ಅರ್ಧಸುಟ್ಟ ಮೃತದೇಹವನ್ನು ಹಾಗೇ ಬಿಟ್ಟು ಓಡಿದ್ದೇಕೆ ಕುಟುಂಬಸ್ಥರು?
ಶ್ರೀನಗರ್, ಜೂನ್.03: ನೊವೆಲ್ ಕೊರೊನಾ ವೈರಸ್ ನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಕ್ಕೆ ಅರ್ಧಸುಟ್ಟ ಮೃತದೇಹವನ್ನು ಅಲ್ಲಿಯೇ ಬಿಟ್ಟು ಕುಟುಂಬವರೆಲ್ಲ ಓಡಿ ಹೋಗಿರುವ ಘಟನೆ ಜಮ್ಮು-ಕಾಶ್ಮೀರದಲ್ಲಿ ವರದಿಯಾಗಿದೆ.
ಜಮ್ಮುವಿನ ದೋದಾ ಜಿಲ್ಲೆಯಲ್ಲಿ 72 ವರ್ಷದ ವ್ಯಕ್ತಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿತ್ತು. ಈತ ಜಿಲ್ಲೆಯಲ್ಲಿ ಪತ್ತೆಯಾದ ನಾಲ್ಕನೇ ಸೋಂಕಿತನಾಗಿದ್ದು, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು. ಈ ವ್ಯಕ್ತಿಯ ಅಂತ್ಯಕ್ರಿಯೆ ವೇಳೆ ಸ್ಥಳೀಯ ಜನರು ಕಲ್ಲುತೂರಾಟ ನಡೆಸಿದ್ದರು. ಇದರಿಂದ ಬೆದರಿದ ಕುಟುಂಬಸ್ಥರು ಅಲ್ಲಿಂದ ಓಡಿ ಹೋಗಿದ್ದರು.
ಸ್ಥಳದಲ್ಲೇ ಅರ್ಧಸುಟ್ಟ ಬಿದ್ದಿದ್ದ ಕೊರೊನಾ ವೈರಸ್ ಸೋಂಕಿತ ವ್ಯಕ್ತಿಯ ಮೃತದೇಹವನ್ನು ಮತ್ತೆ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಬೇರೊಂದು ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಅಂತ್ಯ ಸಂಸ್ಕಾರವನ್ನು ನಿಯಮಗಳ ಅನುಸಾರವಾಗಿ ನೆರವೇಸಲಾಯಿತು.

ಅಧಿಕಾರಿ ಮತ್ತು ವೈದ್ಯರ ತಂಡದ ಮಧ್ಯಸ್ಥಿಕೆಯಲ್ಲಿ ಅಂತ್ಯಕ್ರಿಯೆ
ಕೊರೊನಾ ವೈರಸ್ ಸೋಂಕಿತರು ಮೃತಪಟ್ಟಲ್ಲಿ ಅನುಸರಿಸಬೇಕಾದ ನಿಯಮಗಳ ಅಡಿಯಲ್ಲಿಯೇ ಅಧಿಕಾರಿಗಳು, ವೈದ್ಯಕೀಯ ತಂಡ ಮಧ್ಯಸ್ಥಿಕೆಯಲ್ಲೇ ಅಂತ್ಯಕ್ರಿಯೆ ನೆಡಸಲಾಗುತ್ತಿತ್ತು. ದೋಮನ್ ಪ್ರದೇಶದಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಸ್ಥಳದಲ್ಲಿ ಆಂಬುಲೆನ್ಸ್ ವ್ಯವಸ್ಥೆ ಕೂಡಾ ಇತ್ತು ಎನ್ನಲಾಗಿದೆ.

