ಉರಗ ರಕ್ಷಕ ವಾವಾ ಸುರೇಶ್ ಆಸ್ಪತ್ರೆಯಿಂದ ಡಿಸ್ಚಾರ್ಜ್
ತಿರುವನಂತಪುರಂ, ಫೆಬ್ರವರಿ 07; ನೂರಾರು ಅಭಿಮಾನಿಗಳ ಹಾರೈಕೆ ಫಲಕೊಟ್ಟಿದೆ. ಕೇರಳದ ಪ್ರಸಿದ್ಧ ಉರಗ ರಕ್ಷಕ ವಾವಾ ಸುರೇಶ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು. ಜನವರಿ 31ರಂದು ನಾಗರಹಾವು ರಕ್ಷಣೆ ಮಾಡುವಾಗ ಅದು ಅವರ ಬಲಗಾಲಿಗೆ ಕಚ್ಚಿತ್ತು. ಆಸ್ಪತ್ರೆಗೆ ದಾಖಲಾಗಿದ್ದ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಸೋಮವಾರ ಕೊಟ್ಟಾಯಂ ಸರ್ಕಾರಿ ಆಸ್ಪತ್ರೆಯಿಂದ ವಾವಾ ಸುರೇಶ್ ಡಿಸ್ಚಾರ್ಜ್ ಆದರು. ವಾವಾ ಸುರೇಶ್ ನೋಡಲು ನೂರಾರು ಜನರು ಆಸ್ಪತ್ರೆ ಬಳಿ ಸೇರಿದ್ದರು. ಕೇರಳದ ನೋಂದಣಿ ಮತ್ತು ಸಹಕಾರ ಸಚಿವ ವಿ. ಎನ್. ವಾಸನ್ ಸಹ ಉಪಸ್ಥಿತರಿದ್ದರು.
ಆಸ್ಪತ್ರೆ ಆವರಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, "ನನ್ನ ವಿರುದ್ಧ ಹಲವಾರು ಜನರು ಅಪ ಪ್ರಚಾರ ಮಾಡುತ್ತಿದ್ದಾರೆ. 2006ರಲ್ಲಿಯೇ ನಾನು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಹಾವು ಹಿಡಿಯುವ ತರಬೇತಿ ನೀಡಿದ್ದೆ. ಆ ಸಂದರ್ಭದಲ್ಲಿ ಯಾವುದೇ ಉರಗ ರಕ್ಷಕರು ಇರಲಿಲ್ಲ" ಎಂದು ವಾವಾ ಸುರೇಶ್ ಹೇಳಿದರು.

"ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಹಾವಿನ ರಕ್ಷಣೆಗೆ ವಾವಾ ಸುರೇಶ್ಗೆ ಕರೆ ಮಾಡಬೇಡಿ ಎಂದು ಹೇಳುತ್ತಿದ್ದಾರೆ. ನಾನು ಅವರ ಹೆಸರು ಹೇಳುವುದಿಲ್ಲ. ಹಾವಿನ ರಕ್ಷಣೆಯನ್ನು ನಾನು ಮುಂದುವರೆಸುತ್ತೇನೆ. ಜನರು ನನಗೆ ಕರೆ ಮಾಡಬಹುದು. ಮುಂದಿನ ದಿನಗಳಲ್ಲಿ ನಾನು ನನ್ನ ಸುರಕ್ಷತೆಗೆ ಹೆಚ್ಚಿನ ಕಾಳಜಿ ವಹಿಸುತ್ತೇನೆ" ಎಂದು ವಾವಾ ಸುರೇಶ್ ತಿಳಿಸಿದರು.
ಜನವರಿ 31ರಂದು ಕೊಟ್ಟಾಯಂನ ಕುರಿಚಿ ಬಳಿ ವಾವಾ ಸುರೇಶ್ಗೆ ನಾಗರಹಾವು ರಕ್ಷಣೆಗೆ ತೆರಳಿದ್ದರು. ಹಾವನ್ನು ರಕ್ಷಣೆ ಮಾಡಿ ಚೀಲಕ್ಕೆ ತುಂಬುವಾಗ ಅದು ಬಲಗಾಲಿಗೆ ಕಚ್ಚಿತ್ತು. ಹಾವು ಕಚ್ಚಿದರೂ ಅದನ್ನು ಹಿಡಿದು ಚೀಲಕ್ಕೆ ತುಂಬಿಯೇ ಅವರು ಕೊಟ್ಟಾಯಂ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.
