ಕೇರಳದಲ್ಲಿ ಕೇಂದ್ರ ಸಚಿವರಿಗೆ ಬೆವರಿಳಿಸಿದ ಕರ್ನಾಟಕದ ಐಪಿಎಸ್ ಅಧಿಕಾರಿ
Recommended Video

ಶಬರಿಮಲೆ, ನವೆಂಬರ್ 22: ಕೇರಳದ ಸಿಂಗಂ ಖ್ಯಾತಿಯ ಕರ್ನಾಟಕ ಮೂಲದ ಐಪಿಎಸ್ ಅಧಿಕಾರಿ ಯತೀಶ್ ಚಂದ್ರ ಮತ್ತೊಮ್ಮೆ ತಮ್ಮ ಖಡಕ್ತನ ಪ್ರದರ್ಶಿಸಿ ಭಾರಿ ಸುದ್ದಿಯಲ್ಲಿದ್ದಾರೆ.
ದಾವಣಗೆರೆ ಮೂಲದ ಐಪಿಎಸ್ ಅಧಿಕಾರಿ ಯತೀಶ್ ಚಂದ್ರ ಅವರು, ಶಬರಿಮಲೆಗೆ ಖಾಸಗಿ ವಾಹನಗಳಲ್ಲಿ ತೆರಳಲು ಅನುಮತಿ ನೀಡಬೇಕೆಂದು ಜೋರು ಮಾಡಿದ್ದ ಕೇಂದ್ರ ಬಿಜೆಪಿ ಸಚಿವರಿಗೆ ಖಡಕ್ ಉತ್ತರ ನೀಡಿ ಬೆವರಿಳಿಸಿದ್ದಾರೆ.
ಕೇಂದ್ರ ಹಡುಗು ಮತ್ತು ಹಣಕಾಸು ಖಾತೆ ರಾಜ್ಯ ಸಚಿವ ಪೊನ್ ರಾಧಾಕೃಷ್ಣ ಅವರು ಶಬರಿಮಲೆಗೆ ತೆರಳಲೆಂದು ಪಂಪಾಗೆ ತಮ್ಮ ಖಾಸಗಿ ವಾಹನದಲ್ಲಿ ತೆರಳುವದಕ್ಕೆ ಅವಕಾಶ ಕೊಡಬೇಕು ಜೊತೆಗೆ ತಮ್ಮ ಬೆಂಬಲಿಗರ ವಾಹನಗಳನ್ನೂ ಬಿಡಬೇಕು ಎಂದು ಐಪಿಎಸ್ ಅಧಿಕಾರಿ ಬಳಿ ವಾಗ್ವಾದ ಮಾಡಿದ್ದರು.
ಶಾಂತ ರೀತಿಯಿಂದಲೇ ವರ್ತಿಸಿದ ಐಪಿಎಸ್ ಅಧಿಕಾರಿ ಯತೀಶ್ ಚಂದ್ರ ಅವರು ಆ ನಂತರ ಕೇಂದ್ರ ಸಚಿವರಿಗೆ ಖಡಕ್ ಉತ್ತರಗಳನ್ನು ನೀಡಿ ಕೊನೆಗೆ ಕೇಂದ್ರ ಸಚಿವರು ರಾಜ್ಯ ರಸ್ತೆ ಸಾರಿಗೆ ಬಸ್ನಲ್ಲಿ ಪಂಪಾಕ್ಕೆ ತೆರಳುವಂತೆ ಮಾಡಿದ್ದಾರೆ.

ಪಂಪಾಕ್ಕೆ ಸರ್ಕಾರಿ ಬಸ್ಗಳನ್ನಷ್ಟೆ ಬಿಡಲಾಗುತ್ತಿದೆ
ಶಬರಿಮಲೆಗೆ ಹೋಗಲೆಂದು ಕೇಂದ್ರ ಸಚಿವ ಪೊನ್ ರಾಧಾಕೃಷ್ಣ ಅವರು ಬುಧವಾರ ನೀಲಕ್ಕಲ್ಗೆ ಆಗಮಿಸಿದ್ದರು. ನೀಲಕ್ಕಲ್ನಿಂದ 20 ಕಿ.ಮೀ ದೂರದ ಪಂಪಾಕ್ಕೆ ತೆರಳಿ ಅಲ್ಲಿಂದ ಅಯ್ಯಪ್ಪ ದೇಗುಲಕ್ಕೆ ಹೋಗುವುದು ವಾಡಿಕೆ. ಭದ್ರತೆ ಮತ್ತು ಇತರ ಕಾರಣಗಳಿಗಾಗಿ ನೀಲಕ್ಕಲ್ನಿಂದ ಪಂಪಾಕ್ಕೆ ಸರ್ಕಾರಿ ಬಸ್ಗಳನ್ನು ಮಾತ್ರವೇ ಬಿಡಲಾಗುತ್ತಿದೆ.

