ಕೊರೊನಾ ಉಲ್ಭಣ: ವಿಜಯನ್-ಮಾಂಡವೀಯಾ ಭೇಟಿ, ಕೇರಳಕ್ಕೆ 1.11 ಕೋಟಿ ಡೋಸ್ ಲಸಿಕೆ ಭರವಸೆ
ತಿರುವನಂತಪುರಂ, ಆ.17: ಕೇರಳದಲ್ಲಿ ಕೊರೊನಾ ವೈರಸ್ ಸೋಂಕಿನ ಉಲ್ಬಣವನ್ನು ಪರಿಶೀಲಿಸಲು, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಸೋಮವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭೇಟಿಯಾಗಿದ್ದಾರೆ. ಕೇರಳದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳ ಏರಿಕೆಯ ಕಾರಣದಿಂದಾಗಿ ಸಕ್ರಿಯ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗೆಯೇ ಆಸ್ಪತ್ರೆಗಳಿಗೆ ದಾಖಲಾಗುವ ಕೋವಿಡ್ ಸೋಂಕಿತರ ಸಂಖ್ಯೆಯಲ್ಲೂ ಕೂಡಾ ಹೆಚ್ಚಳ ಕಂಡು ಬಂದಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ನಿರ್ಣಾಯಕ ಮೂಲಸೌಕರ್ಯ ವೃದ್ಧಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರದಿಂದ ಕೇರಳ ಸರ್ಕಾರಕ್ಕೆ 267.35 ಕೋಟಿಗಳನ್ನು ಹಂಚಿಕೆ ಮಾಡಲಾಗಿದೆ.
ಇನ್ನು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ 1.11 ಕೋಟಿ ಕೋವಿಡ್ ಲಸಿಕೆಗಳನ್ನು ನೀಡುವುದಾಗಿಯೂ ಕೇರಳ ರಾಜ್ಯ ಮುಖ್ಯಮಂತ್ರಿ ಪಿಣರಾಯಿ ವಿಜಯನ್ಗೆ ಭರವಸೆ ನೀಡಿದರು. ಹಾಗೆಯೇ ಸಭೆಯಲ್ಲಿ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಕೂಡ ಉಪಸ್ಥಿತಿ ಇದ್ದರು.
Central Govt allocates ₹267.35 crore to Kerala under Emergency COVID Response Package- II. It will strengthen state’s health infrastructure & effectively manage #COVID19.
— Mansukh Mandaviya (@mansukhmandviya) August 16, 2021
Additionally, ₹1 crore will be made available to each district of Kerala for creating medicine pool. (2/4)
ಕೇರಳ ಸರ್ಕಾರದ ಜೊತೆ ಕೇರಳದಲ್ಲಿ ಸಭೆ ನಡೆಸಿರುವ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಟ್ವೀಟ್ ಮಾಡಿದ್ದಾರೆ, "ಕೇರಳದ ಕೋವಿಡ್ -19 ಪರಿಸ್ಥಿತಿಯನ್ನು ಪರಿಶೀಲಿಸಲು ಕೇರಳದ ಮುಖ್ಯಮಂತ್ರಿ ವಿಜಯನ್ ಪಿನರಾಯಿ ಮತ್ತು ಆರೋಗ್ಯ ಸಚಿವೆ ವೀಣಾ ಜಾರ್ಜ್ ಜಿ ಅವರೊಂದಿಗೆ, ರಾಜ್ಯದ ಅಧಿಕಾರಿಗಳೊಂದಿಗೆ ಗಂಭೀರ ಸಭೆ ನಡೆಸಲಾಗಿದೆ," ಎಂದು ತಿಳಿಸಿದ್ದಾರೆ.

