ಕೇರಳದಲ್ಲಿ ಜಲಾಶಯಗಳಿಂದ ನೀರು ಬಿಡುಗಡೆ; ಪ್ರವಾಹ ಭೀತಿ!
ತಿರುವನಂತಪುರಂ, ಅಕ್ಟೋಬರ್ 18: ಕೇರಳದಲ್ಲಿ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ರಾಜ್ಯದ ಪ್ರಮುಖ ಜಲಾಶಯಗಳ ಒಳಹರಿವು ಸ್ಥಿರವಾಗಿದ್ದು, ನೀರಿನ ಪ್ರಮಾಣ ಹೆಚ್ಚಾಗಿದೆ.
ಅಕ್ಟೋಬರ್ 18ರ ಸೋಮವಾರ ಬೆಳಗ್ಗೆ 11 ಗಂಟೆ ಹೊತ್ತಿಗೆ ಶಬರಿಗಿರಿ ಯೋಜನೆಯ ಭಾಗವಾಗಿರುವ ಕಕ್ಕಿ ಅಣೆಕಟ್ಟೆಯ ಶಟರ್ಗಳನ್ನು ತೆರೆಯಲಿದ್ದು, ಮತ್ತು ಪಂಪಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆಯಿದೆ. ಈ ಮಧ್ಯೆ ಮಂಗಳವಾರ ಶಬರಿಮಲೆ ಬೆಟ್ಟದ ದೇಗುಲಕ್ಕೆ ತೆರಳಲು ಕಾಯುತ್ತಿರುವ ಅಯ್ಯಪ್ಪ ಭಕ್ತರಿಗೆ ನೀರು ಬಿಡುವ ನಿರ್ಧಾರ ಕಳವಳಕಾರಿಯಾಗಿದೆ.
ಕೇರಳ ಮಳೆ: ಮೃತರ ಸಂಖ್ಯೆ 26 ಕ್ಕೆ ಏರಿಕೆ, ಪಿಣರಾಯಿ ಜತೆ ಮೋದಿ ಮಾತುಕತೆ
ಕೇರಳದ ಶಕ್ತಿಕೇಂದ್ರವಾದ ಇಡುಕ್ಕಿ ಜಲಾಶಯದಲ್ಲಿ ಬೆಳಿಗ್ಗೆ 7 ಗಂಟೆಗೆ ನೀರಿನ ಮಟ್ಟ 2396.90 ಅಡಿಯಿದ್ದು, ಜಿಲ್ಲಾಡಳಿತವು ಆರೆಂಜ್ ಅಲರ್ಟ್ ಘೋಷಿಸಿದೆ. ಕೇಂದ್ರ ಜಲ ಆಯೋಗವು ನಿಗದಿಪಡಿಸಿದ 2398.86 ಅಡಿಯ ಪ್ರಮಾಣಕ್ಕೆ ತಲುಪುತ್ತಿದ್ದಂತೆ ಜಲಾಶಯದ ಗೇಟ್ ಅನ್ನು ತೆರೆಯಲಾಗುತ್ತದೆ. ಅಣೆಕಟ್ಟು ಪ್ರತಿನಿತ್ಯ 34.711ರಷ್ಟು ಒಳಹರಿವು ಬರುತ್ತಿದ್ದು, ವಿದ್ಯುತ್ ಉತ್ಪಾದನೆಗಾಗಿ ದಿನಕ್ಕೆ 9.07 ಎಂಸಿಎಂ ನೀರು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಒಳಹರಿವು ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಬುಧವಾರದ ವೇಳೆಗೆ ಜಲಾಶಯದಿಂದ ನೀರು ಹೊರಬಿಡುವ ನಿರೀಕ್ಷೆಯಿದೆ.
