ಕಾಶ್ಮೀರದಲ್ಲಿ ಮತ್ತೆ ಉಗ್ರರ ಹಾವಳಿ: ಅಂಗಡಿ ಮಾಲೀಕನ ಹತ್ಯೆ
ಶ್ರೀನಗರ, ಆಗಸ್ಟ್ 30: ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲವು ದಿನಗಳಿಂದ ನಿಯಂತ್ರಣದಲ್ಲಿದ್ದ ಉಗ್ರರ ಚಟುವಟುವಟಿಕೆಗಳು ಮತ್ತೆ ಆರಂಭವಾಗಿವೆ. ನಿಯೋಜಿಸಲಾಗಿದ್ದ ಹೆಚ್ಚುವರಿ ಭದ್ರತೆಯನ್ನು ನಿಧಾನವಾಗಿ ಸಡಿಲಿಸಲಾಗುತ್ತಿದ್ದಂತೆಯೇ ಉಗ್ರರು ತಮ್ಮ ಅಟ್ಟಹಾಸ ಮೆರೆಯಲು ಆರಂಭಿಸಿದ್ದಾರೆ.
ಗುರುವಾರ ತಡ ರಾತ್ರಿ ಶ್ರೀನಗರ ನಗರ ಪ್ರದೇಶದ ಹೊರವಲಯ ಪರಿಂಪೋರಾ ಎಂಬಲ್ಲಿ ಉಗ್ರರು 65 ವರ್ಷದ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ್ದಾರೆ.
ಅಂಗಡಿ ಮಾಲೀಕರಾಗಿದ್ದ ಗುಲಾಮ್ ಮೊಹಮ್ಮದ್ ಅವರು ಅಂಗಡಿ ಬಾಗಿಲು ಮುಚ್ಚುವ ವೇಳೆಯಲ್ಲಿ ಈ ದಾಳಿ ನಡೆದಿದೆ. ಮೋಟಾರ್ ಬೈಕ್ನಲ್ಲಿ ಬಂದ ಮೂವರು ಯುವಕರ ಗುಂಪು ಅಂಗಡಿ ಬಾಗಿಲು ಮುಚ್ಚುತ್ತಿದ್ದ ಗುಲಾಮ್ ಅವರ ಮೇಲೆ ಪಿಸ್ತೂಲಿನಿಂದ ಗುಂಡಿನ ದಾಳಿ ನಡೆಸಿದೆ. ತೀವ್ರ ಗಾಯಗೊಂಡಿದ್ದ ಅವರನ್ನು ಪೊಲೀಸ್ ಆಸ್ಪತ್ರೆಗೆ ಕೂಡಲೇ ಕರೆದೊಯ್ಯಲಾಯಿತು. ಆದರೆ ಅವರು ಅಲ್ಲಿಗೆ ಕರೆತರುವಾಗಲೇ ಮೃತಪಟ್ಟಿದ್ದರು ಎಂದು ವೈದ್ಯರು ಘೋಷಿಸಿದರು.

ಈ ಪ್ರದೇಶದಲ್ಲಿ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದು, ಪಾತಕಿ ಉಗ್ರರಿಗಾಗಿ ಹುಡುಕಾಟ ನಡೆಸಿದ್ದಾರೆ.
ಇದಕ್ಕೂ ಮುನ್ನ ಗುರುವಾರ ಅನಂತ್ ನಾಗ್ ಜಿಲ್ಲೆಯ ಬಿಜ್ಬೆಹರಾದಲ್ಲಿ ಕಲ್ಲು ತೂರಾಟಗಾರರು ಟ್ರಕ್ ಚಾಲಕನೊಬ್ಬನ್ನು ಗುರಿಯಾಗಿರಿಸಿಕೊಂಡು ಕಲ್ಲು ತೂರಾಟ ನಡೆಸಿ ಆತನನ್ನು ಹತ್ಯೆ ಮಾಡಿದ್ದರು.












Click it and Unblock the Notifications