ಪುಲಿಟ್ಚರ್ ಪುರಸ್ಕೃತ ಕಾಶ್ಮೀರೀ ಪತ್ರಕರ್ತೆ ಸನಾಗೆ ವಿದೇಶಕ್ಕೆ ಹಾರಲು ತಡೆ
ಶ್ರೀನಗರ್, ಜುಲೈ 3: ಭಾರತದಲ್ಲಿ ಕೋವಿಡ್ ಪರಿಸ್ಥಿತಿ ಬಗ್ಗೆ ಸಚಿತ್ರ ವರದಿಗಳಿಗಾಗಿ ಪುಲಿಟ್ಜರ್ ಪ್ರಶಸ್ತಿ ಪಡೆದಿರುವ ಕಾಶ್ಮೀರಿ ಪತ್ರಕರ್ತೆ ಸನಾ ಇರ್ಷಾದ್ ಮಟ್ಟೂ ಅವರಿಗೆ ವಿದೇಶಕ್ಕೆ ಹೋಗದಂತೆ ನಿರ್ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಶನಿವಾರ ಫ್ರಾನ್ಸ್ಗೆ ಹೋಗಲು ದೆಹಲಿ ಏರ್ಪೋರ್ಟ್ಗೆ ಹೋಗಿದ್ದ ಫೋಟೋ ಜರ್ನಲಿಸ್ಟ್ ಸನಾ ಮಟ್ಟೂ ಅವರನ್ನು ವಲಸೆ ಅಧಿಕಾರಿಗಳು ತಡೆದರೆನ್ನಲಾಗಿದೆ.
ಫ್ರಾನ್ಸ್ ರಾಜಧಾನಿ ಪ್ಯಾರಿಸ್ನಲ್ಲಿ ನಡೆಯುವ ಪುಸ್ತಕ ಬಿಡುಗಡೆ ಸಮಾರಂಭ ಹಾಗು ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮಕ್ಕೆ ಸನಾ ತೆರಳುತ್ತಿದ್ದರು. ಈ ವೇಳೆ ವಲಸೆ ಅಧಿಕಾರಿಗಳು ಅವರನ್ನು ತಡೆದು ವಾಪಸ್ ಕಳುಹಿಸಿದ್ದಾರೆ. ತಡೆಯಲು ಏನು ಕಾರಣ ಎಂದು ಅಧಿಕಾರಿಗಳು ತಿಳಿಸಲಿಲ್ಲ.
ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳಲು 150 ಉಗ್ರರು ಕಾಯುತ್ತಿದ್ದಾರೆ: ಸೇನಾ ಅಧಿಕಾರಿ
ಕೇಂದ್ರ ಸರಕಾರ ಅಥವಾ ರಾಜ್ಯ ಸರಕಾರವಾಗಲೀ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನೂ ನೀಡಿಲ್ಲ. ಇತ್ತೀಚಿನ ವರ್ಷಗಳಲ್ಲಿ ಹಲವು ಕಾಶ್ಮೀರಿ ಮಾಧ್ಯಮ ಪ್ರತಿನಿಧಿಗಳಿಗೆ ವಿದೇಶಗಳಿಗೆ ಹೋಗದಂತೆ ನಿರ್ಬಂಧ ಹಾಕಿರುವ ಘಟನಗಳು ವರದಿಯಾಗಿವೆ.
ಭಾರತದ ಇತರ ರಾಜ್ಯಗಳಿಗೆ ಸೇರಿದ ಕೆಲವಾರು ಪತ್ರಕರ್ತರು, ಗಣ್ಯರಿಗೆ ವಿದೇಶ ಪ್ರಯಾಣದಿಂದ ನಿರ್ಬಂಧಿಸಿದ್ದ ಘಟನೆಗಳೂ ನಡೆದಿವೆ. ಸನಾ ಇರ್ಷದ್ ಮಟ್ಟೂ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದು, ತನ್ನ ವಿರುದ್ಧ ಯಾವುದೇ ಆರೋಪ ಇಲ್ಲದಿದ್ದರೂ ಯಾಕೆ ಈ ಕ್ರಮ ಕೈಗೊಳ್ಳಲಾಯಿತು ತಿಳಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ಧಾರೆ.
