ಕೇರಳದ ಸನ್ಯಾಸಿನಿ ಅತ್ಯಾಚಾರ ಪ್ರಕರಣ: ಬಿಷಪ್ ಫ್ರಾಂಕೋ ಮುಳಕ್ಕಲ್ ದೋಷಮುಕ್ತ
ತಿರುವನಂತಪುರಂ ಜನವರಿ 14: ಕೇರಳದ ಸನ್ಯಾಸಿನಿ ಅತ್ಯಾಚಾರ ಪ್ರಕರಣದ ಬಗ್ಗೆ ಇಂದು ನ್ಯಾಯಾಲಯ ತೀರ್ಪು ನೀಡಿದೆ. ಕೇರಳದ ಸನ್ಯಾಸಿನಿ ಅತ್ಯಾಚಾರ ಪ್ರಕರಣದಲ್ಲಿ ಬಿಷಪ್ ಫ್ರಾಂಕೋ ಮುಳಕ್ಕಲ್ ಅವರನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ. ಕೇರಳದ ಕೊಟ್ಟಾಯಂ ಜಿಲ್ಲೆಯ ನ್ಯಾಯಾಲಯ ಶುಕ್ರವಾರದಂದು ಅತ್ಯಾಚಾರ ಪ್ರಕರಣದಲ್ಲಿ ಜಲಂಧರ್ ಬಿಷಪ್ ಫ್ರಾಂಕೋ ಮುಳಕ್ಕಲ್ ಅವರನ್ನು ಖುಲಾಸೆಗೊಳಿಸಿದೆ. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಿ.ಗೋಪಕುಮಾರ್ ಅವರ ನೇತೃತ್ವದಲ್ಲಿ ಇಂದು ವಿಚಾರಣೆ ಬಳಿಕ ತೀರ್ಪು ಹೊರಬಂದಿದೆ.
ಕೊಟ್ಟಾಯಂ ಜಿಲ್ಲೆಯ ಕುರವಿಲಂಗಾಡ್ನಲ್ಲಿರುವ ಕಾನ್ವೆಂಟ್ನ ಸನ್ಯಾಸಿನಿಯೊಬ್ಬರು 2014 ಮತ್ತು 2016 ರ ನಡುವೆ ಮುಳಕ್ಕಲ್ ಅವರು ಕಾನ್ವೆಂಟ್ನಲ್ಲಿ 13 ಬಾರಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಸದ್ಯ ಕೊಟ್ಟಾಯಂ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಪ್ರಕರಣದಲ್ಲಿ ಮುಳಕ್ಕಲ್ ಅವರನ್ನು ಖುಲಾಸೆಗೊಳಿಸಿದೆ. ಈ ವೇಳೆ ನ್ಯಾಯಾಲಯದ ಕೊಠಡಿಯಲ್ಲಿ ಹಾಜರಿದ್ದ ಮುಳಕ್ಕಲ್ ಭಾವುಕರಾಗಿ ವಕೀಲರನ್ನು ಅಪ್ಪಿಕೊಂಡರು. ಮುಳಕ್ಕಲ್ ಅವರು ನಿರಪರಾಧಿ ಆಗಿರುವುದರಿಂದ ಖುಲಾಸೆಯಾಗುವುದು ಖಚಿತ ಎಂದು ಕೋರ್ಟ್ ಆವರಣದ ಬಳಿ ಮುಳಕ್ಕಲ್ ಬೆಂಬಲಿಗರು ಸಿಹಿ ಹಂಚಿದರು. ಇದೊಂದು ಹುಸಿಯಾದ ಪ್ರಕರಣವಾಗಿದ್ದು, ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಬೆಂಬಲಿಗರು ಹೇಳಿದ್ದಾರೆ.
ಸನ್ಯಾಸಿನಿಯರು 2018 ರಲ್ಲಿ ದೂರು ನೀಡಿದ್ದರು. ಸನ್ಯಾಸಿನಿಯರ ಒಂದು ಗುಂಪು ವಿಚಾರಣೆ ನಡೆಸಿದ ನಂತರ ಪೊಲೀಸರು ಸನ್ಯಾಸಿನಿಯ ಅರ್ಜಿಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದರು. ಪ್ರಕರಣದಲ್ಲಿ ಮುಲಕ್ಕಲ್ ಅವರನ್ನು ಸೆ.21, 2018 ರಂದು ಬಂಧಿಸಲಾಯಿತು. ಬಂಧನದ ನಂತರ ಮುಲಕ್ಕಲ್ ಅವರನ್ನು ಬಿಷಪ್ ಆಗಿ ಅವರ ಜವಾಬ್ದಾರಿಯಿಂದ ದೂರವಿಡಲಾಗಿತ್ತು. ಅತ್ಯಾಚಾರ, ಅಸ್ವಾಭಾವಿಕ ಲೈಂಗಿಕತೆ, ಅಕ್ರಮ ಬಂಧನ ಮತ್ತು ಕ್ರಿಮಿನಲ್ ಬೆದರಿಕೆಗಾಗಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಆತನ ಮೇಲೆ ಆರೋಪ ಹೊರಿಸಲಾಗಿತ್ತು.
