ಜಮ್ಮು ಕಾಶ್ಮೀರದಲ್ಲಿ ಉದ್ವಿಗ್ನತೆ ಸೃಷ್ಟಿಸಲು 200 ಜನರ ಹತ್ಯೆಗೆ ಐಎಸ್ಐ ಸಂಚು!
ನವದೆಹಲಿ, ಅಕ್ಟೋಬರ್ 15: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಇತ್ತೀಚೆಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮುಜಾಫರಾಬಾದ್ನಲ್ಲಿ ಹಲವು ಭಯೋತ್ಪಾದಕ ಸಂಘಟನೆಗಳ ನಾಯಕರೊಂದಿಗೆ ಗೌಪ್ಯ ಸಭೆ ನಡೆಸಿದೆ. ಕಳೆದ ಸೆಪ್ಟೆಂಬರ್ 21ರಂದು ನಡೆದ ಸಭೆ ಬಗ್ಗೆ ಇಂಡಿಯಾ ಟುಡೇ ವರದಿ ಮಾಡಿದೆ.
ಐಎಸ್ಐ ಅಧಿಕಾರಿಗಳು ಮತ್ತು ಭಯೋತ್ಪಾದಕ ಸಂಘಟನೆಗಳ ನಡುವಿನ ಗೌಪ್ಯ ಸಭೆಯ ಬಗ್ಗೆ ಭಾರತೀಯ ಗುಪ್ತಚರ ಸಂಸ್ಥೆಗೆ ಮಾಹಿತಿ ಸಿಕ್ಕಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಲು ಐಎಸ್ಐ ಯೋಜನೆಯನ್ನು ಸಿದ್ಧಪಡಿಸಿದೆ. ಕಾಶ್ಮೀರದ ಭಾರತದ ಭಾಗದಲ್ಲಿ ಗರಿಷ್ಠ ಹತ್ಯೆಗಳನ್ನು ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಐಎಸ್ಐ ಅಧಿಕಾರಿಗಳು ಮತ್ತು ಭಯೋತ್ಪಾದಕ ಗುಂಪುಗಳ ನಾಯಕರ ನಡುವಿನ ಸಭೆಯಲ್ಲಿ ಪೊಲೀಸರು, ಭದ್ರತಾ ಪಡೆಗಳು, ಗುಪ್ತಚರ ಇಲಾಖೆಗಳೊಂದಿಗೆ ಕೆಲಸ ಮಾಡುವ ಕಾಶ್ಮೀರಿಗಳನ್ನು ಕೊಲ್ಲಬೇಕು ಎಂದು ನಿರ್ಧರಿಸಲಾಯಿತು. ಕಾಶ್ಮೀರಿಗಳಲ್ಲದ ಜನರು ಮತ್ತು ಬಿಜೆಪಿ ಮತ್ತು ಆರ್ಎಸ್ಎಸ್ಗೆ ಸಂಬಂಧಿಸಿದ ಜನರನ್ನು ಗುರಿಯನ್ನಾಗಿಸಿ ದಾಳಿ ಮಾಡಲು ಸಂಚು ರೂಪಿಸಲಾಗಿದೆ.

ಕಣಿವೆ ರಾಜ್ಯದಲ್ಲಿ ಉದ್ವಿಗ್ನತೆಗೆ 200 ಹಿಟ್ ಲಿಸ್ಟ್
ಕಣಿವೆ ರಾಜ್ಯದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಲು ಐಎಸ್ಐ 200 ಜನರ "ಹಿಟ್-ಲಿಸ್ಟ್" ಮಾಡಿದೆ. ಭಾರತೀಯ ಸರ್ಕಾರಕ್ಕೆ ಹತ್ತಿರವಿರುವ ಮಾಧ್ಯಮ ಸಿಬ್ಬಂದಿ ಮತ್ತು ಭಾರತೀಯ ಏಜೆನ್ಸಿಗಳು ಮತ್ತು ಭದ್ರತಾ ಪಡೆಗಳ ಮೂಲಗಳು ಮತ್ತು ಮಾಹಿತಿದಾರರನ್ನು ಹೊರತುಪಡಿಸಿ, ಪಟ್ಟಿಯಲ್ಲಿ ಪಂಡಿತರನ್ನು ಕಾಶ್ಮೀರಕ್ಕೆ ಹಿಂದಿರುಗಿಸಲು ಸಕ್ರಿಯವಾಗಿ ಪ್ರತಿಪಾದಿಸುತ್ತಿರುವ ಅನೇಕ ಕಾಶ್ಮೀರಿ ಪಂಡಿತರ ಹೆಸರನ್ನು ಸೇರಿಸಲಾಗಿದೆ ಎಂದು ಹೇಳಲಾಗಿದೆ.