'ಆಡಳಿತ ಪಕ್ಷ ನಾಚಿಕೆಯಿಂದ ತಲೆ ತಗ್ಗಿಸಬೇಕು' -ಕೇಂದ್ರದ ವಿರುದ್ಧ ವಿಪಕ್ಷಗಳ ವಾಗ್ದಾಳಿ
|
ಸನಾ ಮಾಡಿದ ಟ್ವೀಟ್
"ಸೆರೆಂಡಿಪಿಟಿ ಏರಲ್ಸ್ ಗ್ರ್ಯಾಂಟ್ 2020 ಸ್ಪರ್ಧೆ ಹತ್ತು ವಿಜೇತರಲ್ಲಿ ನಾನೂ ಒಬ್ಬಳು. ಈ ಸಂಬಂಧ ಫೋಟೋಗ್ರಫಿ ಎಗ್ಸಿಬಿಶನ್ ಮತ್ತು ಒಂದು ಪುಸ್ತಕ ಬಿಡುಗಡೆ ಸಮಾರಂಭಕ್ಕಾಗಿ ನಾನು ಇಂದು ಡೆಲ್ಲಿಯಿಂದ ಪ್ಯಾರಿಸ್ಗೆ ಪ್ರಯಾಣಿಸಬೇಕಿತ್ತು. ಫ್ರಾನ್ಸ್ ವೀಸಾ ಹೊಂದಿದ್ದರೂ ದೆಹಲಿ ವಿಮಾನ ನಿಲ್ದಾಣದಲ್ಲಿ ವಲಸೆ ವಿಭಾಗದಲ್ಲಿ ನನ್ನನ್ನು ತಡೆಯಲಾಯಿತು... ಯಾಕೆ ಏನು ಎಂದು ಯಾವ ಕಾರಣವನ್ನೂ ಕೊಡಲಿಲ್ಲ. ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಅವಕಾಶ ಇಲ್ಲ ಎಂದಷ್ಟೇ ತಿಳಿಸಿದರು" ಎಂದು ತಮ್ಮ ಬೋರ್ಡಿಂಗ್ ಪಾಸ್ ಸಮೇತ ಸನಾ ಇರ್ಷದ್ ಮಟ್ಟೂ ಟ್ವೀಟ್ ಮಾಡಿದ್ದಾರೆ.
28 ವರ್ಷದ ಸನಾ ಇರ್ಷದ್ ಮಟ್ಟೂ ಅವರು ಪ್ಯಾರಿಸ್ನಲ್ಲಿ ನಡೆಯಲಿರುವ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮಕ್ಕೆ ಹಾಜರಾಗಲು ಬಹಳ ಕಾಲದಿಂದ ಅವಕಾಶಕ್ಕಾಗಿ ಕಾದಿದ್ದರಂತೆ. ಅಪರೂಪಕ್ಕೆ ಈ ಅವಕಾಶ ಸಿಕ್ಕಾಗ ತನಗೆ ಹೋಗಲು ಅವಕಾಶ ನಿರಾಕರಿಸಿರುವುದು ಈಕೆಗೆ ಬೇಸರ ತರಿಸಿದೆ.
ಇದು ಮೂರ್ಖತನ ಎಂದ ಸನಾ
"ಇದು ನಿಜಕ್ಕೂ ವಿಚಿತ್ರ. ನನ್ನ ವಿರುದ್ಧ ಯಾವ ಪ್ರಕರಣವಾಗಲೀ ಆರೋಪವಾಗಲೀ ಇಲ್ಲ. ನನ್ನನ್ನು ಯಾಕೆ ತಡೆದರು ಎಂದೇ ನನಗೆ ಅರ್ಥ ಆಗುತ್ತಿಲ್ಲ" ಎಂದು ಸನಾ ಹೇಳಿದರೆಂದು ಅಲ್ ಜಝೀರಾ ವೆಬ್ಸೈಟ್ ವರದಿ ಮಾಡಿದೆ.
ಸನಾರನ್ನು ವಿದೇಶಕ್ಕೆ ಹೋಗದಂತೆ ತಡೆಯಬೇಕೆಂದು ಕಾಶ್ಮೀರ ಆಡಳಿತದಿಂದ ಅಧಿಕಾರಿಗಳಿಗೆ ಸೂಚನೆ ಬಂದಿತ್ತಂತೆ. ಹಾಗಂತ ಅಧಿಕಾರಿಗಳು ತನಗೆ ಹೇಳಿದರೆಂದು ಸನಾ ಹೇಳಿಕೊಂಡಿದ್ಧಾರೆ.
ಕಾಶ್ಮೀರಿ ಪತ್ರಕರ್ತೇ ಟಾರ್ಗೆಟ್ಟಾ?
2019, ಸೆಪ್ಟೆಂಬರ್ನಲ್ಲಿ ಕಾಶ್ಮೀರಿ ಪತ್ರಕರ್ತ ಗೌಹಾರ್ ಗೀಲಾನಿ ಜರ್ಮನಿಗೆ ಹೋಗುವಾಗ ದೆಹಲಿ ಏರ್ಪೋರ್ಟ್ನಲ್ಲಿ ತಡೆಯಲಾಗಿತ್ತು. ಜಾಹಿದ್ ರಫೀಕ್, ರುವಾ ಶಾ ಮೊದಲಾದ ಹಲವು ಪತ್ರಕರ್ತರಿಗೂ ವಿದೇಶಕ್ಕೆ ಹೋಗಲು ಬಿಟ್ಟಿರಲಿಲ್ಲ.
