ಯಾರು ಗನ್ ಎತ್ತುತ್ತಾರೋ ಅವರನ್ನು ಇಲ್ಲವಾಗಿಸುತ್ತೇವೆ: ಸೇನೆ ಎಚ್ಚರಿಕೆ
Recommended Video

ಶ್ರೀನಗರ, ಫೆಬ್ರವರಿ 19: ಯಾರು ಗನ್ ಎತ್ತುತ್ತಾರೋ ಅವರನ್ನು ಇಲ್ಲವಾಗಿಸುತ್ತೇವೆ ಎಂದು ಭಾರತೀಯ ಸೇನೆ ಖಡಕ್ ಎಚ್ಚರಿಕೆ ನೀಡಿದೆ.
ಜೈಶ್ ಎ ಮೊಹಮ್ಮದ್ ಕಮಾಂಡರ್ಗಾಗಿ ಫೆ.14ರ ಪುಲ್ವಾಮಾ ದಾಳಿಯ ಬಳಿಕ ಹುಡುಕಾಟ ನಡೆಸುತ್ತಿದ್ದೇವೆ. ಉಗ್ರರ ದಾಳಿ ನಡೆದ 100 ಗಂಟೆಯ ಒಳಗಾಗಿ ಕಣಿವೆಯಲ್ಲಿ ಜೆಇಎಂ ನಾಯಕತ್ವವನ್ನು ಹೊಡೆದುರುಳಿಸಿದ್ದೇವೆ ಎಂದು ಭಾರತೀಯ ಸೇನೆಯ ಚಿನಾರ್ ಕ್ಯಾಂಪ್ನ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಕನ್ವಲ್ಜೀತ್ ಸಿಂಗ್ ಧಿಲ್ಲೋನ್ ತಿಳಿಸಿದರು.
ದಾಳಿಯ ಬಳಿಕ ಇದೇ ಮೊದಲ ಬಾರಿಗೆ ಸಿಆರ್ಪಿಎಫ್ ಮತ್ತು ಪೊಲೀಸರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ.
ಕಾಶ್ಮೀರ ಸಮಾಜದಲ್ಲಿ ತಾಯಿ ಅತ್ಯಂತ ದೊಡ್ಡ ಪಾತ್ರವನ್ನು ವಹಿಸುತ್ತಾರೆ. ಕಾಶ್ಮೀರದ ಎಲ್ಲ ತಾಯಂದಿರಿಗೆ ಮನವಿ ಮಾಡುತ್ತೇನೆ, ನಿಮ್ಮ ಮಕ್ಕಳು ಭಯೋತ್ಪಾದನೆಗೆ ಸೇರಿಕೊಂಡಿದ್ದರೆ ಅವರನ್ನು ಶರಣಾಗಿಸಿ ಮತ್ತು ಮುಖ್ಯವಾಹಿನಿಗೆ ತರುವಂತೆ ಮಾಡಿ. ಗನ್ ಎತ್ತಿಕೊಂಡ ಯಾರೇ ಆದರೂ ಶರಣಾಗದೆ ಇದ್ದರೆ ಅವರನ್ನು ಉಳಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ತನಿಖೆ ಈಗ ಒಂದು ಹಂತಕ್ಕೆ ಬಂದಿದೆ. ದಾಳಿಯು ಪಾಕಿಸ್ತಾನದಿಂದಲೇ ನಿಯಂತ್ರಿತವಾದದ್ದು ಎನ್ನುವುದು ಖಚಿತವಾಗಿದೆ. ಜೆಇಎಂಅನ್ನು ಐಎಸ್ಐ ನಿಯಂತ್ರಿಸುತ್ತದೆ. ಇದರಲ್ಲಿ ಪಾಕಿಸ್ತಾನ ಸೇನೆಯೂ ಭಾಗಿಯಾಗಿರುವುದರಲ್ಲಿ ಅನುಮಾನವೇ ಇಲ್ಲ. ಜೆಇಎಂ ಪಾಕಿಸ್ತಾನ ಸೇನೆಯ ಕೂಸು ಎಂದು ಧಿಲ್ಲೋನ್ ಹೇಳಿದರು.
ಯಾವುದೇ ನಾಗರಿಕರಿಗೆ ಪ್ರಾಣಹಾನಿ, ಗಾಯವಾಗುವುದನ್ನು ನಾವು ಬಯಸುವುದಿಲ್ಲ. ಹೀಗಾಗಿ ಎನ್ಕೌಂಟರ್ಗಳು ನಡೆಯುವ ಪ್ರದೇಶದಿಂದ ಜನರು ದೂರವೇ ಉಳಿಯುವಂತೆ ಮನವಿ ಮಾಡುತ್ತೇವೆ ಎಂದರು.
ಸೋಮವಾರ ನಡೆದ ಎನ್ಕೌಂಟರ್ನಲ್ಲಿ ಹತ್ಯೆಯಾದ ಕಮ್ರಾನ್ ಕಣಿವೆಯಲ್ಲಿರುವ ಜೈಶ್ನ ಪ್ರಮುಖ ನಾಯಕನಾಗಿದ್ದ.