ಯತೀಶ್ ಚಂದ್ರ ಬಳಿ ವಾಗ್ವಾದ
ಆದರೆ ಕೇಂದ್ರ ಸಚಿವರು ಖಾಸಗಿ ವಾಹನಗಳಿಗೂ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಯತೀಶ್ ಚಂದ್ರ ಬಳಿ ವಾಗ್ವಾದ ನಡೆಸಿದ್ದಾರೆ. ಆಗಸ್ಟ್ನಲ್ಲಿ ಬಂದಿದ್ದ ಪ್ರವಾಹದಿಂದಾಗಿ ಪಂಪಾದಲ್ಲಿನ ವಾಹನ ನಿಲುಗಡೆ ನಿಲ್ದಾಣ ಕೊಚ್ಚಿ ಹೋಗಿದೆ. ಅಲ್ಲದೆ ಅಲ್ಲಿನ ಪರಿಸ್ಥಿತಿ ಸಹ ಸರಿ ಇಲ್ಲದ ಕಾರಣ ಖಾಸಗಿ ವಾಹನಗಳಿಗೆ ಅವಕಾಶ ನೀಡಲಾಗದು ಎಂದು ಯತೀಶ್ ಅವರು ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

'ಬೆಂಬಲಿಗರ ವಾಹನ ಬಿಡಲು ಆಗದು'
ಆದರೆ ಇದರಿಂದ ಸಮಾಧಾನವಾಗದ ಸಚಿವರು ತಮ್ಮ ವಾಹನ ಹಾಗೂ ಬೆಂಬಲಿಗರ ವಾಹನವನ್ನು ಪಂಪಾಕ್ಕೆ ಬಿಡುವಂತೆ ಒತ್ತಾಯ ಮಾಡಿದ್ದಾರೆ. ನೀವು ಭಕ್ತಾದಿಗಳಿಗೆ ಕಿರುಕುಳ ನೀಡುತ್ತಿದ್ದೀರಿ ಎಂದು ಆರೋಪಿಸಿದ್ದಾರೆ. ಇದರಿಂದ ಉತ್ತರಿಸಿದ ಯತೀಶ್ ಯಾವುದೇ ಕಾರಣಕ್ಕೂ ಖಾಸಗಿ ವಾಹನಗಳನ್ನು ಪಂಪಾಕ್ಕೆ ಬಿಡುವುದಿಲ್ಲವೆಂದು, ನಿಮ್ಮ ವಾಹನವನ್ನು ಬಿಡುತ್ತೇವೆ ಆದರೆ ಬೆಂಬಲಿಗರ ವಾಹನ ಬಿಡುವುದಿಲ್ಲ. ಇಲ್ಲದಿದ್ದರೆ ತಾವು ಸರ್ಕಾರಿ ಬಸ್ನಲ್ಲೇ ಹೋಗಬೇಕಾಗುತ್ತದೆ ಎಂದು ಯತೀಶ್ ಹೇಳಿದ್ದಾರೆ.

ಘಟನೆಯಿಂದ ಬಿಜೆಪಿ ಗರಂ
ಈ ಘಟನೆಯಿಂದ ಕೇರಳ ಬಿಜೆಪಿ ಗರಂ ಆಗಿದ್ದು, ಕಾಂಗ್ರೆಸ್ನ ರಮೇಶ್ ಚೆನ್ನಿತ್ತಲ ಶಬರಿಮಲೆಗೆ ಹೋಗಿದ್ದಾಗ ಇದೇ ಯತೀಶ್ ಗುಲಾಮನಂತೆ ಅವರ ಸೇವೆ ಮಾಡಿದ್ದರು ಎಂದು ಕಠು ವಾಗ್ದಾಳಿ ನಡೆಸಿದೆ. ಈ ಹಿಂದೆ ಕೇರಳ ಬಿಜೆಪಿ ಯತೀಶ್ ಚಂದ್ರ ಪರ ಮಾತನಾಡಿತ್ತು.

ಎಡರಂಗದ ಕಾರ್ಯಕರ್ತರ ಮೇಲೆ ಲಾಠಿ
2015 ರಲ್ಲಿ ಮೋದಿ rallyಗೆ ಎಡರಂಗ ಪ್ರತಿಭಟನೆ ಮಾಡುತ್ತಿದ್ದಾಗ. ಎಡರಂಗದ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರವನ್ನು ಯತೀಶ್ ಮಾಡಿದ್ದರು, ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಆಗ ಬಿಜೆಪಿ ಯತೀಶ್ ಬೆನ್ನಿಗೆ ನಿಂತಿತ್ತು. ಎಡರಂಗವು ಯತೀಶ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತಪಡಿಸಿತ್ತು.

ಎಡ ಪಕ್ಷಗಳು ಯತೀಶ್ ಪರ
ಆದರೆ ಈಗ ಬಿಜೆಪಿಯು ಯತೀಶ್ ವಿರುದ್ಧ ಭಾರಿ ಆಕ್ರೋಶ ಹೊರಹಾಕಿದ್ದು, ಯತೀಶ್ ಅವರನ್ನು 'ಗುಲಾಮ' ಎಂದು ಕರೆದಿದೆ. ಆಗ ಸಿಟ್ಟು ಹೊರಹಾಕಿದ್ದ ಎಡಪಕ್ಷಗಳು ಈಗ ಯತೀಶ್ ಅವರನ್ನು ಹೊಗಳುತ್ತಿವೆ. ಕೇರಳ ಸಿಎಂ ಪಿಣರಾಯಿ ವಿಜಯನ್ ಸಹ ಯತೀಶ್ ಅವರನ್ನು ವಹಿಸಿಕೊಂಡು ಮಾತನಾಡಿದ್ದಾರೆ.












Click it and Unblock the Notifications