ಸ್ಥಳೀಯರನ್ನೇ ಬಳಸಿಕೊಂಡು ದುಷ್ಕೃತ್ಯಕ್ಕೆ ಸಂಚು
ಐಎಸ್ಐ ಮತ್ತು ಭಯೋತ್ಪಾದಕ ಸಂಘಟನೆಗಳ ನಂಟು ಹೊಂದಿರದ ಹಾಗೂ ಭಾರತೀಯ ಭದ್ರತಾ ಪಡೆಗಳ ಪಟ್ಟಿಯಲ್ಲಿ ಇರದ ಭಯೋತ್ಪಾದಕರನ್ನು ದಾಳಿ ಹಾಗೂ ಹತ್ಯೆಗಳಲ್ಲಿ ಬಳಸಿಕೊಳ್ಳಲು ಯೋಜನೆ ಹಾಕಿಕೊಳ್ಳಲಾಗಿದೆ. ಆ ಮೂಲಕ ದಾಳಿ ಮತ್ತು ಹತ್ಯೆಗಳು ಸ್ಥಳೀಯ ಹಾಗೂ ಸ್ವಾಭಾವಿಕ ಚಟುವಟಿಕೆಗಳು ಎಂಬ ರೀತಿಯಲ್ಲಿ ಬಿಂಬಿಸುವ ಸಂಚು ರೂಪಿಸಲಾಗಿದೆ. ಉಗ್ರವಾದಕ್ಕೆ ಕಾಶ್ಮೀರಿಗಳನ್ನೇ ಬಳಸಿಕೊಳ್ಳುವುದರ ಬಗ್ಗೆ ಭಾರತ ಎಚ್ಚರಿಕೆ ವಹಿಸಿದೆ.

ಭಾರತದಲ್ಲಿ ತನಿಖಾ ಸಂಸ್ಥೆಗಳ ದಾರಿ ತಪ್ಪಿಸುವ ಹುನ್ನಾರ
ಪಾಕಿಸ್ತಾನ್ ಆಕ್ರಮಿಕ ಕಾಶ್ಮೀರದಲ್ಲಿ ಇತ್ತೀಚಿಗೆ ಐಎಸ್ಐ ಅಧಿಕಾರಿಗಳು ಮತ್ತು ಭಯೋತ್ಪಾದಕ ಗುಂಪುಗಳ ನಾಯಕರ ನಡುವಿನ ಸಭೆಯಲ್ಲಿ ಒಂದು ಹೊಸ ಭಯೋತ್ಪಾದಕ ಸಂಘಟನೆಯನ್ನು ರಚಿಸಲಾಗಿದೆ. ಈ ತಂಡವು ಭಾರತೀಯ ತನಿಖಾ ಸಂಸ್ಥೆಗಳ ದಾರಿ ತಪ್ಪಿಸುವ ಹಾಗೂ ಹತ್ಯೆಗಳು ಮತ್ತು ದಾಳಿಯ ಗುರಿಯನ್ನು ಬಿಟ್ಟುಕೊಡದಂತೆ ಎಚ್ಚರಿಕೆ ವಹಿಸುತ್ತದೆ. ಅಲ್ಲದೇ ಹಾಕಿಕೊಂಡ ಯೋಜನೆಯನ್ನು ಅನುಷ್ಠಾನಗೊಳಿಸುವ ಹೊಣೆಗಾರಿಕೆಯನ್ನು ತೆಗೆದುಕೊಳ್ಳುತ್ತದೆ.