ಆಸ್ಪತ್ರೆಗೆ ದಾಖಲಾಗುವಾಗ ವಾವಾ ಸುರೇಶ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಮೂರು ದಿನಗಳ ಕಾಲ ಅವರಿಗೆ ವೆಂಟಿಲೇಟರ್ ವ್ಯವಸ್ಥೆ ಮೂಲಕ ಚಿಕಿತ್ಸೆ ನೀಡಲಾಗಿತ್ತು. ಗುರುವಾರ ಅವರು ಚೇತರಿಸಿಕೊಂಡಿದ್ದರು. ಶುಕ್ರವಾರ ಸಾಮಾನ್ಯ ವಾರ್ಡ್ಗೆ ಸ್ಥಳಾಂತರಗೊಂಡಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ವಾವಾ ಸುರೇಶ್. ಜನವರಿ 31ರಂದು ಅವರಿಗೆ ನಾಗರ ಹಾವು ಕಚ್ಚುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹಲವಾರು ಜನರು ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದರು.
ಕಾಂಗ್ರೆಸ್ ನಾಯಕ ಶಶಿ ತರೂರ್ ಟ್ವೀಟ್ ಮಾಡಿ ವಾವಾ ಸುರೇಶ್ ಬೇಗ ಗುಣಮುಖಗೊಳ್ಳಲಿ ಎಂದು ಹಾರೈಸಿದ್ದರು. ಕೊಟ್ಟಾಯಂ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದ ಕೇರಳದ ಸಚಿವ ಎನ್. ವಾಸನ್, "ವಾವಾ ಸುರೇಶ್ಗೆ ಹೆಚ್ಚಿನ ಚಿಕಿತ್ಸೆಗೆ ಸರ್ಕಾರ ಅಗತ್ಯ ವ್ಯವಸ್ಥೆ ಮಾಡಿದೆ" ಎಂದು ಹೇಳಿದ್ದರು.
ಉರಗ ರಕ್ಷಕ ವಾವಾ ಸುರೇಶ್ಗೆ ಹಾವು ಕಚ್ಚುತ್ತಿರುವುದು ಇದೇ ಮೊದಲಲ್ಲ. 2020ರಲ್ಲಿ ತಿರುವನಂತಪುರಂನಲ್ಲಿ ಹಾವು ಹಿಡಿಯುವಾಗ ಅದು ಕಚ್ಚಿತ್ತು. ಒಂದು ವಾರಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅವರು ಡಿಸ್ಚಾರ್ಜ್ ಆಗಿದ್ದರು. ಆದರೆ ಬಳಿಕವೂ ಅವರು ಹಾವುಗಳ ರಕ್ಷಣೆ ಕಾರ್ಯವನ್ನು ಮುಂದುವರೆಸಿದ್ದರು.
ಕೇರಳದಲ್ಲಿ ವಾವಾ ಸುರೇಶ್ ಹೆಸರು ಕೇಳದ ವ್ಯಕ್ತಿಯೇ ಇಲ್ಲ ಎನ್ನುವಷ್ಟು ಅವರು ಪ್ರಸಿದ್ಧರು. ಸಾಮಾಜಿಕ ಜಾಲತಾಣದಲ್ಲಿಯೂ ಅಪಾರ ಅಭಿಮಾನಿಗಳನ್ನು ಅವರು ಹೊಂದಿದ್ದಾರೆ. ಫೇಸ್ಬುಕ್ನಲ್ಲಿ ಅವರಿಗೆ 2.1 ಮಿಲಿನನ್ ಫಾಲೋಯರ್ಸ್ಗಳಿದ್ದಾರೆ.
ವಾವಾ ಸುರೇಶ್ ಅಭಿಮಾನಿಗಳು ಸಾಮಾಜಿಕ ತಾಲತಾಣಗಳಲ್ಲಿ ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದರು. ಕೇರಳ ಸರ್ಕಾರ ವಾವಾ ಸುರೇಶ್ ಚಿಕಿತ್ಸಾ ವೆಚ್ಚವನ್ನು ಭರಿಸಿದೆ. ವಾವಾ ಸುರೇಶ್ ಗುಣಮುಖಗೊಂಡಿದ್ದು, ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.












Click it and Unblock the Notifications