'ಯೋಧರ ದೇಹದ ಭಾಗಗಳು 600ಮೀ ದೂರ ಚಿಮ್ಮಿದ್ದನ್ನು ಕಣ್ಣಾರೆ ಕಂಡೆವು!'
Recommended Video

ಶ್ರೀನಗರ, ಫೆಬ್ರವರಿ 18: "ಯೋಧರ ದೇಹದ ಭಾಗಗಳು 500-600 ಮೀ. ದೂರದವರೆಗೆ ಚಿಮ್ಮಿದ್ದನ್ನು ನಾವು ಕಣ್ಣಾರೆ ಕಂಡೆವು. ಆ ಭೀಕರ ಸ್ಫೋಟ ನಮ್ಮ ಬದುಕಿನಲ್ಲಿ ಎಂದಿಗೂ ಮರೆಯುವುದಕ್ಕೆ ಸಾಧ್ಯವಾಗದಂಥದ್ದು" ಎಂದು ಪುಲ್ವಾಮಾದ ಭೀಕರ ದಾಳಿಯನ್ನು ಪ್ರತ್ಯಕ್ಷದರ್ಶಿ ಯೋಧ ಜಸ್ವೀಂದರ್ ಪಾಲ್ ವಿವರಿಸಿದ್ದಾರೆ.
ಪಾಕ್ ಮೂಲದ ಜೈಷ್ ಇ ಮೊಹಮ್ಮದ್ ಸಂಘಟನೆಯ ಉಗ್ರ ಸಿಆರ್ ಪಿಎಫ್ ಯೋಧರಿದ್ದ ಬಸ್ ಗೆ ಸ್ಫೋಟಕ ತುಂಬಿದ ಕಾರ್ ಅನ್ನು ಡಿಕ್ಕಿ ಹೊಡೆಸಿದ ಪರಿಣಾಮ ಸಂಭವಿಸಿದ ಭೀಕರ ಸ್ಫೋಟದಲ್ಲಿ 44 ಯೋಧರು ವೀರ ಮರಣವನ್ನಪ್ಪಿದ್ದರು.
ಆ ಘಟನೆ ಅದೆಷ್ಟು ಭೀಕರವಾಗಿತ್ತು ಎಂದರೆ ಎಷ್ಟೋ ಸ್ಫೋಟಗಳನ್ನು ಕಣ್ಣಾರೆ ಕಂಡಿದ್ದರೂ, ಎನ್ ಕೌಂಟರ್ ದಾಳಿಯಲ್ಲಿ ಭಾಗಿಯಾಗಿದ್ದರೂ ಯೋಧರು ಈ ಪರಿ ಆಘಾತಕ್ಕೊಳಗಾಗಿರಲಿಲ್ಲ ಎನ್ನುತ್ತಾರೆ ಜಸ್ವೀಂದರ್ ಪಾಲ್.
ಸ್ಫೋಟಕ್ಕೊಳಗಾದ ಸಿಆರ್ ಪಿಎಫ್ ಯೋಧರಿದ್ದ ಬಸ್ಸಿನ ಹಿಂದಿದ್ದ ಎರಡು ಬಸ್ ಗಳಲ್ಲಿ ಎರಡನೇ ಬಸ್ಸಿನಲ್ಲಿ ಜಸ್ವೀಂದರ್ ಸಹ ಇದ್ದರು.

600 ಮೀ.ದೂರ ಚಿಮ್ಮಿದ್ದ ದೇಹದ ಭಾಗಗಳು
ಸ್ಫೋಟವಾಗುತ್ತಿದ್ದಂತೆಯೇ ಯೋಧರ ದೇಹದ ಭಾಗಗಳು ಛಿದ್ರ ಛಿದ್ರವಾಗಿ ಸುಮಾರು 500-600 ಮೀ. ದೂರ ಹಾರಿದ್ದವು. ನಂತರ ಆ ದೇಹದ ಭಾಗಗಳು ಹುಡುಕಿ, ಗುರುತಿಸುವಾಗ ನಮಗಾದ ಯಮಯಾತನೆಯನ್ನು ವಿವರಿಸುವುದಕ್ಕೆ ಪದಗಳಿಲ್ಲ! ಎಂದು ಮರುಗುತ್ತಾರೆ ಜಸ್ವಿಂದರ್ ಪಾಲ್

ಜೀವನದಲ್ಲಿ ಮರೆಯುವುದಕ್ಕಾಗುವುದಿಲ್ಲ!
ಇಂಥ ಭೀಕರ ಸ್ಫೋಟವನ್ನು ನಾನಂತೂ ಹಿಂದೆಂದೂ ನೋಡಿರಲಿಲ್ಲ. ಅಂಥ ಸಪ್ಪಳವನ್ನು ನಾನು ಕೇಳಿರಲೇ ಇಲ್ಲ. ಈ ಭೀಕರ ಸ್ಫೋಟವನ್ನು ಎಂದಿಗೂ ಮರೆಯುವುದಕ್ಕೆ ಸಾಧ್ಯವೇ ಇಲ್ಲ ಎನ್ನುತ್ತಾರೆ ಜಸ್ವೀಂದರ್ ಪಾಲ್

ಹೆಚ್ಚು ಭಾವುಕರಾಗುವಂತೆಯೂ ಇಲ್ಲ!
"ಮೃತ ಯೋಧರಲ್ಲಿ ನನ್ನ ಆತ್ಮೀಯ ಸ್ನೇಹಿತರೊಬ್ಬರಿದ್ದರು. ಮನೀಂದರ್ ಸಿಂಗ್ ಎಂದು ಅವರ ಹೆಸರು. ಅವರ ದೇಹದ ಭಾಗಗಳು ನನ್ನ ಕೈಗೇ ಸಿಕ್ಕವು! ನನಗೆ ದುಃಖ ಉಮ್ಮಳಿಸಿಬಂದಿತ್ತು! ಆದರೆ ನಾವು ತೀರಾ ಭಾವುಕರಾಗುವಂತೆಯೂ ಇಲ್ಲ. ಇಡೀ ದೇಶವೂ ಯೋಧರ ಬಲಿದಾನಕ್ಕೆ ಮರುಗುತ್ತಿದೆ, ಪ್ರತೀಕಾರ ಜ್ವಾಲೆಯಲ್ಲಿ ಕುದಿಯುತ್ತಿದೆ. ಆದರೆ ನಮಗಿಲ್ಲಿ ಅಳುವುದಕ್ಕೂ ಬಿಡುವಿಲ್ಲ. ಏನೆಲ್ಲ ಆಗಿದ್ದರೂ, ಏನೂ ಆಗಿಲ್ಲ ಎಂಬಂತೆ ನಮ್ಮ ಕರ್ತವ್ಯಕ್ಕೆ ಹಾಜರಾಗಬೇಕು" ಎನ್ನುತ್ತಾರೆ ಜಸ್ವೀಂದರ್ ಪಾಲ್

ಹುತಾತ್ಮರಾದ 44 ಯೋಧರು
ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಯೋಧರಿದ್ದ ಬಸ್ಸಿಗೆ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಉಗ್ರ ಅದಿಲ್ ದಾರ್ ಆತ್ಮಾಹುತಿ ಕಾರ್ ಬಾಂಬ್ ದಾಳಿ ನಡೆಸಿದ ಪರಿಣಾಮ 44 ಯೋಧರು ಹುತಾತ್ಮರಾಗಿದ್ದರು.












Click it and Unblock the Notifications