ಕೊರೊನಾ ಭೀತಿ: ವೈಷ್ಣೋದೇವಿ ದರ್ಶನಕ್ಕೆ ನಿರ್ಬಂಧ
ಜಮ್ಮು ಮತ್ತು ಕಾಶ್ಮೀರ, ಮಾರ್ಚ್ 16: ಡೆಡ್ಲಿ ಕೊರೊನಾ ವೈರಸ್ ಸೋಂಕಿನಿಂದಾಗಿ ಭಾರತದಲ್ಲಿ 112 ಪ್ರಕರಣಗಳು ದಾಖಲಾಗಿವೆ. ದಿನೇ ದಿನೇ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ, ಜಮ್ಮುವಿನ ಪ್ರಸಿದ್ಧ ವೈಷ್ಣೋದೇವಿ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಕೆಲವು ನಿರ್ಬಂಧಗಳನ್ನು ಹೇರಲಾಗಿದೆ.
ಎನ್.ಆರ್.ಐಗಳು ಅಥವಾ ವಿದೇಶಗಳಿಂದ ಬರುವ ಯಾತ್ರಿಗಳು ಮುಂಜಾಗ್ರತಾ ಕ್ರಮವಾಗಿ ಭಾರತಕ್ಕೆ ಬಂದ ಬಳಿಕ 28 ದಿನಗಳ ಕಾಲ ವೈಷ್ಣೋದೇವಿ ಮಂದಿರಕ್ಕೆ ಬರಬೇಡಿ ಎಂದು ಶ್ರೀ ಮಾತಾ ವೈಷ್ಣೋದೇವಿ ದೇವಾಲಯದ ಆಡಳಿತ ಮಂಡಳಿ ಸಲಹೆ ನೀಡಿದೆ.
ಹಿಂದೂ ಧಾರ್ಮಿಕ ಕ್ಷೇತ್ರ ವೈಷ್ಣೋದೇವಿ ದರ್ಶನಕ್ಕೆ ಪ್ರತಿ ವರ್ಷ ಲಕ್ಷಾಂತರ ಭಕ್ತಾದಿಗಳು ಆಗಮಿಸುತ್ತಾರೆ. ವೈಷ್ಣೋದೇವಿ ದರ್ಶನಕ್ಕೆ ಹೆಚ್ಚು ಜನಜಂಗುಳಿ ಸೇರುವ ಕಾರಣ ವಿದೇಶಗಳಿಂದ ಬರುವ ಯಾತ್ರಿಕರಿಗೆ ಸುರಕ್ಷತಾ ದೃಷ್ಟಿಯಿಂದ ಭಾರತಕ್ಕೆ ಬಂದ್ಮೇಲೆ 28 ದಿನಗಳ ಕಾಲ ನಿರ್ಬಂಧ ಹೇರಲಾಗಿದೆ.

ಈಗಾಗಲೇ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಆಡಳಿತ ಮಂಡಳಿ ಕೂಡ ಭಕ್ತರಿಗೆ ಸಂದೇಶ ರವಾನಿಸಿದೆ. ಈ ಬಾರಿ ಅಯ್ಯಪ್ಪಸ್ವಾಮಿ ದೇವಸ್ಥಾನದ ಪೂಜೆಗೆ ಭಕ್ತರು ಆಗಮಿಸದಂತೆ ತಿರುವಾಂಕೂರ್ ದೇವಸ್ವಂ ಮಂಡಳಿಯ ಅಧ್ಯಕ್ಷ ಎನ್.ವಾಸು ತಿಳಿಸಿದ್ದಾರೆ.
ಇನ್ನೂ ಜ್ವರ, ನೆಗಡಿ, ಕೆಮ್ಮು ಇರುವ ಭಕ್ತಾದಿಗಳು ಸದ್ಯಕ್ಕೆ ತಿರುಪತಿ ದೇವಸ್ಥಾನಕ್ಕೆ ಬರುವುದು ಬೇಡ ಎಂದು ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನ) ತಿಳಿಸಿದೆ.












Click it and Unblock the Notifications