ಮಂಗಳೂರಿನ ವಿಮಾನ ದುರಂತ ನೆನಪಿಸಿದ ಕೋಳಿಕ್ಕೋಡ್ ಅವಘಡ: ಏನಿದು ಟೇಬಲ್ ಟಾಪ್ ರನ್ ವೇ
ಮಲಪ್ಪುರಂ, ಆಗಸ್ಟ್ 7: ದುಬೈನಿಂದ ಬರುತ್ತಿದ್ದ ಏರ್ ಇಂಡಿಯಾ ವಿಮಾನವೊಂದು ಶುಕ್ರವಾರ ರಾತ್ರಿ 7.40ರ ಹೊತ್ತಿಗೆ ಕಲ್ಲಿಕೋಟೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕರಿಪುರ್ ವಿಮಾನ ನಿಲ್ದಾಣ) ಇನ್ನೇನು ಭೂ ಸ್ಪರ್ಶ ಮಾಡುವ ವೇಳೆ ರನ್ ವೇಯಲ್ಲಿ ಜಾರಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, 35 ಅಡಿ ಆಳದ ಕಮರಿಯೊಳಗೆ ವಿಮಾನ ಬಿದ್ದು, ಎರಡು ತುಂಡಾಗಿದೆ.
ಪ್ರತ್ಯಕ್ಷದರ್ಶಿಗಳು ಕಂಡಂತೆ, ವಿಮಾನದ ಅವಶೇಷಗಳಿಂದ ಬೆಂಕಿ ಹಾಗೂ ಹೊಗೆ ಬರುತ್ತಿದೆ. ಮಾಧ್ಯಮಗಳ ವರದಿಯಂತೆ, ಒಬ್ಬ ಪೈಲಟ್ ಸೇರಿದಂತೆ ಇಬ್ಬರು ಈ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಹಲವಾರು ಮಂದಿ ಪ್ರಯಾಣಿಕರು ಈ ಅಪಘಾತದಲ್ಲಿ ಗಾಯಗೊಂಡಿದ್ದಾರೆ.
ಅಪಘಾತಕ್ಕೆ ಈಡಾದ ವಿಮಾನದಲ್ಲಿ 191 ಮಂದಿ ಇದ್ದರು. ಅದರಲ್ಲಿ 174 ಮಂದಿ ಪ್ರಯಾಣಿಕರು, 10 ಮಕ್ಕಳು, 4 ಸಿಬ್ಬಂದಿ ಹಾಗೂ ಇಬ್ಬರು ಪೈಲಟ್ ಗಳು ಇದ್ದರು. ವಂದೇ ಭಾರತ್ ವಲಸಿಗರ ಅಭಿಯಾನದ ಅಡಿಯಲ್ಲಿ ಏರ್ ಇಂಡಿಯಾದ IX1344 ವಿಮಾನವು ದುಬೈನಿಂದ ಭಾರತಕ್ಕೆ ವಾಪಸ್ ಬರುತ್ತಿತ್ತು.

24 ಆಂಬ್ಯುಲೆನ್ಸ್ ಗಳು ಕರಿಪುರ್ ಗೆ ಹೊರಟಿವೆ. ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿಗಳ ತಂಡ ಪರಿಹಾರ ಕಾರ್ಯಾಚರಣೆಗೆ ತೆರಳಿವೆ. ಕರಿಪುರ್ ವಿಮಾನ ನಿಲ್ದಾಣದ ರನ್ ವೇ ಅಂದರೆ, ಟೇಬಲ್ ಟಾಪ್ ರನ್ ವೇ ಮಾದರಿಯಲ್ಲಿದೆ. ಹೀಗಂದರೆ. ಸಣ್ಣ ಗುಡ್ಡದ ಮೇಲೆ ಅಥವಾ ಎತ್ತರದ ಪ್ರದೇಶದಲ್ಲಿ ರನ್ ವೇ ಇರುತ್ತದೆ. ಒಂದು ಅಥವಾ ಎರಡು ತುದಿಯಲ್ಲಿ ಆಳವಾದ ಕಮರಿ ಇರುತ್ತದೆ.
ಈ ರೀತಿಯ ರನ್ ವೇ ಪೈಲಟ್ ಗಳಲ್ಲಿ ಒಂದು ಬಗೆಯ ದೃಷ್ಟಿಯ ಭ್ರಮೆ ಸೃಷ್ಟಿಸುತ್ತವೆ. ಇಂಥ ಕಡೆ ವಿಮಾನವನ್ನು ಇಳಿಸುವಾಗ ಪೈಲಟ್ ಬಹಳ ಸೂಕ್ಷ್ಮವಾಗಿ ಇರಬೇಕು. 2010ರಲ್ಲಿ ಕರ್ನಾಟಕದ ಮಂಗಳೂರು ವಿಮಾನದಲ್ಲಿ ನಡೆದ ದುರಂತ ಥೇಟ್ ಹೀಗೆ ನಡೆದದ್ದು. ಆಗ 158 ಮಂದಿ ಸಾವನ್ನಪ್ಪಿದ್ದರು.
ಆಗ ವರದಿಯನ್ನು ಸಿದ್ಧಪಡಿಸಿದ ತಜ್ಞರು ತಮ್ಮ ಅಭಿಪ್ರಾಯವನ್ನು ಹಾಗೂ ಸಲಹೆಯನ್ನು ಸ್ಪಷ್ಟವಾಗಿ ದಾಖಲಿಸಿದ್ದರು. ಇಂಥದ್ದೇ ವಿಮಾನ ಕ್ಷೇತ್ರ ಇರುವ ಹಾಗೂ ಟೇಬಲ್ ಟಾಪ್ ರನ್ ವೇ ಇರುವ ಕೋಳಿಕ್ಕೋಡ್ ನ ಕರಿಪುರ್ ವಿಮಾನ ನಿಲ್ದಾಣ ಮತ್ತು ಮಿಜೋರಾಂನಲ್ಲಿನ ಲೆಂಗ್ ಪುಯ್ ವಿಮಾನದಲ್ಲಿ ವಿಮಾನ ಹಾರಾಟ ಕಾರ್ಯಾಚರಣೆಗೆ ಹೆಚ್ಚುವರಿ ಕೌಶಲ ಮತ್ತು ಎಚ್ಚರಿಕೆ ಬೇಕು ಎಂದಿದ್ದರು. -












Click it and Unblock the Notifications