ಕೇರಳ: ಪಾಲಕ್ಕಾಡ್ನಿಂದ ಮೆಟ್ರೋ ಮ್ಯಾನ್ ಶ್ರೀಧರನ್ ಸ್ಪರ್ಧೆ
ತಿರುವನಂತಪುರಂ, ಮಾರ್ಚ್ 14: ತಮಿಳುನಾಡು ಹಾಗೂ ಕೇರಳ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ(ಮಾರ್ಚ್ 14) ದಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ದೆಹಲಿ ಕೇಂದ್ರ ಕಚೇರಿಯಲ್ಲಿ ಪ್ರಕಟಿಸಿದರು. ಕೇರಳದಲ್ಲಿ 140 ಕ್ಷೇತ್ರಗಳ ಪೈಕಿ ಬಿಜೆಪಿ 115 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ಮಿಕ್ಕ 25 ಸ್ಥಾನಗಳು ನಾಲ್ಕು ಮಿತ್ರಪಕ್ಷಗಳಿಗೆ ಹಂಚಿಕೆಯಾಗಿದೆ.
ಇತ್ತೀಚೆಗೆ ಬಿಜೆಪಿ ಸೇರ್ಪಡೆಗೊಂಡಿರುವ ಮೆಟ್ರೋಮ್ಯಾನ್ ಎಂದೇ ಖ್ಯಾತರಾಗಿರುವ ಇ ಶ್ರೀಧರನ್ ಅವರಿಗೆ ಟಿಕೆಟ್ ಲಭಿಸಿದ್ದು, ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಮೂಲಸೌಕರ್ಯಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು, ಸಾಲದ ಸುಳಿಯಿಂದ ರಾಜ್ಯ ಹೊರ ಬರಲು ಬೇಕಾದ ಮಾರ್ಗಗಳನ್ನು ಕಂಡುಕೊಳ್ಳಲಾಗುವುದು, ಸಿಎಂ ಸ್ಥಾನಕ್ಕೂ ನಾನು ಸಿದ್ಧ ಎಂದು ಶ್ರೀಧರನ್ ಈಗಾಗಲೇ ಘೋಷಿಸಿದ್ದಾರೆ.
ಮಿಕ್ಕಂತೆ, ರಾಜ್ಯ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ಅವರು ಕಾಸರಗೋಡಿನ ಮಂಜೇಶ್ವರ ಹಾಗೂ ಪಥನಂತಿಟ್ಟದ ಕೊನ್ನಿ ಎರಡು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ನಟ ಕಮ್ ರಾಜಕಾರಣಿ ಸುರೇಶ್ ಗೋಪಿ ಅವರಿಗೆ ನಿರೀಕ್ಷೆಯಂತೆ ತ್ರಿಶ್ಶೂರ್ ಕ್ಷೇತ್ರದ ಟಿಕೆಟ್ ಸಿಕ್ಕಿದೆ.

ಡಾ. ಅಬ್ದುಲ್ ಸಲಾಂ ಅವರಿಗೆ ತಿರೂರ್ ಕ್ಷೇತ್ರ ಹಾಗೂ ಮಾಜಿ ಡಿಜಿಪಿ ಜಾಕಬ್ ಥಾಮಸ್ ಅವರಿಗೆ ಇರಿಂಜಲಕೂಡಾ ಕ್ಷೇತ್ರದ ಟಿಕೆಟ್ ಲಭಿಸಿದೆ. ಮಾಜಿ ಕೇಂದ್ರ ಸಚಿವ ಕೆಜೆ ಆಲ್ಫೋನ್ಸ್ ಅವರಿಗೆ ಕಂಜಿರಪ್ಪಲ್ಲಿ ಕ್ಷೇತ್ರದಿಂದ ಸ್ಪರ್ಧಿಸಲು ಸೂಚಿಸಲಾಗಿದೆ.
ಏಪ್ರಿಲ್ 6 ರಂದು ಕೇರಳದಲ್ಲಿ 140 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಮಲಪ್ಪುರಂ ಉಪ ಚುನಾವಣೆಗೂ ಅಂದೇ ಮತದಾನ ನಿಗದಿಯಾಗಿದೆ. ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ.
2020ರಲ್ಲಿ 140 ಸ್ಥಾನಗಳ ವಿಧಾನಸಭೆಯ ಬಲಾಬಲ: ಸಿಪಿಐ (ಎಂ) ನೇತೃತ್ವದ ಎಲ್ ಡಿ ಎಫ್ 93 ಸ್ಥಾನ, ಕಾಂಗ್ರೆಸ್ ನೇತೃತ್ವ ಯುಡಿಎಫ್ 42 ಹಾಗೂ ಬಿಜೆಪಿ ನೇತೃತ್ವದ ಎನ್ಡಿಎ 1 ಸ್ಥಾನ ಹೊಂದಿದೆ.












Click it and Unblock the Notifications