"ಕೇಂದ್ರ ಸರ್ಕಾರವು ಕೇರಳಕ್ಕೆ ತುರ್ತು ಕೋವಿಡ್ ರೆಸ್ಪಾನ್ಸ್ ಪ್ಯಾಕೇಜ್- II ಅಡಿಯಲ್ಲಿ ರು. 267.35 ಕೋಟಿ ಮಂಜೂರು ಮಾಡಿದೆ. ಇದು ರಾಜ್ಯದ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುತ್ತದೆ ಮತ್ತು ಕೋವಿಡ್ ಅನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯವಾಗುತ್ತದೆ. ಹೆಚ್ಚುವರಿಯಾಗಿ, ಔಷಧಕ್ಕಾಗಿ ಕೇರಳದ ಪ್ರತಿ ಜಿಲ್ಲೆಗೆ 1 ಕೋಟಿ ಲಭ್ಯವಾಗಲಿದೆ," ಎಂದು ಸರಣಿ ಟ್ವೀಟ್ ಮೂಲಕ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಮಾಹಿತಿ ನೀಡಿದ್ದಾರೆ.
"ಕೇಂದ್ರ ಸರ್ಕಾರವು ಕೇರಳದ ಪ್ರತಿ ಜಿಲ್ಲೆಯ ಟೆಲಿಮೆಡಿಸಿನ್ ಸೌಲಭ್ಯಗಳನ್ನು ಪೂರೈಸುವ ಒಂದು ಶ್ರೇಷ್ಠತೆಯ ಕೇಂದ್ರವನ್ನು ರಚಿಸುವುದನ್ನು ಖಚಿತಪಡಿಸುತ್ತದೆ. ಮಕ್ಕಳ ಆರೋಗ್ಯಕ್ಕೆ ಆದ್ಯತೆ ನೀಡಲು, ಜಿಲ್ಲಾ ಆಸ್ಪತ್ರೆಗಳಲ್ಲಿ 10 ಕಿಲೋ-ಲೀಟರ್ ದ್ರವ ಆಮ್ಲಜನಕ ಶೇಖರಣಾ ಟ್ಯಾಂಕ್ ಸೌಲಭ್ಯದೊಂದಿಗೆ ಮಕ್ಕಳ ಐಸಿಯು ಸ್ಥಾಪಿಸಲಾಗುವುದು," ಎಂದು ಕೂಡಾ ಮನ್ಸುಖ್ ಮಾಂಡವೀಯಾ ತಿಳಿಸಿದರು.
"ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ, ರಾಜ್ಯಕ್ಕೆ ಕೋವಿಡ್ ಲಸಿಕೆಗಳನ್ನು ಒದಗಿಸುವುದು ಸೇರಿದಂತೆ ಕೇರಳಕ್ಕೆ ಸಾಧ್ಯವಿರುವ ಎಲ್ಲಾ ಸಹಾಯವನ್ನು ಕೇಂದ್ರ ಸರ್ಕಾರವು ಮಾಡುವ ಭರವಸೆ ನೀಡಿದೆ," ಎಂದು ಕೇಂದ್ರ ಆರೋಗ್ಯ ಸಚಿವರು ಟ್ವೀಟ್ ಮಾಡಿದ್ದಾರೆ.
ಇನ್ನು ಕೇಂದ್ರ ಸಚಿವರು ಕೇರಳ ರಾಜ್ಯಪಾಲರಾದ ಆರಿಫ್ ಮೊಹಮ್ಮದ್ ಖಾನ್ರನ್ನು ಕೂಡಾ ಭೇಟಿಯಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವರು, ''ಗೌರವಾನ್ವಿತ ಕೇರಳ ರಾಜ್ಯಪಾಲರಾದ ಆರಿಫ್ ಮೊಹಮ್ಮದ್ ಖಾನ್ರನ್ನು ಸೌಜನ್ಯಯುತವಾಗಿ ಭೇಟಿ ಮಾಡಿದ್ದೇನೆ. ಕೋವಿಡ್ ವಿರುದ್ಧ ಕೇರಳದ ಹೋರಾಟವನ್ನು ಬೆಂಬಲಿಸಲು ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳ ಕುರಿತು ನಾವು ಚರ್ಚಿಸಿದ್ದೇವೆ," ಎಂದು ಹೇಳಿದರು.

