ಬಂದೂಕು ಎತ್ತಿಕೊಳ್ಳದೆ ಬೇರೆ ಆಯ್ಕೆಯಿಲ್ಲ: ಮೆಹಬೂಬ ಮುಫ್ತಿ ಮತ್ತೊಂದು ವಿವಾದ
ಶ್ರೀನಗರ, ನವೆಂಬರ್ 9: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದುಹಾಕುವ ಮುನ್ನ ಬಂಧನಕ್ಕೆ ಒಳಗಾಗಿದ್ದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಬಿಡುಗಡೆಯ ಬಳಿಕ ನಿರಂತರವಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಪ್ರದೇಶದ ಯುವಜನರಿಗೆ ತಮ್ಮ ಕೈಗಳಿಗೆ ಬಂದೂಕುಗಳನ್ನು ಎತ್ತಿಕೊಳ್ಳದೆ ಬೇರೆ ಆಯ್ಕೆಯೇ ಇಲ್ಲ ಎನ್ನುವ ಮೂಲಕ ಅವರು ಕಿಡಿ ಹೊತ್ತಿಸಿದ್ದಾರೆ.
'ಯುವಜನರಿಗೆ ಉದ್ಯೋಗವಿಲ್ಲ. ಶಸ್ತ್ರಾಸ್ತ್ರಗಳನ್ನು ಕೈಗೆ ಎತ್ತಿಕೊಳ್ಳುವುದರ ಹೊರತಾಗಿ ಯುವಜನರಿಗೆ ಬೇರೆ ಆಯ್ಕೆ ಇಲ್ಲ. ಭಯೋತ್ಪಾದಕರ ನೇಮಕಾತಿ ಹೆಚ್ಚಾಗುತ್ತಿದೆ. ಬೇರೆ ರಾಜ್ಯಗಳಿಂದ ಬಂದ ಜನರು ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ಯೋಗ ಪಡೆದುಕೊಳ್ಳುತ್ತಿದ್ದಾರೆ' ಎಂದು ಪಿಡಿಪಿ ಅಧ್ಯಕ್ಷರಾಗಿರುವ ಮೆಹಬೂಬಾ ಹೇಳಿದ್ದಾರೆ.
ಭಾರತೀಯ ಸೇನೆ ಸಾಮರ್ಥ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಮುಫ್ತಿ
ಮೋದಿ ಸರ್ಕಾರವು ವಾಜಪೇಯಿ ಅವರ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಬೇಕಿದೆ. ಯುವಜನರು ಭ್ರಮನಿರಸನಗೊಂಡಿದ್ದಾರೆ. ಜಮ್ಮುವಿನ ಸ್ಥಿತಿ ಕಾಶ್ಮೀರಕ್ಕಿಂತಲೂ ಕೆಟ್ಟದಾಗಿದೆ. ನಮ್ಮ ವಿಶೇಷ ಸ್ಥಾನಮಾನವನ್ನು ಮರಳಿ ನೀಡಲಾಗುತ್ತದೆ ಎಂಬ ಷರತ್ತಿನೊಂದಿಗೆ ನಾವು ಭಾರತದೊಂದಿಗೆ ಸಂಬಂಧ ಹೊಂದಿರುತ್ತೇವೆ ಎಂದು ತಿಳಿಸಿದ್ದಾರೆ.
ನಮ್ಮ ಸಂಪನ್ಮೂಲಗಳನ್ನು ಮಾರಾಟಕ್ಕೆ ಇಡಲಾಗಿದೆ. ಪಂಡಿತರ ಕಥೆ ಏನು? ಅವರಿಗೆ ಬಿಜೆಪಿಯು ಭಾರಿ ಭರವಸೆಗಳನ್ನು ನೀಡಿತ್ತು. ಜಮ್ಮು ಮತ್ತು ಕಾಶ್ಮೀರವನ್ನು ಬಿಜೆಪಿ ಮಾರಾಟಕ್ಕೆ ಇರಿಸಿದೆ. ಹೊರರಾಜ್ಯದವರನ್ನು ಆಹ್ವಾನಿಸಲಾಗುತ್ತಿದೆ. ಅದು ಜಮ್ಮು ಮತ್ತು ಕಾಶ್ಮೀರದ ಜನರ ಭೂಮಿಯನ್ನು ಅದು ಮಾರಾಟಮಾಡಲು ಬಯಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ತ್ರಿವರ್ಣ ಧ್ವಜದ ಬಗ್ಗೆ ಹೇಳಿಕೆ: ಮೆಹಬೂಬ ಮುಫ್ತಿ ಪಕ್ಷ ತೊರೆದ ಮುಖಂಡರು
'ಅಮೆರಿಕದಲ್ಲಿ ಏನಾಗಿದೆ ನೋಡಿ. ಟ್ರಂಪ್ ಹೊರಟು ಹೋದರು. ಹೀಗಾಗಿ ಬಿಜೆಪಿ ಕೂಡ ಹೋಗಲಿದೆ' ಎಂದು ಮುಫ್ತಿ ಹೇಳಿದ್ದಾರೆ.