ಕೇರಳದ ಸನ್ಯಾಸಿನಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜಲಂಧರ್ ಧರ್ಮ ಪ್ರಾಂತ್ಯದ ಮಾಜಿ ಪಾದ್ರಿ ಫ್ರಾಂಕೋ ಮುಲ್ಲಾಕಲ್ ವಿರುದ್ಧ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆ ನಡೆಸಿತ್ತು. ತಂಡವು 80 ಪುಟಗಳ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಇದರಲ್ಲಿ 83 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಇದರೊಂದಿಗೆ ಲ್ಯಾಪ್ಟಾಪ್, ಮೊಬೈಲ್ ಫೋನ್ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ಸಾಕ್ಷ್ಯವಾಗಿ ಸಲ್ಲಿಸಲಾಗಿದೆ. ಜೂನ್ 2018 ರಲ್ಲಿ, ಸನ್ಯಾಸಿನಿಯೊಬ್ಬರು ರೋಮನ್ ಕ್ಯಾಥೋಲಿಕ್ ಧರ್ಮದ ಜಲಂಧರ್ ಡಯಾಸಿಸ್ನ ಆಗಿನ ಪಾದ್ರಿ ಫ್ರಾಂಕೋ ಮುಲಕ್ಕಲ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದರು. ಆರೋಪಪಟ್ಟಿಯಲ್ಲಿ ಸಿರೋ-ಮಲಬಾರ್ ಕ್ಯಾಥೋಲಿಕ್ ಚರ್ಚ್ನ ಕಾರ್ಡಿನಲ್ ಮಾರ್ ಜಾರ್ಜ್ ಅಲೆಂಚೇರಿ, ಮೂವರು ಬಿಷಪ್ಗಳು, 11 ಪಾದ್ರಿಗಳು ಮತ್ತು 22 ಸನ್ಯಾಸಿನಿಯರನ್ನು ಹೆಸರಿಸಲಾಗಿದೆ. ಎಫ್ಐಆರ್ ರದ್ದುಗೊಳಿಸುವಂತೆ ಫ್ರಾಂಕೋ ಕೇರಳ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದ್ದರು, ಆದರೆ ಎರಡೂ ನ್ಯಾಯಾಲಯಗಳು ನಿರಾಕರಿಸಿದ್ದವು.
ಆರೋಪಿಯಿಂದ ಸನ್ಯಾಸಿನಿ ತುಂಬಾ ಹೆದರಿದ್ದಳು. ಬಿಷಪ್ ಎರಡು ವರ್ಷಗಳ ಕಾಲ ಅಂದರೆ 2015 ರಿಂದ 2017 ರವರೆಗೆ ಚಾಟ್ ಮತ್ತು ವೀಡಿಯೊ ಕರೆ ಮಾಡುತ್ತಿದ್ದರು ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ. ಅವರು ಬಿಷಪ್ಗೆ ಹೆದರುತ್ತಿದ್ದರು, ಆದ್ದರಿಂದ ಅವರು ಮೌನವಾಗಿದ್ದರು ಎಂದು ತಿಳಿದು ಬಂದಿದೆ. ಆದರೆ ತನಿಖಾ ತಂಡವು ಶಿಕ್ಷೆಯ ನಿರೀಕ್ಷೆಯಲ್ಲಿದೆ ಎಂದು ಪ್ರಕರಣದ ತನಿಖೆಯ ನೇತೃತ್ವ ವಹಿಸಿರುವ ಪೊಲೀಸ್ ವರಿಷ್ಠಾಧಿಕಾರಿ ಎಸ್ ಹರಿಶಂಕರ್ ಹೇಳಿದ್ದರು. ಆದರೆ ನಂತರ ಜಾಮೀನಿನ ಮೇಲೆ ಫ್ರಾಂಕೋ ಅವರನ್ನು ಬಿಡುಗಡೆ ಮಾಡಲಾಯಿತು.
ಆರೋಪಿಗಳ ವಿರುದ್ಧ ಸಾಕಷ್ಟು ಪುರಾವೆಗಳಿದ್ದು, ಯಾವುದೇ ಸಾಕ್ಷಿಗಳು ಪ್ರತಿಕೂಲವಾಗಿ ಬದಲಾಗಿಲ್ಲ ಎಂದು ಹರಿಶಂಕರ್ ಹೇಳಿದ್ದಾರೆ. ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು ಎಂದರು.