'ಕಾಶ್ಮೀರಿ ನಾಯಕರನ್ನು ಒಬ್ಬೊಬ್ಬರಾಗಿ ಬಿಡುಗಡೆ ಮಾಡಲಾಗುತ್ತದೆ'
ಶ್ರೀನಗರ್ (ಜಮ್ಮು ಮತ್ತು ಕಾಶ್ಮೀರ), ಅಕ್ಟೋಬರ್ 3: ಎರಡು ತಿಂಗಳಿಂದ ವಶಕ್ಕೆ ಪಡೆಯಲಾಗಿದ್ದ ಕಾಶ್ಮೀರಿ ನಾಯಕರನ್ನು ಬಿಡುಗಡೆ ಮಾಡಲಾಗುತ್ತದೆ. ಆದರೆ ಪರಿಸ್ಥಿತಿ ವಿಶ್ಲೇಷಣೆ ಮಾಡಿದ ನಂತರ ಎಂದು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ರ ಸಲಹೆಗಾರರ ಎಎನ್ ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
"ಹೌದು, ಸನ್ನಿವೇಶ ಪರಾಮರ್ಶೆ ಮಾಡಿದ ನಂತರ ಒಬ್ಬರಾದ ಮೇಲೆ ಒಬ್ಬರನ್ನು ಬಿಡುಗಡೆ ಮಾಡಲಾಗುವುದು" ಎಂದು ಜಮ್ಮು- ಕಾಶ್ಮೀರದ ರಾಜ್ಯಪಾಲರ ಸಲಹೆಗಾರ ಫಾರೂಕ್ ಖಾನ್ ತಿಳಿಸಿದ್ದಾರೆ. ಜಮ್ಮು ಭಾಗದ ನಾಯಕರನ್ನು ಬಿಡುಗಡೆ ಮಾಡಲಾಗುತ್ತಿದೆ. ಕಾಶ್ಮೀರದ ನಾಯಕರ ಬಿಡುಗಡೆ ಯಾವಾಗ ಎಂಬ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ.
ಕಾಶ್ಮೀರದ ರಾಜಕೀಯ ನಾಯಕರಾದ ನ್ಯಾಷನಲ್ ಕಾನ್ಫರೆನ್ಸ್ ನ ಫಾರೂಕ್ ಅಬ್ದುಲ್ಲಾ ಹಾಗೂ ಒಮರ್ ಅಬ್ದುಲ್ಲಾ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಜಮ್ಮು ಮತ್ತು ಕಾಶ್ಮೀರದ ಪೀಪಲ್ಸ್ ಕಾನ್ಫರೆನ್ಸ್ ನ ನಾಯಕ ಸಜ್ಜದ್ ಗನಿ ಲೋನ್ ಆಗಸ್ಟ್ ಐದನೇ ತಾರೀಕಿನಿಂದಲೂ ಗೃಹ ಬಂಧನದಲ್ಲಿ ಇದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚಿರುವ ಪೊಲೀಸರ ಚಟುವಟಿಕೆ ಹಾಗೂ ಭದ್ರತಾ ಸಿಬ್ಬಂದಿ ಸಂಖ್ಯೆಯಲ್ಲಿ ಹೆಚ್ಚಳದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಖಾನ್, ಭಯೋತ್ಪಾದಕರ ಆತಂಕ ಎಂಬ ವಿಶೇಷ ಕಾರಣಗಳು ಏನೂ ಇಲ್ಲ. ಮುಂಜಾಗ್ರತಾ ಕ್ರಮವಾಗಿ ಈ ತೀರ್ಮಾನ್ ಮಾಡಲಾಗಿದೆ ಎಂದು ಉತ್ತರಿಸಿದ್ದಾರೆ.
ಕಳೆದ ಆಗಸ್ಟ್ ಐದನೇ ತಾರೀಕು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರನ್ನು ವಶಕ್ಕೆ ಪಡೆದು, ಗೃಹ ಬಂಧನದಲ್ಲಿ ಇರಿಸಲಾಗಿದೆ. ಆದರೆ ಜಮ್ಮುವಿನಲ್ಲಿ ಎಲ್ಲ ರಾಜಕೀಯ ಪಕ್ಷಗಳ ಮುಖಂಡರ ಬಂಧನದ ಅವಧಿ ಮುಕ್ತಾಯವಾಗಿದೆ.
ಆಗಸ್ಟ್ ನಾಲ್ಕನೇ ತಾರೀಕಿನಂದೇ ಸರ್ಕಾರದಿಂದ ಇಂಟರ್ ನೆಟ್, ಟೆಲಿಫೋನ್ ಮತ್ತು ಟೀವಿ ಸೇವೆಗಳನ್ನು ಬಂದ್ ಮಾಡಲಾಯಿತು. ವಿಶೇಷ ಸ್ಥಾನಮಾನ ರದ್ದು ಮಾಡಿದ ಮೇಲೆ ಯಾವುದೇ ಪ್ರತಿಭಟನೆ ನಡೆಯಬಾರದು ಎಂದು ಈ ತೀರ್ಮಾನ ಮಾಡಲಾಯಿತು.












Click it and Unblock the Notifications