ಜಮ್ಮು-ಕಾಶ್ಮೀರ ಗುಂಡಿನ ದಾಳಿಯಲ್ಲಿ ಐವರು ಯೋಧರು ಹುತಾತ್ಮ
ಶ್ರೀನಗರ್, ಅಕ್ಟೋಬರ್ 11: ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ನಡೆಯುತ್ತಿರುವ ಸೇನಾ ಕಾರ್ಯಾಚರಣೆ ವೇಳೆ ಉಗ್ರರು ಮತ್ತು ಯೋಧರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಘಟನೆಯಲ್ಲಿ ಭಾರತೀಯ ಸೇನೆಯ ಒಬ್ಬ ಜೂನಿಯರ್ ಕಮಿಷನ್ ಆಫೀಸರ್ ಹಾಗೂ ನಾಲ್ವರು ಯೋಧರು ಸೇರಿದಂತೆ ಐವರು ಹುತಾತ್ಮರಾಗಿದ್ದಾರೆ.
ಡಿಕೆಎಸ್ ಪ್ರದೇಶದ ಸುರಂಕೋಟೆಯಲ್ಲಿ ಉಗ್ರರು ಅಡಗಿ ಕುಳಿತಿರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆ ಭಾರತೀಯ ಸೇನೆಯು ಕಾರ್ಯಾಚರಣೆ ಶುರು ಮಾಡಿತು ಎಂದು ರಕ್ಷಣಾ ಇಲಾಖೆ ವಕ್ತಾರರು ತಿಳಿಸಿದ್ದಾರೆ. ಮೂರ್ನಾಲ್ಕು ಉಗ್ರರು ಅಲ್ಲಿ ಅಡಗಿ ಕುಳಿತಿರುವ ಬಗ್ಗೆ ಗೊತ್ತಾಗಿರುವುದರಿಂದ ಸೇನೆಯು ಆ ಪ್ರದೇಶವನ್ನು ಸುತ್ತುವರಿದವು.
ಸೇನಾ ಕಾರ್ಯಾಚರಣೆ ಚುರುಕುಗೊಳಿಸುತ್ತಿದ್ದಂತೆ ಅಲರ್ಟ್ ಆದ ಉಗ್ರರು ಮನಸೋ-ಇಚ್ಛೆ ಗುಂಡಿನ ದಾಳಿ ನಡೆಸಿದರು. ಇದರಿಂದಾಗಿ ಜೂನಿಯರ್ ಕಮಿಷನ್ ಆಫೀಸರ್ ಸೇರಿದಂತೆ ನಾಲ್ವರು ಇತರೆ ಶ್ರೇಣಿ ಯೋಧರು ಗಂಭೀರವಾಗಿ ಗಾಯಗೊಂಡು ಉಸಿರು ಚೆಲ್ಲಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.

ಅಡಗಿದ ಉಗ್ರರಿಗಾಗಿ ಕಾರ್ಯಾಚರಣೆ ಮುಂದುವರಿಕೆ:
"ತೀವ್ರವಾಗಿ ಗಾಯಗೊಂಡ ಜೆಸಿಒ ಮತ್ತು ನಾಲ್ವರು ಯೋಧರನ್ನು ಹತ್ತಿರದ ವೈದ್ಯಕೀಯ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಆದರೆ ಅವರು ಗಂಭೀರವಾಗಿ ಗಾಯಗೊಂಡ ಹಿನ್ನೆಲೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಅಡಗಿ ಕುಳಿತಿರುವ ಉಗ್ರರಿಗಾಗಿ ಸೇನಾ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ" ಎಂದು ಸೇನೆಯು ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಸುರಂಕೋಟೆ ಉಪವಿಭಾಗದ ಅರಣ್ಯ ಪ್ರದೇಶದಿಂದ ಉಗ್ರರು ಒಳನುಸುಳಿರುವ ಶಂಕೆಯಿದೆ ಎಂದು ಭದ್ರತಾ ಪಡೆಗಳು ಶಂಕಿಸಿವೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ನಿಯಂತ್ರಣ ರೇಖೆ (ಎಲ್ಒಸಿ) ಯಿಂದ ನುಸುಳಲು ಯಶಸ್ವಿಯಾದ ನಂತರ ಚಾಮರ್ ಅರಣ್ಯದಲ್ಲಿ ಭಾರೀ ಶಸ್ತ್ರಸಜ್ಜಿತ ಭಯೋತ್ಪಾದಕರ ಗುಂಪು ಇರುವುದರ ಬಗ್ಗೆ ವರದಿಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಈ ಮಾಹಿತಿ ಪಡೆದ ನಂತರ ಪೊಲೀಸರು ಮತ್ತು ಸೇನೆಯ ತಂಡಗಳು ಸ್ಥಳಕ್ಕೆ ಧಾವಿಸಿದವು ಮತ್ತು ಇಡೀ ಪ್ರದೇಶವನ್ನು ಸುತ್ತುವರಿಯಲಾಗಿದೆ" ಎಂದು ಅಧಿಕಾರಿ ಹೇಳಿದ್ದು, ಎರಡು ಕಡೆಗಳಿಂದ ಗುಂಡಿನ ಚಕಮಕಿ ನಡೆಯುತ್ತಿದೆ. ಈ ಹಿಂದೆ ಅನಂತನಾಗ್ನಲ್ಲಿ ಒಬ್ಬ ಹಾಗೂ ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಮತ್ತೊಬ್ಬ ಉಗ್ರನನ್ನು ಹೊಡೆದುರುಳಿಸಲಾಗಿತ್ತು.












Click it and Unblock the Notifications