ದೆಹಲಿಯಲ್ಲಿ ಐಎಸ್ಐ ನಂಟು ಹೊಂದಿದ ಉಗ್ರನ ಬಂಧನ
ಪಾಕಿಸ್ತಾನ ಮೂಲದ ಭಯೋತ್ಪಾದಕನನ್ನು ಮಂಗಳವಾರ ದೆಹಲಿಯ ಲಕ್ಷ್ಮೀನಗರ ಪ್ರದೇಶದಲ್ಲಿ ಬಂಧಿಸಲಾಗಿತ್ತು. ಪಾಕಿಸ್ತಾನದ ನರೋವಾಲ್ ನಿವಾಸಿ ಮೊಹಮ್ಮದ್ ಅಶ್ರಫ್ ಬಂಧಿತ ಉಗ್ರ ಎಂದು ಗುರುತಿಸಲಾಗಿದ್ದು, ಬಂಧಿತ ಉಗ್ರನಿಂದ ನಕಲಿ ಗುರುತಿನ ಚೀಟಿ, ಎಕೆ 47 ಬಂದೂಕು, ಗ್ರೆನೇಡ್ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ದೆಹಲಿಯಲ್ಲಿ ವಿಶೇಷ ತನಿಖಾ ತಂಡದ ಕೈಗೆ ಸಿಕ್ಕಿ ಬಿದ್ದಿರುವ ಉಗ್ರ ಮೊಹಮ್ಮದ್ ಅಶ್ರಫ್ ಅಲಿ, ಮೌಲಾನಾ ಆಗಿ ವಾಸವಾಗಿದ್ದನು. ದೆಹಲಿಯಷ್ಟೇ ಅಲ್ಲದೇ ಬೇರೆ ಬೇರೆ ನಗರಗಳಲ್ಲಿ ಈತ ಮೌಲಾನಾ ಆಗಿ ವಾಸವಾಗಿದ್ದನು ಎಂದು ವಿಚಾರಣೆ ವೇಳೆ ತಿಳಿದು ಬಂದಿತ್ತು.

ಬಂಧಿತ ಐಎಸ್ಐ ಉಗ್ರ ಅಶ್ರಫ್ ಅಲಿ ಹೇಳಿಕೆ
ಜಮ್ಮು ಕಾಶ್ಮೀರದ ಬಸ್ ನಿಲ್ದಾಣದಲ್ಲಿ 2009ರಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 3 ರಿಂದ 4 ಮಂದಿ ಮೃತಪಟ್ಟಿದ್ದರು. ಅಂದು ನಡೆದ ಬಾಂಬ್ ಸ್ಫೋಟದ ಹಿಂದೆ ಐಎಸ್ಐ ಅಧಿಕಾರಿ ನಾಸಿರ್ ಕೈವಾಡವಿದೆ ಎಂಬುದರ ಬಗ್ಗೆ ಬಂಧಿತ ಉಗ್ರ ಮೊಹಮ್ಮದ್ ಅಶ್ರಫ್ ಅಲಿ ವಿಚಾರಣೆ ವೇಳೆ ತಿಳಿಸಿದ್ದಾನೆ. 2011ರಲ್ಲಿ ದೆಹಲಿ ಹೈಕೋರ್ಟ್ ಬಳಿ ಸ್ಫೋಟ ನಡೆಸಲು ಇಬ್ಬರು ಪಾಕಿಸ್ತಾನಿಯರು ಬಂದಿದ್ದು, ಅವರಲ್ಲಿ ಒಬ್ಬರನ್ನು ಗುಲಾಂ ಸರ್ವಾರ್ ಎಂದು ಅಶ್ರಫ್ ಅಲಿ ಬಹಿರಂಗಪಡಿಸಿದ್ದಾನೆ. ಜಮ್ಮು ಮತ್ತು ಕಾಶ್ಮೀರದಲ್ಲಿ 5 ಸೇನಾ ಸಿಬ್ಬಂದಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಬಗ್ಗೆ ಆರೋಪಿ ತಪ್ಪೊಪ್ಪಿಕೊಂಡಿದ್ದು, ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.












Click it and Unblock the Notifications