ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ ಎಸ್ ಆರ್ ಹಿರೇಮಠ
ಧಾರವಾಡ, ಅಕ್ಟೋಬರ್ 5: ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಗುರುವಾರ ಹುಬ್ಬಳ್ಳಿಯಲ್ಲಿ ಘೋಷಿಸಿದ್ದಾರೆ. ಜನ ಸಂಗ್ರಾಮ ಪರಿಷತ್ ನ ಮಹಾಮೈತ್ರಿ ರಚಿಸಿಕೊಂಡು ಚುನಾವಣೆ ರಾಜಕಾರಣಕ್ಕೆ ಇಳಿಯುವುದಾಗಿ ಅವರು ತಿಳಿಸಿದ್ದಾರೆ.
ರಾಜಕಾರಣಿಗಳು, ಅವರ ಸಂಬಂಧಿಕರ ಅಕ್ರಮಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಬಿಡುಗಡೆ ಮಾಡುವ ಮೂಲಕ ಮನೆ ಮಾತಾಗಿದ್ದ ಎಸ್.ಆರ್.ಹಿರೇಮಠ ಧಾರವಾಡದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಂದಿನ ಲೋಕಸಭಾ ಚುನಾವಣೆಗೆ ನಾನು ಸ್ಪರ್ಧೆ ಮಾಡುವುದು ಖಚಿತ ಎಂದು ತಿಳಿಸಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆಗೆ ಮಹಾಮೈತ್ರಿ ಅಡಿಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಸಮಾಜದಲ್ಲಿ ಉತ್ತಮ ಹೆಸರು ಇರುವ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತೇವೆ. ನಮ್ಮೊಂದಿಗೆ ಸ್ವರಾಜ್ ಇಂಡಿಯಾ, ಕರ್ನಾಟಕ ಶಕ್ತಿ ಸಂಘಟನೆ, ಆಮ್ ಆದ್ಮಿ ಪಾರ್ಟಿ, ಸಿಪಿಐ, ಸಿಪಿಎಂ ಪಕ್ಷಗಳು ಒಂದಾಗಿ ಬರಲು ಮುಂದಾಗಿವೆ ಎಂದು ತಿಳಿಸಿದರು.
ಇದೇ ವೇಳೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ತಮ್ಮ ರಾಜ್ಯದ ಸರಕಾರಿ ಆಸ್ಪತ್ರೆಗಳನ್ನು ಸರಿಯಾಗಿ ಇಟ್ಟುಕೊಳ್ಳದ ಯೋಗಿ ಆದಿತ್ಯನಾಥ್ ಕೇರಳಕ್ಕೆ ಬಂದು, ಅಲ್ಲಿನ ಸರಕಾರಕ್ಕೆ ಬುದ್ಧಿ ಹೇಳುವುದನ್ನು ನೋಡಿದರೆ ಆರು ಮಕ್ಕಳನ್ನು ಹಡೆದವಳ ಮುಂದೆ ಮೂರು ಮಕ್ಕಳನ್ನು ಹಡೆದವಳು ಪಾಠ ಮಾಡಿದಂತೆ ಇದೆ ಎಂದರು.












Click it and Unblock the Notifications