ಬ್ಲೂ ಅಲರ್ಟ್ ಘೋಷಣೆ
ಕೇರಳದ ಎರಡನೇ ಅತಿದೊಡ್ಡ ಜಲಾಶಯವಾಗಿರುವ ಇಡಮಲಯಾರ್ ಡ್ಯಾಂನಲ್ಲಿ ನೀರಿನ ಮಟ್ಟ 165.30 ಮೀ ಮುಟ್ಟಿದ್ದು, ಸೋಮವಾರ ಬೆಳಿಗ್ಗೆ 7 ಗಂಟೆಗೆ ಬ್ಲೂ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಸಂಪೂರ್ಣ ಜಲಾಶಯದ ಮಟ್ಟ 169 ಮೀ ಆಗಿದ್ದು, ಮೇಲಿನ ನಿಯಮದ ಪ್ರಕಾರ ಗರಿಷ್ಠ ಮಟ್ಟವನ್ನು 166.80 ಮೀಗೆ ನಿಗದಿಪಡಿಸಲಾಗಿದೆ. ಸದ್ಯಕ್ಕೆ ನೀರಿನ ಮಟ್ಟವು 165.8 ಮೀ ತಲುಪುವುದರಿಂದ ಆರೆಂಜ್ ಅಲರ್ಟ್ ಎಚ್ಚರಿಕೆ ನೀಡಲಾಗುವುದು. ಈ ಪ್ರಮಾಣ 166.3 ಮೀಗೆ ಹೆಚ್ಚಳವಾದರೆ ರೆಡ್ ಅಲರ್ಟ್ ಘೋಷಿಸಲಾಗುವುದು. ಇನ್ನು, ಅಣೆಕಟ್ಟು ಪ್ರತಿ ಗಂಟೆಗೆ 0.8 MCM ಒಳಹರಿವು ಬರುತ್ತಿದ್ದು, ವಿದ್ಯುತ್ ಉತ್ಪಾದಿಸಲು ಪ್ರತಿ ಗಂಟೆಗೆ 0.023 MCM ನೀರು ಬಳಕೆ ಆಗುತ್ತಿದೆ.
ಕಕ್ಕಿ - ಆನತೋಡು ಜಲಾಶಯದಲ್ಲಿ ನೀರಿನ ಪ್ರಮಾಣ
ಕೇರಳದಲ್ಲಿ ಮಳೆ ಪ್ರಮಾಣ ಕಡಿಮೆಯಾದರೂ ಸಹ ಮುಂದಿನ ಒಂದು ವಾರದಲ್ಲಿ ಅಣೆಕಟ್ಟೆಗಳ ಒಳಹರಿವಿನ ಪ್ರಮಾಣ ಸ್ಥಿರವಾಗಿರಲಿದೆ. ಕಕ್ಕಿ - ಆನತೋಡು ಜಲಾಶಯದ ಎರಡು ಶಟರ್ಗಳನ್ನು ಸೋಮವಾರ ಬೆಳಿಗ್ಗೆ 11 ಗಂಟೆಗೆ ತೆರೆಯಲಾಗುವುದು. ಏಕೆಂದರೆ ಪೂರ್ಣ ಜಲಾಶಯದ ಮಟ್ಟ 981.46 ಮೀ ಮತ್ತು ನೀರಿನ ಮಟ್ಟ 979.87 ಮೀ ಆಗಿದೆ. ಪಂಪಾ ನದಿಯಲ್ಲಿ ಈಗಾಗಲೇ ನೀರಿನ ಪ್ರಮಾಣ ಪ್ರವಾಹ ಮಟ್ಟಕ್ಕಿಂತ ಹೆಚ್ಚಾಗಿ ಹರಿಯುತ್ತಿದೆ. ಇದರ ಮಧ್ಯ ಜಲಾಶಯಗಳಿಂದ ನೀರು ಹೊರ ಬಿಡುವುದರಿಂದ ಪಂಪಾ ನದಿಯಲ್ಲಿ ನೀರಿನ ಮಟ್ಟವು 10 ರಿಂದ 15 ಸೆಂ.ಮೀ. ಹೆಚ್ಚಾಗಲಿದೆ.
