ಬುರೆವಿ ಚಂಡಮಾರುತದಿಂದ ಕೇರಳಕ್ಕಿಲ್ಲ ಅಪಾಯ: ಹವಾಮಾನ ಇಲಾಖೆ
ತಿರುವನಂತಪುರಂ, ಡಿಸೆಂಬರ್ 04: ಬುರೆವಿ ಚಂಡಮಾರುತದಿಂದ ಕೇರಳಕ್ಕೆ ಯಾವ ಅಪಾಯವೂ ಇಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ.
ಚಂಡಮಾರುತ ಗಾಳಿಯು ತಮಿಳುನಾಡಿನೆಡೆಗೆ ತಿರುಗಿದ್ದು, ಕೇರಳದ ಏಳು ಜಿಲ್ಲೆಗಳಿಗೆ ನೀಡಲಾಗಿದ್ದ ರೆಡ್ಅಲರ್ಟ್ನ್ನು ಹಿಂಪಡೆಯಲಾಗಿದೆ.
ಬುರೆವಿ ಚಂಡಮಾರುತ ಪಥವನ್ನು ಆಧರಿಸಿ ಹವಾಮಾನ ಇಲಾಖೆ ನೀಡುವ ನಿರ್ದೇಶನದವರೆಗೂ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗೆ 10 ಸ್ಥಗಿತವಾಗಿದ್ದ ವಿಮಾನ ಸಂಚಾರ ಸಂಜೆ ವೇಳೆಗೆ ಪುನರಾರಂಭಗೊಂಡಿದೆ.

ಕೇರಳದ 10 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಶುಕ್ರವಾರ ಘೋಷಿಸಲಾಗಿತ್ತು. ಬುರೆವಿ ಚಂಡಮಾರುತ ಅಪ್ಪಳಿಸುವ ಮುನ್ಸೂಚನೆ ಇದ್ದ ಕಾರಣ ಐದು ಜಿಲ್ಲೆಗಳಲ್ಲಿ ಶುಕ್ರವಾರ ಸಾರ್ವಜನಿ ರಜೆಯನ್ನು ಘೋಷಿಸಿತ್ತು.
ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಮುಂದಿನ 36 ಗಂಟೆಗಳಲ್ಲಿ ಚಂಡಮಾರುತ ಮತ್ತಷ್ಟು ಕ್ಷೀಣಿಸಲಿದ್ದು, ಕೇರಳಕ್ಕೆ ಪ್ರವೇಶಿಸುವ ವೇಳೆಗೆ ಅದರ ವೇಗ 30-40 ಕಿ.ಮೀಗೆ ಕುಸಿಯಲಿದೆ.
ಕೇರಳದ ಕೆಲ ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ದಕ್ಷಿಣ ಕೇರಳದ ಕೆಲವೆಡೆ ಗಂಟೆಗೆ 35-45 ಕಿಮೀ ವೇಗದಲ್ಲಿ ಗಾಳಿ ಬೀಸಿದೆ.
ತಮಿಳುನಾಡು, ಪಾಂಡಿಚೇರಿಯಲ್ಲಿ ಭಾರಿ ಮಳೆ: ಬುರೆವಿ ಚಂಡ ಮಾರುತದ ಪ್ರಭಾವದಿಂದಾಗಿ ತಮಿಳುನಾಡು ಹಾಗೂ ಪಾಂಡಿಚೇರಿಯ ಹಲವೆಡೆ ಭಾರಿ ಮಳೆಯಾಗಿದೆ. ಶುಕ್ರವಾರ ಬೆಳಗ್ಗೆ 8.30ರವರೆಗಿನ 24 ಗಂಟೆಗಳ ಅವಧಿಯಲ್ಲಿ ಪಾಂಡಿಚೇರಿಯಲ್ಲಿ 14 ಸೆಂ.ಮೀ ಮಳೆಯಾಗಿದೆ.












Click it and Unblock the Notifications