ಮೃತರ ಸಂಬಂಧಿಕರಷ್ಟೇ ಅಂತ್ಯಕ್ರಿಯೆಯಲ್ಲಿ ಭಾಗಿ
ಕೊರೊನಾ ವೈರಸ್ ನಿಂದ ಪ್ರಾಣ ಬಿಟ್ಟ ವ್ಯಕ್ತಿಯ ಪತ್ನಿ, ಇಬ್ಬರು ಮಕ್ಕಳು, ಸೇರಿದಂತೆ ಆತ್ಮೀಯ ಸಂಬಂಧಿಕರಷ್ಟೇ ಅಂತ್ಯ ಸಂಸ್ಕಾರ ನೆರವೇರಿಸುವ ಸಂದರ್ಭದಲ್ಲಿ ಭಾಗಿಯಾಗಿದ್ದರು. ಆದರೆ ಸ್ಥಳೀಯರು ಕಲ್ಲುತೂರಾಟ ನಡೆಸುತ್ತಿದ್ದಂತೆ ಎಲ್ಲರೂ ಓಡಿಹೋಗಿ ಸ್ಥಳದಲ್ಲಿದ್ದ ಆಂಬ್ಯುಲೆನ್ಸ್ ನಲ್ಲಿ ಸೇರಿಕೊಂಡರು.

ಸರ್ಕಾರದ ಅನುಮತಿ ಬಳಿಕ ಸ್ವಗ್ರಾಮಕ್ಕೆ ಮೃತದೇಹ
ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಸ್ವಗ್ರಾಮದಲ್ಲಿ ನೆರವೇರಿಸಬೇಕು ಎಂಬ ಕಾರಣಕ್ಕೆ ಸರ್ಕಾರದಿಂದ ಅನುಮತಿ ಪಡೆದುಕೊಂಡಿದ್ದೆವು. ಸರ್ಕಾರವು ಅನುಮತಿ ನೀಡಿದ ನಂತರವಷ್ಟೇ ನಾವು ಆಂಬುಲೆನ್ಸ್ ಮೂಲಕ ಸ್ವಗ್ರಾಮಕ್ಕೆ ತೆಗೆದುಕೊಂಡು ಬಂದೆವು. ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿಕೊಂಡು ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಗುತ್ತಿತ್ತು ಎಂದು ಮೃತನ ಪುತ್ರ ಹೇಳಿದ್ದಾರೆ. ಅಲ್ಲದೇ ಸ್ಥಳದಲ್ಲೇ ಭದ್ರತಾ ಸಿಬ್ಬಂದಿಯಿದ್ದರೂ ಯಾವುದೇ ರೀತಿ ರಕ್ಷಣೆಯನ್ನು ಒದಗಿಸಲು ಆಗಲಿಲ್ಲ ಎಂದು ದೂರಿದ್ದಾರೆ.

ಸರ್ಕಾರವು ಸೂಕ್ತ ನಿಯಮವನ್ನು ಜಾರಿಗೊಳಿಸಲಿ ಎಂದು ಆಗ್ರಹ
ಸ್ಥಳೀಯ ಜನರಿಂದ ನಮ್ಮನ್ನೆಲ್ಲ ರಕ್ಷಿಸಿ ಜಿಎಂಸಿ ಆಸ್ಪತ್ರೆಗೆ ವಾಪಸ್ ಕರೆದುಕೊಂಡು ಬರುವಲ್ಲಿ ಆಂಬುಲೆನ್ಸ್ ಚಾಲಕನ ಪಾತ್ರ ಬಲುಮುಖ್ಯವಾಗಿತ್ತು. ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ನೆರವೇರಿಸುವ ಬಗ್ಗೆ ಸರ್ಕಾರವು ಸೂಕ್ತ ನಿಯಮಗಳನ್ನು ಜಾರಿಗೊಳಿಸಬೇಕು. ಇಲ್ಲದಿದ್ದಲ್ಲಿ ಈ ರೀತಿಯ ಸಮಸ್ಯೆಗಳು ಪದೇ ಪದೆ ಎದುರಾಗುತ್ತವೆ ಎಂದು ಮೃತ ವ್ಯಕ್ತಿಯ ಪುತ್ರ ಸರ್ಕಾರವನ್ನು ಎಚ್ಚರಿಸಿದ್ದಾರೆ.












Click it and Unblock the Notifications