ಗುಜರಾತ್ ಫೈಲ್ಸ್ ಪುಸ್ತಕ ಖ್ಯಾತಿಯ ರಾಣಾ ಆಯುಬ್ ಹಿಂದೆ ಲಂಡನ್ಗೆ ಹೋಗಲು ಯತ್ನಿಸಿದಾಗಲೂ ಅವಕಾಶ ನಿರಾಕರಿಸಲಾಗಿತ್ತು. ಅಮ್ನೆಸ್ಟಿ ಇಂಟರ್ನ್ಯಾಷನಲ್ನ ಭಾರತ ವಿಭಾಗದ ಮಾಜಿ ಮುಖ್ಯಸ್ಥ ಆಕರ್ ಪಟೇಲ್ ಅವರನ್ನೂ ಅಮೆರಿಕಕ್ಕೆ ಹೋಗದಂತೆ ೨೦೧೯ರಲ್ಲಿ ತಡೆಯಲಾಗಿತ್ತು.
|
ಪತ್ರಕರ್ತರ ಸಂಘಟನೆಗಳು ಖಂಡನೆ
ಸನಾ ಇರ್ಷದ್ ಮಟ್ಟೂ ಅವರನ್ನು ಫ್ರಾನ್ಸ್ಗೆ ಹೋಗದಂತೆ ನಡೆದಿರುವ ಘಟನೆಯನ್ನು ಕೆಲ ಪತ್ರಕರ್ತರ ಸಂಘಟನೆಗಳು ಖಂಡಿಸಿವೆ. "ಕಾಶ್ಮೀರಿ ಪತ್ರಕರ್ತರು ವಿದೇಶಕ್ಕೆ ಹೋಗದಂತೆ ತಡೆಯುವ ಸಂಪ್ರದಾಯವನ್ನು ಕೂಡಲೇ ನಿಲ್ಲಿಸಬೇಕು" ಎಂದು ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್ ಎಂಬ ಸಂಘಟನೆ ಹೇಳಿದೆ.
"ಪ್ರಯಾಣ ನಿಷೇಧ ಇತ್ಯಾದಿ ಮೂಲಕ ಕಾಶ್ಮೀರಿ ಪತ್ರಕರ್ತರ ವಿರುದ್ಧ ವ್ಯವಸ್ಥಿತ ರೀತಿಯಲ್ಲಿ ಕಿರುಕುಳ ಕೊಡಲಾಗುತ್ತಿದೆ. 2019, ಆಗಸ್ಟ್ನಿಂದಲೂ ಕಾಶ್ಮೀರಿ ಪತ್ರಕರ್ತರ ಮೇಲೆ ಸುಳ್ಳು ಪ್ರಕರಣಗಳು, ಬೆದರಿಕೆಗಳು, ದೈಹಿಕ ಹಲ್ಲೆ, ರೇಡ್ ಇತ್ಯಾದಿ ಹೆಚ್ಚಾಗಿ ನಡೆಯುತ್ತಿವೆ" ಎಂದು ಪತ್ರಕರ್ತರ ಈ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದ ಟ್ವೀಟ್ ಮಾಡಿದೆ.
ಜಮ್ಮು ಮತ್ತು ಕಾಶ್ಮೀರದ ಶ್ರೀನಗರದವರಾದ ಸನಾ ಇರ್ಷದ್ ಮಟ್ಟೂ ಇತ್ತೀಚೆಗಷ್ಟೇ ಪುಲಿಟ್ಜರ್ ಪ್ರಶಸ್ತಿ ಪಡೆದಿದ್ದರು. ಭಾರತದಲ್ಲಿ ಕೋವಿಡ್-೧೯ ಬಗ್ಗೆ ಸಚಿತ್ರ ವರದಿಗಳನ್ನು ನೀಡಿದ್ದಕ್ಕಾಗಿ ರಾಯ್ಟರ್ಸ್ ಸುದ್ದಿಸಂಸ್ಥೆಗೆ ಈ ಪ್ರಶಸ್ತಿ ಬಂದಿತ್ತು. ಸನಾ ಸೇರಿ ಆರು ಫೋಟೋಜರ್ನಲಿಸ್ಟ್ಗಳು ಈ ವರದಿಗಳನ್ನು ನೀಡಿದ್ದರು.
Recommended Video