2018ರಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿ
ಕಳೆದ 2018ರಲ್ಲೂ ಕೇರಳ ಇಂಥದ್ದೇ ಪರಿಸ್ಥಿತಿಯನ್ನು ಎದುರಿಸಿತ್ತು. 2018ರ ಆಗಸ್ಟ್ 1ರಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಜಲಾಶಯಗಳು ತುಂಬಿದ್ದವು. ಒಳಹರಿವಿನ ಪ್ರಮಾಣವೂ ಹೆಚ್ಚಾದ ಹಿನ್ನೆಲೆ ಆಗಸ್ಟ್ 15ರಂದು ಎಲ್ಲಾ ಜಲಾಶಯಗಳ ಗೇಟ್ ಅನ್ನು ಏಕಕಾಲಕ್ಕೆ ತೆರಯಲಾಗಿತ್ತು. ಇಡುಕ್ಕಿ ಮತ್ತು ಇಡಮಲಯಾರ್ ಅಣೆಕಟ್ಟೆಗಳಿಂದ ಧುಮ್ಮಿಕ್ಕುವ ನೀರು ಅಲುವಾದಿಂದ ಕರಾವಳಿ ಪ್ರದೇಶಗಳಲ್ಲಿ ಪ್ರವಾಹಕ್ಕೆ ಕಾರಣವಾಯಿತು. ಸಮುದ್ರದಲ್ಲಿ ಪ್ರಕ್ಷುಬ್ಧತೆ ಉಂಟಾಗಿದ್ದ ಹಿನ್ನೆಲೆ ನೀರು ಹರಿಯುವುದಕ್ಕೆ ಸಾಧ್ಯವಾಗಲಿಲ್ಲ, ಇದರಿಂದ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗಿತ್ತು. ಇನ್ನೊಂದೆಡೆ ಕಕ್ಕಿ - ಆನತೋಡು ಜಲಾಶಯದಿಂದ ನೀರು ಬಿಟ್ಟಿದ್ದರಿಂದ ಚೆಂಗನ್ನೂರು ಮತ್ತು ಅರನ್ಮುಲಾ ಪ್ರದೇಶಗಳು ಜಲಾವೃತಗೊಂಡಿದ್ದವು. ಈ ಪ್ರದೇಶಗಳಲ್ಲಿ ಎರಡು ಅಂತಸ್ತಿನ ಕಟ್ಟಡದ ಮಟ್ಟಕ್ಕೆ ನೀರು ಹರಿಯಿತು.
ಮಳೆ ನಿಂತಿರುವುದರಿಂದ ಕೊಂಚ ಸಮಾಧಾನ
ಕೇರಳದಲ್ಲಿ ಈ ಬಾರಿ ಸಮುದ್ರ ಶಾಂತವಾಗಿದ್ದು, ಮಳೆಯ ಪ್ರಮಾಣ ತಗ್ಗಿರುವುದ ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ. ಅಣೆಕಟ್ಟೆಗಳಿಂದ ಹಂತ ಹಂತವಾಗಿ ನೀರನ್ನು ಬಿಡುಗಡೆ ಮಾಡುವುದು ಮತ್ತು ಕೆಳಭಾಗದ ಪ್ರದೇಶಗಳಲ್ಲಿ ನೀರಿನ ಮಟ್ಟವನ್ನು ಮೇಲ್ವಿಚಾರಣೆ ಮಾಡುವುದರ ಬಗ್ಗೆ ಯೋಜನೆ ಹಾಕಿಕೊಳ್ಳಲಾಗಿದೆ. ಎರ್ನಾಕುಲಂ, ಪತ್ತನಂತಿಟ್ಟ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ನೀರಿನ ಮಟ್ಟ ಮೇಲ್ವಿಚಾರಣೆ ಮಾಡುವುದು ಹಾಗೂ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರವೇ ಜನರನ್ನು ತಗ್ಗು ಪ್ರದೇಶಗಳಿಂದ ಸ್ಥಳಾಂತರಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.