ಉಗ್ರದಾಳಿಯ ಭೀತಿ: ಅಮರನಾಥ್ ಯಾತ್ರಿಕರಿಗೆ ಹಿಂದಿರುಗುವಂತೆ ಸೂಚನೆ
ಶ್ರೀನಗರ, ಆಗಸ್ಟ್ 02: ಉಗ್ರದಾಳಿ ಕುರಿತು ಗುಪ್ತಚರ ಇಲಾಖೆ ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಈ ಕೂಡಲೇ ಜಮ್ಮು ಮತ್ತು ಕಾಶ್ಮೀರದಿಂದ ವಾಪಸ್ ತೆರಳುವಂತೆ ಅಮರನಾಥ ಯಾತ್ರಿಕರಿಗೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಸೂಚನೆ ನೀಡಿದೆ.
ಅಮರನಾಥ ಯಾತ್ರಿಕರ ಮೇಲೆ ಪಾಕ್ ಸೇನಾ ಬೆಂಬಲಿತ ಉಗ್ರ ಗುಂಪು ದಾಳಿ ನಡೆಸಲು ಸಂಚು ರೂಪಿಸಿದೆ ಎಂಬ ಖಚಿತ ಮಾಹಿತಿ ಮತ್ತು ಅದಕ್ಕೆ ಸಾಕ್ಷ್ಯ ಎಂಬಂತೆ ಶಸ್ತ್ರಾಸ್ತ್ರಗಳು ಸಿಕ್ಕ ಹಿನ್ನೆಲೆಯಲ್ಲಿ ಸರ್ಕಾರ ಈ ಸೂಚನೆ ನೀಡಿದೆ.
ಶ್ರೀನಗರದಲ್ಲಿ ಇಂದು ಚಿನಾರ್ ಕ್ರಾಪ್ಸ್ ಕಮಾಂಡರ್ ಲೆ.ಜ. ಕೆಜಿಎಸ್ ಧಿಲೋನ್ ಮತ್ತು ಜಮ್ಮು ಮತ್ತು ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ಅವರು ನಡೆಸಿದ ಜಂಟಿ ಸುದ್ದಿ ಗೋಷ್ಠಿಯ ನಂತರ ಜಮ್ಮು-ಕಾಶ್ಮೀರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

ಜಮ್ಮು ಕಾಶ್ಮೀರದ ಶ್ರೀನಗರದಿಂದ 141 ಕಿ.ಮೀ. ದೂರದಲ್ಲಿರುವ, ಸಮುದ್ರ ಮಟ್ಟದಿಂದ 3888 ಮೀ. ಎತ್ತರದಲ್ಲಿರುವ ಅಮರನಾಥ ದೇವಾಲಯಕ್ಕೆ ಸುಮಾರು 5000 ವರ್ಷಗಳ ಇತಿಹಾಸವಿದೆ ಎನ್ನುತ್ತಾರೆ. ಇಲ್ಲಿ ನೈಸರ್ಗಿಕವಾಗಿ ಸೃಷ್ಟಿಯಾಗುವ ಹಿಮಲಿಂಗವನ್ನು ನೋಡುವುದು ಎಷ್ಟೋ ಹಿಂದುಗಳ ಪಾಲಿನ ಪರಮಗುರಿಯೂ ಹೌದು. ಪ್ರತಿ ವರ್ಷ ಜೂನ್ ತಿಂಗಳಿನಿಂದ ಆಗಸ್ಟ್ ನಡುವಲ್ಲಿ ನಡೆಯುವ ಅಮರನಾಥ ಯಾತ್ರೆ ಈ ಬಾರಿಯೂ ನಡೆಯುತ್ತಿದೆ.
ಆದರೆ ಈ ಬಾರಿ ಅಮರನಾಥ ದೇವಾಲಯಕ್ಕೆ ತೆರಳಲುವ ಹಾದಿಯಲ್ಲೇ ಪಾಕ್ ಸೇನೆಗೆ ಸೇರಿದ ಕೆಲವು ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದು, ಯಾತ್ರಿಕರ ಮೇಲೆ ದಾಳಿ ನಡೆಸಲು ಮುಂದಾಗಿರುವ ಉಗ್ರರಿಗೆ ಪಾಕ್ ಸೇನೆಯೇ ಬೆಂಬಲ, ಕುಮ್ಮಕ್ಕು ನೀಡುತ್ತಿದೆ ಎಂಬುದು ಸಾಬೀತಾಗಿದೆ. ಈ ಬಗ್ಗೆ ಗುಪ್ತಚರ ಇಲಾಖೆ ನೀಡಿದ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
2017 ರಲ್ಲಿ ಅಮರನಾಥನಲ್ಲಿರುವ ಹಿಮಲಿಂಗದ ದರ್ಶನಕ್ಕಾಗಿ ತೆರಳಿದ್ದ ಭಕ್ತರ ಮೇಲೆ ಜುಲೈ 10 ರಂದು ನಡೆದಿದ್ದ ಉಗ್ರ ದಾಳಿಯಲ್ಲಿ 7 ಭಕ್ತರು ಸಾವನ್ನಪ್ಪಿದ್ದರು. ದೇವರ ದರ್ಶನಕ್ಕೆ ತೆರಳಿದ್ದವರು ಹೆಣವಾಗಿ ಮನೆಗೆ ಹಿಂತಿರುಗಿದ್ದರು.
ಇದೇ ಮೊದಲಲ್ಲ, ಈ ಮೊದಲೂ ಹಲವು ಬಾರಿ ಇಂಥ ಪೈಶಾಚಿಕ ಕೃತ್ಯಗಳು ನಡೆದಿದ್ದು, ಆ ಕಾರಣದಿಂದಲೇ ಪ್ರತಿವರ್ಷವೂ ಅಮರನಾಥ ಯಾತ್ರೆಯನ್ನು ಬಿಗಿಬಂದೋಬಸ್ತ್ ನಲ್ಲಿ ಆಚರಿಸಲಾಗುತ್ತದೆ.
ಅಮರನಾಥ ಯಾತ್ರೆ ಮಾತ್ರವಲ್ಲದೆ, ಇದೇ ತಿಂಗಳ 15 ನೇ ತಾರೀಖು, ಸ್ವಾತಂತ್ರ್ಯ ದಿನವೂ ಇರುವುದರಿಂದ ಎಲ್ಲೆಡೆ ಬಿಗಿಬಂದೋಬಸ್ತ್ ನಿಯೋಜಿಸಲಾಗಿದೆ.











Click it and Unblock the Notifications