ಕಾಶ್ಮೀರದ ಅಮಾನತಾದ ಡಿವೈಎಸ್ಪಿಗೂ ಪಾಕ್ ರಾಯಭಾರ ಕಚೇರಿಗೂ ನಂಟು!
ನವದೆಹಲಿ, ಜುಲೈ 7: ಭಯೋತ್ಪಾದಕ ಚಟುವಟಿಕೆಗೆ ಉತ್ತೇಜನ ನೀಡಿದ ಆರೋಪದ ಮೇಲೆ ಅಮಾನತುಗೊಂಡಿರುವ ಜಮ್ಮು ಮತ್ತು ಕಾಶ್ಮೀರದ ಉಪ ಪೊಲೀಸ್ ವರಿಷ್ಠಾಧಿಕಾರಿ ದೇವಿಂದರ್ ಸಿಂಗ್ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಚಾರ್ಜ್ ಶೀಟ್ ಸಲ್ಲಿಸಿದೆ. ಭಾರತದಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಯ ಸಂಪರ್ಕವನ್ನು ಮಾಜಿ ಡಿವೈಎಎಸ್ಪಿ ಹೊಂದಿದ್ದರು ಎಂದು ದೋಷಾರೋಪಣ ಪಟ್ಟಿಯಲ್ಲಿ ಹೇಳಲಾಗಿದೆ.
ದೇವಿಂದರ್ ಸಿಂಗ್ ಜೊತೆಗೆ ನಿಷೇಧಿತ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಕಮಾಂಡರ್ ಸೈಯದ್ ನವೀದ್ ಮುಷ್ತಾಕ್ ಅಲಿಯಾಸ್ ನವೀದ್ ಬಾಬು, ಇರ್ಫಾನ್ ಶಫಿ ಮಿತ್, ರಫಿ ಅಹಮದ್, ತನ್ಮೀರ್ ಅಹಮದ್ ವಾನಿ, ನವೀದ್ ಬಾಬು ಸಹೋದರ ಸೈಯದ್ ಇರ್ಫಾನ್ ಅಹಮದ್ ಅವರನ್ನು ಚಾರ್ಜ್ ಶೀಟ್ ನಲ್ಲಿ ಹೆಸರಿಸಲಾಗಿದೆ.
ಜನವರಿ 11ರಂದು ಇಬ್ಬರು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರ ಜೊತೆ ಡಿಎಸ್ಪಿ ದೇವಿಂದರ್ ಸಿಂಗ್ ಇದ್ದಾಗ ಸಿಕ್ಕಿ ಬಿದ್ದಿದ್ದರು. ಶೋಪಿಯನ್ ನಲ್ಲಿದ್ದ ನವೀದ್ ಬಾಬು, ಮೀರ್ ಇರ್ಫಾನ್, ರಫಿ ರಥಾರ್ ರನ್ನು ಶ್ರೀನಗರಕ್ಕೆ ಕರೆ ತಂದಿದ್ದ ಸಿಂಗ್ ನಂತರ ನವದೆಹಲಿಗೆ ಕರೆದೊಯ್ಯಲು ಸಜ್ಜಾಗಿದ್ದರು. ಆದರೆ, ಈ ಪ್ರಯತ್ನದಲ್ಲಿರುವಾಗ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದರು.

ಅತ್ತರ್ ಶೀಶೆಯಿಂದ ಹಿಡಿದು ಎಕೆ 47 ರೈಫಲ್ ಜಪ್ತಿ
ಪ್ರಕರಣ ದಾಖಲಿಸಿಕೊಂಡಿದ್ದ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಎಫ್ಐಆರ್ ಹಾಕಿದ್ದರು. ನಂತರ ಸಿಂಗ್ ಅವರ ಮನೆ, ಕಚೇರಿ ಪರಿಶೀಲಿಸಿ, 32 ಸಾಮಾಗ್ರಿಗಳನ್ನು ಜಪ್ತಿ ಮಾಡಲಾಗಿದೆ. ಜಪ್ತಿಯಾದ ಸಾಮಾಗ್ರಿಗಳ ಪೈಕಿ ಅತ್ತರ್ ಶೀಶೆಯಿಂದ ಹಿಡಿದು ಎಕೆ 47 ರೈಫಲ್ ತನಕ ಇದೆ. ನಂತರ ಪ್ರಕರಣ ಕೈಗೆತ್ತಿಕೊಂಡ ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಇದೀಗ ಚಾರ್ಜ್ ಶೀಟ್ ಸಲ್ಲಿಸಿದೆ.

