ಯಾಸಿನ್ ಮಲಿಕ್ ಬಂಧನ: ಕಾಶ್ಮೀರಕ್ಕೆ 100 ಅರೆಸೇನಾ ತುಕಡಿ ರವಾನೆ
ಯಾಸಿನ್ ಮಲಿಕ್ ಸೇರಿ 150 ಮಂದಿ ಬಂಧನ: ಕಾಶ್ಮೀರಕ್ಕೆ 100 ಅರೆಸೇನಾ ತುಕಡಿ ರವಾನೆಶ್ರೀನಗರ, ಪೆಬ್ರವರಿ 23: ಪ್ರಮುಖ ಬೆಳವಣಿಗೆಯಲ್ಲಿ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ, ಜೆಕೆಎಲ್ಎಫ್ ಮುಖ್ಯಸ್ಥ ಯಾಸಿನ್ ಮಲಿಕ್ ಮತ್ತು ನೂರಾರು ಜಮಾತ್ ಎ ಇಸ್ಲಾಂ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಅದರ ಬೆನ್ನಲ್ಲೇ ಕಣಿವೆ ರಾಜ್ಯದಲ್ಲಿ ಹಿಂಸಾಚಾರ ಭುಗಿಲೇಳುವ ಲಕ್ಷಣಗಳು ಕಂಡು ಬಂದಿದ್ದು, ಸುಮಾರು ನೂರು ಹೆಚ್ಚುವರಿ ಅರೆಸೇನಾ ಪಡೆಗಳ ತಂಡಗಳನ್ನು ನಿಯೋಜಿಸಲು ಕೇಂದ್ರ ಸರ್ಕಾರ ಆದೇಶಿಸಿದೆ.
ಕೇಂದ್ರ ಶ್ರೀನಗರದಲ್ಲಿನ ನಿವಾಸದಲ್ಲಿ ಮಲಿಕ್ನನ್ನು ಶುಕ್ರವಾರ ಸಂಜೆ ಬಂಧಿಸಲಾಗಿದೆ. ಕೋಠಿ ಬಾತ್ ಪೊಲೀಸ್ ಠಾಣೆಯಲ್ಲಿ ಆತನನ್ನು ಬಂಧನದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಶುಕ್ರವಾರ ನಡೆಸಿದ ಚುರುಕಿನ ಕಾರ್ಯಾಚರಣೆಯಲ್ಲಿ ಜೆಇಎಲ್ ಮುಖ್ಯಸ್ಥ ಹಮೀದ್ ಫಯಾಜ್ ಸೇರಿದಂತೆ ಸುಮಾರು 150 ಮುಖಂಡರು, ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಸುಮಾರು 18 ಹುರಿಯತ್ ಮುಖಂಡರು ಹಾಗೂ 150ಕ್ಕೂ ಇತರೆ ರಾಜಕೀಯ ಮುಖಂಡರಿಗೆ ನೀಡಲಾಗಿದ್ದ ಭದ್ರತೆಯನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆದುಕೊಂಡ ಬೆನ್ನಲ್ಲೇ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಬಂಧನ ಏಕೆ?
ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ ಪರಿಚ್ಛೇದ 35 (ಎ)ಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸೋಮವಾರ ವಿಚಾರಣೆಗೆ ನಡೆಸಲಿದೆ. ಈ ಹಿನ್ನೆಲೆಯಲ್ಲಿ ಕಣಿವೆ ರಾಜ್ಯದಲ್ಲಿ ಭಾರಿ ಪ್ರಮಾಣದ ಪ್ರತಿಭಟನೆ, ಹಿಂಸಾಚಾರ ನಡೆಯಲಿದೆ ಎಂಬ ಮಾಹಿತಿ ಆಧಾರದಲ್ಲಿ ಈ ಪ್ರಮುಖ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅನಂತನಾಗ್, ಪಹಲ್ಗಾಂ, ಡಿಯಾಲ್ಗಂ ಮತ್ತು ಟ್ರಾಲ್ ಭಾಗಗಳಿಂದ ಜಮಾತ್ ಮುಖಂಡರನ್ನು ಬಂಧಿಸಲಾಗಿದೆ. ಅರೆ ಸೇನಾಪಡೆಯ ಸುಮಾರು 10,000 ಸೈನಿಕರನ್ನು ರಾಜ್ಯಕ್ಕೆ ವಿಮಾನದ ಮೂಲಕ ರವಾನಿಸಲಾಗಿದೆ.