ಮಾಹಿತಿ ನೀಡಲು ಸಾಧ್ಯವಿಲ್ಲ
ದಾಳಿಯಲ್ಲಿ ಬಳಸಿದ ಸ್ಫೋಟಕಗಳ ಕುರಿತು ಮಾಹಿತಿ ದೊರೆತಿದೆ. ಆದರೆ, ತನಿಖೆಯ ಎಲ್ಲ ವಿವರಗಳನ್ನು ಈಗ ಹಂಚಿಕೊಳ್ಳಲು ಸಾಧ್ಯವಿಲ್ಲ. ಪುಲ್ವಾಮಾದಲ್ಲಿ ನಡೆದ ಕಾರ್ ಬಾಂಬ್ ಮಾದರಿ ದಾಳಿ ಕಾಶ್ಮೀರದಲ್ಲಿ ಬಹಳ ವರ್ಷಗಳ ಹಿಂದೆ ನಡೆದಿತ್ತು. ಈ ಬಗೆಯ ದಾಳಿಗಳನ್ನು ಎದುರಿಸಲು ನಾವು ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.
|
ಕರ್ತವ್ಯಬದ್ಧತೆ ಮೆರೆದ ಬ್ರಿಗೇಡಿಯರ್
ಸೇನೆಯಲ್ಲಿದ್ದವರು ಸಂಕಷ್ಟದ ಸಂದರ್ಭದಲ್ಲಿ ಎಂತಹ ತ್ಯಾಗ, ಹೋರಾಟಕ್ಕೂ ಸಿದ್ಧವಾಗುತ್ತಾರೆ ಎಂಬುದಕ್ಕೆ ಉತ್ತಮ ನಿದರ್ಶನ ದೊರೆತಿದೆ. ಗಾಯದ ಕಾರಣ ರಜೆಯಲ್ಲಿದ್ದ ಬ್ರಿಗೇಡಿಯರ್ ಹರ್ದೀಪ್ ಸಿಂಗ್, ಉಗ್ರರ ವಿರುದ್ಧ ಎನ್ಕೌಂಟರ್ ನಡೆಸುವ ಸಲುವಾಗಿ ಸ್ವಯಂಪ್ರೇರಣೆಯಿಂದ ರಜೆಯನ್ನು ಕಡಿತಗೊಳಿಸಿ ಕಾರ್ಯಾಚರಣೆಯ ಸ್ಥಳಕ್ಕೆ ಬಂದು ತಮ್ಮ ತಂಡವನ್ನು ಮುನ್ನಡೆಸಿದ್ದಾರೆ ಎಂದು ಶ್ಲಾಘಿಸಿದರು.

ಕಣಿವೆಗೆ ಕಾಲಿಟ್ಟರೆ ಉಳಿಯೊಲ್ಲ
ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳಲ್ಲಿ ನಮ್ಮ ಗಮನ ಅತ್ಯಂತ ಸ್ಪಷ್ಟವಾಗಿದೆ. ಹಾಗೆಯೇ ಕಾಶ್ಮೀರ ಕಣಿವೆಯನ್ನು ಪ್ರವೇಶಿಸುವ ಯಾರೂ ಜೀವಂತವಾಗಿ ಹಿಂದಕ್ಕೆ ಹೋಗುವುದಿಲ್ಲ ಎನ್ನುವುದು ಕೂಡ ಸ್ಪಷ್ಟ ಎಂದು ಧಿಲ್ಲೋನ್ ತಿಳಿಸಿದರು.
|
ಉಗ್ರರ ನೇಮಕಾತಿಗೆ ಹಿನ್ನಡೆ
ಸ್ಥಳೀಯರನ್ನು ಭಯೋತ್ಪಾದನಾ ಸಂಘಟನೆಗಳಿಗೆ ನೇಮಕಾತಿ ಮಾಡಿಕೊಳ್ಳುವುದರಲ್ಲಿ ಭಾರಿ ಹಿನ್ನಡೆಯುಂಟಾಗಿದೆ. ಕಳೆದ ಮೂರು ತಿಂಗಳಿನಿಂದ ಯಾವುದೇ ನೇಮಕಾತಿ ನಡೆದಿಲ್ಲ. ಈ ವಿಚಾರದಲ್ಲಿ ಕುಟುಂಬಗಳು ಪ್ರಮುಖ ಪಾತ್ರ ವಹಿಸುತ್ತವೆ. ಯುವಕರು ಉಗ್ರರೊಂದಿಗೆ ಕೈಜೋಡಿಸುವುದನ್ನು ತಡೆಯಲು ಕುಟುಂಬಗಳು ಮತ್ತು ಸಮುದಾಯಗಳು ಗಮನಹರಿಸುವಂತೆ ಮನವಿ ಮಾಡುವುದಾಗಿ ಕಾಶ್ಮೀರ ಐಜಿಪಿ ಎಸ್ಪಿ ಪಣಿ ತಿಳಿಸಿದರು.
|
ಕಾಶ್ಮೀರದ ಜನರಿಗೆ ಸಹಾಯವಾಣಿ
ದೇಶದ ಅನೇಕ ಕಡೆ ಕಾಶ್ಮೀರ ಮೂಲದ ಯುವಕರ ಮೇಲೆ ದಾಳಿಗಳು ನಡೆಯುತ್ತಿರುವುದರಿಂದ ಸಹಾಯವಾಣಿ ಸ್ಥಾಪಿಸಲಾಗಿದೆ. ಕಾಶ್ಮೀರದ ವಿದ್ಯಾರ್ಥಿಗಳು ದೇಶದ ಯಾವುದೇ ಮೂಲೆಯಿಂದ 14411ಕ್ಕೆ ಕರೆಮಾಡಬಹುದು. ಹೊರಭಾಗದಲ್ಲಿ ಓದುತ್ತಿರುವ ಕಾಶ್ಮೀರದ ಮಕ್ಕಳಿಗೆ ಭದ್ರತಾ ಪಡೆಗಳ ರಕ್ಷಣೆ ಇರುತ್ತದೆ ಎಂದು ಸಿಆರ್ಪಿಎಫ್ನ ಜುಲ್ಫೀಕರ್ ಹಸನ್ ತಿಳಿಸಿದರು.












Click it and Unblock the Notifications