ಸಿಡ್ನಿ : ಮಗಳನ್ನೆತ್ತಿಕೊಂಡೇ ರೈಲಿಗೆ ತಲೆಯೊಡ್ಡಿದ ತಾಯಿ
ಸಿಡ್ನಿ, ಡಿಸೆಂಬರ್ 19 : ಹೃದಯ ಕಿತ್ತುಬರುವಂಥ ಘಟನೆಯೊಂದರಲ್ಲಿ 30 ವರ್ಷದ ಮಹಿಳೆಯೊಬ್ಬರು ತನ್ನ 3 ವರ್ಷದ ಮಗಳೊಂದಿಗೆ ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಯಿ ಅಸುನೀಗಿದ್ದು, ತೀವ್ರವಾಗಿ ಗಾಯಗೊಂಡಿರುವ ಮಗಳು ಬದುಕಿಗಾಗಿ ಹೋರಾಟ ನಡೆಸಿದ್ದಾಳೆ.
ಟಾಟಾ ಕನ್ಸಲ್ಟನ್ಸಿ ಮಾಜಿ ಉದ್ಯೋಗಿಯಾಗಿರುವ ಕೇರಳ ಮೂಲದ ಅರ್ಚನಾ ಕುನ್ನತ್ ತನ್ನ ಮಗಳು ಶ್ರೇಯಾಳನ್ನು ಎತ್ತಿಕೊಂಡೇ ಸಿಡ್ನಿಯ ಹ್ಯಾರಿಸ್ ಪಾರ್ಕ್ ಸ್ಟೇಷನ್ನಿನಲ್ಲಿ ವೇಗವಾಗಿ ಬರುತ್ತಿದ್ದ ರೈಲಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತುರ್ತು ಸೇವಾ ಸಿಬ್ಬಂದಿ ಶ್ರೇಯಾಳನ್ನು ರಕ್ಷಿಸಿದ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ. [ದುರಂತ ಸಾವಿಗೀಡಾದ ಕನ್ನಡತಿಗೆ ಸಿಡ್ನಿಯಲ್ಲಿ ಸ್ಮರಣೆ]

ಅರ್ಚನಾ ಟಿಸಿಎಸ್ ತೊರೆದಿದ್ದರೆ ಅವರ ಗಂಡ ಸುಜಿತ್ ವೈಕಕ್ಕಾರ ಟಿಸಿಎಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲವೇ ನಾಲ್ಕೇ ದಿನಗಳ ಹಿಂದೆ ಐದನೇ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದ ಸಿಬ್ಬಂದಿ ಸಂತೋಷಕೂಟದ ಚಿತ್ರಗಳನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದರು. ಈ ಘಟನೆಯ ನಂತರ ಇಬ್ಬರ ಫೇಸ್ ಬುಕ್ ಪುಟಗಳನ್ನು ತೆಗೆದುಹಾಕಲಾಗಿದೆ.
ಸಿಡ್ನಿಯ ವೆಸ್ಟ್ಮೆಡ್ ಆಸ್ಪತ್ರೆಯಲ್ಲಿ ಜೀವನ್ಮರಣದೊಂದಿಗೆ ಹೋರಾಟ ನಡೆಸಿರುವ ಶ್ರೇಯಾಳ ಸ್ಥಿತಿ ಗಂಭೀರವಾಗಿದ್ದು, ನ್ಯೂ ಸೌತ್ ವೇಲ್ಸ್ನ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. [ಸಿಡ್ನಿಯಲ್ಲಿ ಟೆಕ್ಕಿ ಪಂಕಜ್ ಸಾವಿಗೆ ಏನು ಕಾರಣ?]












Click it and Unblock the Notifications