಳ ಸರ್ಕಾರವು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ತೆಗೆದುಕೊಂಡಿದೆ. ಈಗಾಗಲೇ ಕೇಂದ್ರ ಸರ್ಕಾರವು ಕೊರೊನಾ ವೈರಸ್ ಸೋಂಕು ಹರಡದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ವಹಿಸಲು ಸಾಮಾನ್ಯ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಕೇಂದ್ರವು ಹೊರಡಿಸಿರುವ ಸಾಮಾನ್ಯ ಮಾರ್ಗಸೂಚಿ:
- ಪ್ರತಿಯೊಬ್ಬ ವ್ಯಕ್ತಿಯು ಸಾರ್ವಜನಿಕ ಪ್ರದೇಶಗಳಲ್ಲಿ ಕನಿಷ್ಠ 6 ಅಡಿ ಅಂತರವನ್ನು ಕಾಯ್ದುಕೊಂಡಿರಬೇಕು.
- ಮುಖಕ್ಕೆ ಬಟ್ಟೆ ಅಥವಾ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.
- ಆಗಾಗ ಸೋಪ್ ನಿಂದ ಕನಿಷ್ಠ 40-60 ಸೆಕೆಂಡ್ ಗಳ ಕಾಲ ಕೈತೊಳೆದುಕೊಳ್ಳುವುದನ್ನು ರೂಢಿಸಿಕೊಳ್ಳಬೇಕು.
- ಸಾಧ್ಯವಾದಲ್ಲಿ ಆಲ್ಕೋಹಾಲ್ ಅಂಶವುಳ್ಳ ಸ್ಯಾನಿಟೈಸರ್ ನಿಂದ 20 ಸೆಕೆಂಡ್ ಕೈಗಳನ್ನು ತೊಳೆಯಿರಿ.
- ಕೆಮ್ಮುವಾಗ, ಸೀನುವಾಗ ಬೇರೆಯವರಿಂದ ಅಂತರ ಕಾಯ್ದುಕೊಳ್ಳಿರಿ ಹಾಗೂ ಕೈ ಹಾಗೂ ಕರ್ಚಿಫ್ ಗಳನ್ನು ಹಿಡಿದುಕೊಳ್ಳಿರಿ.
- ಆರೋಗ್ಯದಲ್ಲಿ ಕೊಂಚ ಏರುಪೇರು ಆದರೂ ಜಿಲ್ಲಾ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿರಿ.
- ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳುವುದನ್ನು ನಿರ್ಬಂಧಿಸಲಾಗಿದೆ.
- ಎಲ್ಲರೂ ನಿಮ್ಮ ನಿಮ್ಮ ಮೊಬೈಲ್ ನಲ್ಲಿ ಆರೋಗ್ಯ ಸೇತು ಆ್ಯಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಿ.












Click it and Unblock the Notifications