ಕಣಿವೆ ರಾಜ್ಯದ ಗಡಿಯಲ್ಲಿ ಕಾಲ್ಕೆರೆದು ನಿಂತ ಪಾಕಿಸ್ತಾನ
ಶ್ರೀನಗರ್, ಡಿಸೆಂಬರ್.11: ಕೆಟ್ಟ ಮೇಲೆ ಬುದ್ಧಿ ಬಂತು ಎಂಬ ಗಾದೆಮಾತಿದೆ. ಆದರೆ, ಪಾಕಿಸ್ತಾನದ ಪಾಲಿಗೆ ಅದೆಷ್ಟು ಬಾರಿ ಕೆಟ್ಟರೂ ಬುದ್ಧಿ ಬರುವ ಲಕ್ಷಣಗಳೇ ಕಾಣುತ್ತಿಲ್ಲ. ಕಣಿವೆ ರಾಜ್ಯದ ಗಡಿಯಲ್ಲಿ ಪದೇ ಪದೆ ಕಾಲ್ಕೆರೆದು ನಿಲ್ಲುವ ಪಾಕಿಸ್ತಾನ ಇಂದೂ ಕೂಡಾ ಕ್ಯಾತೆ ತೆಗೆದಿದೆ.
ಇಷ್ಟುದಿನ ಭಾರತದ ವಿರುದ್ಧ ಪಾಕಿಸ್ತಾನ ಉಗ್ರರನ್ನು ಛೂ ಬಿಡುತ್ತಿತ್ತು. ಈಗ ತನ್ನ ವರಸೆಯನ್ನೇ ಬದಲಿಸಿಕೊಂಡಿರುವ ಪಾಕ್, ತನ್ನ ಸೇನೆಯನ್ನೇ ಗಡಿಯಲ್ಲಿ ನಿಲ್ಲಿಸಿ ಉದ್ಧಟತನ ಪ್ರದರ್ಶಿಸುತ್ತಿದೆ. ಸೂರ್ಯ ಮುಳುಗುತ್ತಿದ್ದಂತೆ ಕಾಲ್ಕೆರೆದು ನಿಲ್ಲುವ ಪಾಕಿಸ್ತಾನ ಯೋಧರು ಜಮ್ಮು-ಕಾಶ್ಮೀರ ಗಡಿ ಪ್ರದೇಶಗಳ ಮೇಲೆ ಶೆಲ್ ದಾಳಿ ನಡೆಸುತ್ತಿದ್ದಾರೆ.
ಕಳೆದ ಎರಡು ದಿನಗಳಿಂದಲೂ ಪಾಕಿಸ್ತಾನ ಸೇನಾ ಯೋಧರು ಗಡಿಭಾಗದ ಗ್ರಾಮಗಳ ಮೇಲೆ ಶೆಲ್ ದಾಳಿ ನಡೆಸುತ್ತಿದ್ದಾರೆ. ಇದರಿಂದ ಜಮ್ಮು-ಕಾಶ್ಮೀರ ಗಡಿ ಪ್ರದೇಶದಲ್ಲಿ ಆತಂಕಕಾರಿ ವಾತಾವರಣ ನಿರ್ಮಾಣವಾಗಿದೆ.

ಎರಡು ದಿನಗಳಲ್ಲಿ 12 ಶೆಲ್ ದಾಳಿ
ಕಳೆದ ಎರಡು ದಿನಗಳಿಂದ ಜಮ್ಮು-ಕಾಶ್ಮೀರ ಹೀರಾನಗರ ಜಿಲ್ಲೆ ಮೇಲೆ ಪಾಕಿಸ್ತಾನ್ ಯೋಧರು ಶೆಲ್ ದಾಳಿ ನಡೆಸುತ್ತಿದ್ದಾರೆ. ರಥ್ವಾ ಗ್ರಾಮದವೊಂದರಲ್ಲೇ 12 ಶೆಲ್ ದಾಳಿ ನಡೆಸಲಾಗಿದ್ದು, ರಾಮ್ ಪಿಯಾರಿ ಎಂಬುವವರ ಮನೆ ಮೇಲೆಯೇ 3 ಮೋಟಾರ್ ಶೆಲ್ ದಾಳಿ ನಡೆಸಲಾಗಿದೆ. ಈ ಪೈಕಿ ಒಂದು ಶೆಲ್ ಸ್ಫೋಟಗೊಂಡಿದ್ದು, ಮನೆಯ ಗೋಡೆಗಳಿಗೆಲ್ಲಾ ಹಾನಿಯಾಗಿದೆ. ಉಳಿದ ಎರಡು ಶೆಲ್ ಗಳು ಮನೆ ಪಕ್ಕದಲ್ಲೇ ಬಿದ್ದಿದ್ದು, ಸ್ಫೋಟಗೊಂಡಿರಲಿಲ್ಲ.
ಭಾರತೀಯ ಸೇನಾ ಯೋಧರ ಸಹಾಯದಿಂದ ಮನೆ ಪಕ್ಕದಲ್ಲಿ ಬಿದ್ದ ಎರಡು ಶೆಲ್ ಗಳನ್ನು ಸ್ಫೋಟಗೊಳ್ಳದಂತೆ ಡಿಸ್ಪೋಸ್ ಮಾಡಲಾಗಿದೆ ಎಂದು ಗ್ರಾಮದ ರಾಮ್ ಪಿಯಾರಿ ತಿಳಿಸಿದ್ದಾರೆ.












Click it and Unblock the Notifications