ಹಾಗೆಯೇ ಕೇರಳ ಭೇಟಿ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಸಚಿವರು ತಿರುವನಂತಪುರದ ಹೆಚ್ಎಲ್ಎಲ್ ಲೈಫ್ಕೇರ್ ಲಿಮಿಟೆಡ್ನ ತಾಯಿ ಘಟಕಕ್ಕೆ ಭೇಟಿ ನೀಡಿದರು. ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿ ಮತ್ತು ತಯಾರಿಸುತ್ತಿರುವ ವೈದ್ಯಕೀಯ ಉತ್ಪನ್ನಗಳ ಗುಣಮಟ್ಟವನ್ನು ಅವಲೋಕಿಸಿದರು. ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಜೊತೆಗೆ ತಿರುವನಂತಪುರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿರುವ ಕೋವಿಡ್ ಸೌಲಭ್ಯಕ್ಕೆ ಭೇಟಿ ನೀಡಿದರು.
ಕೇರಳದಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕು ಪ್ರಕರಣಗಳ ಜೊತೆಗೆ ದೇಶದಲ್ಲಿಯೂ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ದೇಶದ ಪ್ರಸ್ತುತ ದೈನಂದಿನ ಹೊಸ ಕೋವಿಡ್ ಪ್ರಕರಣದಲ್ಲಿ ಅರ್ಧದಷ್ಟು ಕೊರೊನಾ ವೈರಸ್ ಸೋಂಕು ಪ್ರಕರಣಗಳು ಕೇರಳ ರಾಜ್ಯದಿಂದಲ್ಲೇ ವರದಿಯಾಗುತ್ತಿದೆ. ಕಳೆದ ಎರಡು ವಾರಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ 37 ಭಾರತೀಯ ಜಿಲ್ಲೆಗಳ ಪೈಕಿ 11 ಜಿಲ್ಲೆಗಳು ಕೇರಳದ್ದು ಆಗಿದೆ. ಕೇರಳದ ಮಲಪ್ಪುರಂ, ಎರ್ನಾಕುಲಂ ಮತ್ತು ತ್ರಿಶೂರ್ ವಿಶೇಷವಾಗಿ ದುರ್ಬಲವಾಗಿದೆ.
ಇತ್ತೀಚೆಗೆ ರಾಜ್ಯದಿಂದ ಹಿಂದಿರುಗಿದ ಕೇಂದ್ರ ತಂಡವು ರಾಜ್ಯದ ಮನೆಯಲ್ಲಿ ಶೇಕಡ 80 ರಷ್ಟು ಕೋವಿಡ್ ಸೋಂಕಿಗೆ ಒಳಗಾಗಿದ್ದು ಅಸಮರ್ಪಕ ಸಂಪರ್ಕ ಪತ್ತೆಹಚ್ಚುವಿಕೆಯೊಂದಿಗೆ ಪ್ರತ್ಯೇಕವಾಗಿದೆ ಎಂಬುವುದನ್ನು ಗಮನಿಸಿದೆ. ಸಂಭಾವ್ಯ ಮೂರನೇ ಕೋವಿಡ್ ಅಲೆಯ ಭೀತಿಯ ನಡುವೆ ಕೇಂದ್ರ ಸರ್ಕಾರವು ಹೆಚ್ಚಿನ ಕೋವಿಡ್ ಪ್ರಕರಣಗಳು ದಾಖಲಾಗುತ್ತಿರುವ ರಾಜ್ಯಗಳು ಮತ್ತು ಜಿಲ್ಲೆಗಳ ಮೇಲೆ ಕೇಂದ್ರೀಕರಿಸಿದೆ.
ಭಾರತದಲ್ಲಿ ಮಂಗಳವಾರ 25,166 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 154 ದಿನಗಳಲ್ಲೇ ದಾಖಲಾದ ಅತಿ ಕಡಿಮೆ ಪ್ರಕರಣ ಇದಾಗಿದೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 25,166 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದರೂ ಸಕ್ರಿಯ ಪ್ರಕರಣಗಳ ಸಂಖ್ಯೆ 3,69,846ಗೆ ಇಳಿದಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications