ವೇತನ ಆಯೋಗದ ಅನ್ವಯ 4.5 ಲಕ್ಷ ನೌಕರರ ಭತ್ಯೆ ಹೆಚ್ಚಳ
ನವದೆಹಲಿ, ಡಿಸೆಂಬರ್ 12: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡುವ ಸಂವಿಧಾನದ ಆರ್ಟಿಕಲ್ 370 ರದ್ದು ಪಡಿಸಿದ ಬೆನ್ನಲ್ಲೇ ಕೇಂದ್ರಾಡಳಿತ ಪ್ರದೇಶ ರೂಪುಗೊಂಡಿದೆ. ಸದ್ಯ ಅಲ್ಲಿನ ಸರ್ಕಾರಿ ನೌಕರರಿಗೆ ಬಹುಕಾಲದ ನಂತರ ಸರ್ಕಾರದಿಂದ ಶುಭ ಸುದ್ದಿ ಸಿಕ್ಕಿದೆ.
ಜಮ್ಮು ಮತ್ತು ಕಾಶ್ಮೀರದ ಸುಮಾರು 4.5 ಲಕ್ಷ ಸರ್ಕಾರಿ ನೌಕರರಿಗೆ ವಿಶೇಷ ಭತ್ಯೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಇದಕ್ಕಾಗಿ 4,800 ಕೋಟಿ ರು ಮೀಸಲಿಡಲಾಗಿದೆ.
ಈ ವಿಧಾನಸಭೆ ಸದಸ್ಯರ ಸಂಬಳ 85 ಸಾವಿರ ರು ಏರಿಕೆ!
ಹೊಸದಾಗಿ ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಅಭಿವೃದ್ಧಿಗಾಗಿ ಸರ್ಕಾರ ಬದ್ಧವಾಗಿದೆ. ಮಕ್ಕಳ ಶಿಕ್ಷಣ ಭತ್ಯೆ, ಹಾಸ್ಟೆಲ್ ಭತ್ಯೆ, ಸಾರಿಗೆ ಭತ್ಯೆ ಹೀಗೆ ವಿವಿಧ ಭತ್ಯೆಗಳನ್ನು 4.5 ಲಕ್ಷ ಈ ಹಿಂದಿನ ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸರ್ಕಾರಿ ನೌಕರರಿಗೆ ನೀಡಲಾಗುತ್ತಿದೆ.
ಹೊಸ ಭತ್ಯೆಗಳು ಅಕ್ಟೋಬರ್ 31, 2019ರಿಂದ ಅನ್ವಯವಾಗಲಿದೆ. 7ನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶದ ಸರ್ಕಾರಿ ನೌಕರರಿಗೆ ಇದರ ಲಾಭ ಸಿಗಲಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಒನ್ಇಂಡಿಯಾಕ್ಕೆ ತಿಳಿಸಿದರು.