ರಾಯಭಾರ ಕಚೇರಿ ಜೊತೆ ಸಂಪರ್ಕ
ನವದೆಹಲಿಯಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿ ಜೊತೆ ನಿರಂತರ ಸಂಪರ್ಕದಲ್ಲಿದ್ದ ದೇವಿಂದರ್ ಸಿಂಗ್ ಅವರು ಲಭ್ಯವಾದ ಮಾಹಿತಿಯನ್ನು ಸಾಮಾಜಿಕ ಜಾಲ ತಾಣ ಬಳಸಿ ಉಗ್ರರಿಗೆ ರವಾನಿಸುತ್ತಿದ್ದರು ಎಂದು ತಿಳಿದು ಬಂದಿದೆ. ದೇವಿಂದರ್ ಸಿಂಗ್ ಗೆ ಮಾಜಿ ಪೊಲೀಸ್ ಕಾನ್ಸ್ ಟೇಬಲ್ ನವೀದ್ ಬಾಬು ನೆರವಾಗುತ್ತಿದ್ದ.

ಗಡಿಭಾಗದ ಉಗ್ರ ಚಟುವಟಿಕೆಗೆ ನೆರವು
ಗಡಿ ನಿಯಂತ್ರಿತ ರೇಖೆ ಆಸುಪಾಸಿನಲ್ಲಿ ಉಗ್ರ ಚಟುವಟಿಕೆ, ಅಕ್ರಮ ಹಣ ಸಾಗಾಟಕ್ಕೆ ದೇವಿಂದರ್ ಸಿಂಗ್ ಅವರು ತನ್ವೀರ್ ಅಹ್ಮದ್ ವನಿ ಬಳಸಿಕೊಂಡಿದ್ದರು. LoC ಟ್ರೇಡರ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷನಾಗಿದ ತನ್ವೀರ್ ಹಣಕಾಸು ವ್ಯವಸ್ಥೆ ಬಳಸಿಕೊಂಡು ಗಡಿಭಾಗದಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ವ್ಯಾಪಾರಿಗಳ ಜೊತೆ ವ್ಯವಹಾರ ನಡೆಸಲಾಗುತ್ತಿತ್ತು.

ದಶಕಗಳಿಂದ ಅಕ್ರಮ ಚಟುವಟಿಕೆಯಲ್ಲಿ ಭಾಗಿ
1994ರಲ್ಲಿ ಕಾಶ್ಮೀರ ಕಣಿವೆಯ ಬದ್ಗಾಮ್ನಲ್ಲಿ ಪೊಲೀಸರ ವಶದಲ್ಲಿನ ಆರೋಪಿಗಳು ಅಸಹಜವಾಗಿ ಮೃತಪಟ್ಟಿದ್ದರು. ಅದರ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಆಗ ದೇವಿಂದರ್ ಸಿಂಗ್ ವಿಶೇಷ ಕಾರ್ಯಾಚರಣೆ ಪಡೆಯ ನೇತೃತ್ವ ವಹಿಸಿದ್ದರು. ಇದರ ನಂತರ ದೇವಿಂದರ್ ಅವರನ್ನು ತಮ್ಮ ಮೂಲಕ ಶ್ರೇಣಿಗೆ ಇಳಿಸಿ ರಾಜ್ಯ ಗುಪ್ತಚರ ವಿಭಾಗಕ್ಕೆ ನೇಮಿಸಲಾಗಿತ್ತು. 2015ರಲ್ಲಿ ದೇವಿಂದರ್ ಹಾಗೂ ವಿಶೇಷ ಕಾರ್ಯಾಚರಣೆ ದಳದ ಇನ್ನೊಬ್ಬ ಡೆಪ್ಯುಟಿ ಸುಪರಿಂಡೆಂಟ್ ಇಬ್ಬರೂ ಜನಸಾಮಾನ್ಯರಿಂದ ಸುಲಿಗೆ ಮಾಡುತ್ತಿದ್ದು, ಅವರ ಮೇಲೆ ಸುಳ್ಳು ಪೊಲೀಸ್ ಪ್ರಕರಣಗಳನ್ನು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದರಿಂದ ಅವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು.












Click it and Unblock the Notifications