| Array |
ಮೆಹಬೂಬಾ ಮುಫ್ತಿ ವಿರೋಧ
ಪ್ರತ್ಯೇಕತಾವಾದಿ ಮುಖಂಡರನ್ನು ಬಂಧಿಸಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಹುರಿಯತ್ ಮುಖಂಡರು ಮತ್ತು ಜಮಾತ್ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಈ ರೀತಿಯ ಅವಸರದ ನಡೆ ಏಕೆಂದು ಅರ್ಥವಾಗುತ್ತಿಲ್ಲ. ಕಾನೂನಿನ ಯಾವ ಹಿನ್ನೆಲೆಯಲ್ಲಿ ಈ ಬಂಧನಗಳು ನ್ಯಾಯೋಚಿತವಾಗಿವೆ? ನೀವು ವ್ಯಕ್ತಿಯನ್ನು ಜೈಲಿಗೆ ಹಾಕಬಹುದು. ಆದರೆ, ಅವರ ಆಲೋಚನೆಗಳನ್ನಲ್ಲ ಎಂದು ಮೆಹಬೂಬಾ ಮುಫ್ತಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
|
ಸಾಜದ್ ಲೋನ್ ಎಚ್ಚರಿಕೆ
ಪೀಪಲ್ಸ್ ಕಾನ್ಫರೆನ್ಸ್ನ ಮುಖ್ಯಸ್ಥ ಸಾಜದ್ ಲೋನೆ ಈ ನಡೆಯನ್ನು ಖಂಡಿಸಿದ್ದಾರೆ. ಈ ಮಾದರಿಯ ನಡೆ ಈ ಹಿಂದೆ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗುವಂತೆ ಮಾಡಿತ್ತು ಎಂಬುದನ್ನು ಮರೆಯಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. 1990ರಲ್ಲಿ ಭಾರಿ ಪ್ರಮಾಣದ ಬಂಧನಗಳು ನಡೆದಿದ್ದವು. ಮುಖಂಡರನ್ನು ಜೋಧಪುರ ಮತ್ತು ದೇಶದ ಅನೇಕ ಜೈಲುಗಳಲ್ಲಿ ಇರಿಸಲಾಗಿತ್ತು. ಆಗ ಪರಿಸ್ಥಿತಿ ಕೈಮೀರಿ ಹೋಗಿತ್ತು. ಈ ಮಾದರಿ ಪ್ರಯೋಗಿಸಿ ವಿಫಲವಾಗಿರುವಂಥದ್ದು. ಇದರಿಂದ ದಯವಿಟ್ಟು ದೂರ ಇರಿ. ಇದು ಪ್ರಯೋಜನಕ್ಕೆ ಬರುವುದಿಲ್ಲ ಎಂದು ಸಾಜದ್ ಹೇಳಿದ್ದಾರೆ.

ಬಂಧಿತರ ವಿಚಾರಣೆ
ಉತ್ತರ ಪ್ರದೇಶದಲ್ಲಿ ಗುರುವಾರ ಬಂಧಿಸಲಾದ ಇಬ್ಬರು ಶಂಕಿತ ಜೈಶ್ ಎ ಮೊಹಮ್ಮದ್ ಉಗ್ರರನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಡಿಸಿದೆ.
ಪುಲ್ವಾಮಾ ದಾಳಿಯ ತನಿಖೆ ನಡೆಸುತ್ತಿರುವ ಸಂಸ್ಥೆ, ಬಂಧಿತ ಶಹಜ್ವಾಜ್ ಅಹ್ಮದ್ ತೆಲಿ ಮತ್ತು ಅಖಿಬ್ ಅಹ್ಮದ್ ಮಲಿಕ್ ಕುರಿತಂತೆ ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳದಿಂದ ವಿವರಗಳನ್ನು ಕೇಳಿದೆ. ಬಂಧಿತ ಉಗ್ರರಿಗೂ ಫೆ. 14ರಂದು ನಡೆದ ದಾಳಿಗೂ ಸಂಬಂಧವಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಶಹನ್ವಾಜ್ ಜೈಶ್ಗೆ ಸದಸ್ಯರನ್ನು ನೇಮಿಸುತ್ತಿದ್ದ. ಅಲ್ಲದೆ, ಗ್ರೆನೇಡ್ ದಾಳಿಯಲ್ಲಿಯೂ ಪಳಗಿದ್ದ. ಆತನ ವಿರುದ್ಧ ನಮ್ಮ ಬಳಿ ಸಾಕ್ಷ್ಯಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications