ವಿರಾಟ್ ಕೊಹ್ಲಿ ನಿವೃತ್ತಿ: ಪಾಕಿಸ್ತಾನ ಕ್ರಿಕೆಟರ್ ಹೇಳಿದ ಭವಿಷ್ಯದಲ್ಲಿ ಏನಿದೆ?
ನವದೆಹಲಿ, ಸೆಪ್ಟೆಂಬರ್ 14: ಟೀಮ್ ಇಂಡಿಯಾ ಪಾಲಿಗೆ ಆಪತ್ಬಾಂಧವ ಎಂದರೆ ಮೊದಲು ನೆನಪಿಗೆ ಬರುವುದೇ ವಿರಾಟ್ ಕೊಹ್ಲಿ. ಅಗ್ರೆಸಿವ್ ಆಟಕ್ಕೆ ಹೇಳಿ ಮಾಡಿಸಿದಂತೆ ಹೊಂದಿಕೊಳ್ಳುವ ಕೊಹ್ಲಿ, ಇತ್ತೀಚಿಗೆ ತಮ್ಮ ಬ್ಯಾಟ್ ಗೆ ರೆಸ್ಟ್ ಕೊಟ್ಟಂತೆ ಆಡುತ್ತಿದ್ದರು.
82 ಇನ್ನಿಂಗ್ಸ್ ಗಳಲ್ಲಿ ನೀರಸ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು. ಇದೆಲ್ಲಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಪಾಕಿಸ್ತಾನದ ಕ್ರಿಕೆಟರ್, ಅವರು ಯಾವಾಗ ನಿವೃತ್ತಿ ಪಡೆದುಕೊಳ್ಳಬೇಕು ಎಂಬುದನ್ನು ಹೇಳಿದ್ದಾರೆ.
ಕ್ರಿಕೆಟ್ ಅಂಗಳದಲ್ಲಿ ಸಿಡಿಲ ಮರಿಯಂತೆ ಅಬ್ಬರಿಸುವ ವಿರಾಟ್ ಕೊಹ್ಲಿ ಆಟಕ್ಕೆ ಫಿದಾ ಆಗದವರೇ ಇಲ್ಲ. ಅಂಥ ಆಟಗಾರನ ನಿವೃತ್ತಿ ಬಗ್ಗೆ ಪಾಕಿಸ್ತಾನದ ಕ್ರಿಕೆಟರ್ ಶೋಯಿಬ್ ಅಖ್ತರ್ ಭವಿಷ್ಯ ನುಡಿದಿದ್ದಾರೆ. ಕೊಹ್ಲಿ ಯಾವಾಗ ನಿವೃತ್ತಿ ಹೊಂದುವುದು ಸೂಕ್ತ?, ಕೊಹ್ಲಿ ನಿವೃತ್ತಿಗೆ ಶೋಯಿಬ್ ಓಖ್ತರ್ ನೀಡುವ ಸಲಹೆಯೇನು? ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಕೊಹ್ಲಿ ನಿವೃತ್ತಿಯ ಬಗ್ಗೆ ಚರ್ಚೆ ಆಗುತ್ತಿರುವುದು ಏಕೆ?
ಭಾರತ ಕ್ರಿಕೆಟ್ ತಂಡದಲ್ಲಿ ಒನ್ ಡೌನ್ ಆಗಿ ಅಂಗಳಕ್ಕೆ ಇಳಿಯುತ್ತಿದ್ದ ವಿರಾಟ್ ಕೊಹ್ಲಿ ಮೇಲಿಂದ ಮೇಲೆ ಮುಗ್ಗರಿಸಿದರು. 20 ರಿಂದ 30 ರನ್ ಬಾರಿಸುವುದಕ್ಕೂ ಹರಸಾಹಸ ಪಡುವಂತೆ ಆಗಿತ್ತು. 1020 ದಿನಗಳಲ್ಲಿ 83 ಇನ್ನಿಂಗ್ಸ್ ಆಡಿದ ವಿರಾಟ್, ಒಂದೇ ಒಂದು ಶತಕ ಬಾರಿಸುವುದಕ್ಕೂ ಸಾಧ್ಯವಾಗಿರಲಿಲ್ಲ. ಐಪಿಎಲ್ ಸೇರಿದಂತೆ ಸಾಲು ಸಾಲು ಸರಣಿ ಆಡಿದ ಅವರಿಗೆ ವಿಶ್ರಾಂತಿ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆದಿತ್ತು.

ಟೀಕಾಕಾರರಿಗೆ ಶತಕನಿಂದಲೇ ತಿವಿದ ವಿರಾಟ್ ಕೊಹ್ಲಿ
ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಅಬ್ಬರಿಸಿ ಬೊಬ್ಬಿರಿದ ವಿರಾಟ್ ಕೊಹ್ಲಿ 71ನೇ ಶತಕ ಸಿಡಿಸಿ ಸಂಭ್ರಮಿಸಿದರು. ಅಘ್ಘಾನಿಸ್ತಾನ್ ವಿರುದ್ಧ ಟಿ-20 ಪಂದ್ಯದಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿದ ಕೊಹ್ಲಿ, 100 ಗಡಿ ದಾಟುವುದರೊಂದಿಗೆ ಹೊಸ ದಾಖಲೆ ಬರೆದರು. ಏಷ್ಯಾ ಕಪ್ 2022ರ ಸೂಪರ್ ಫೋರ್ ಪಂದ್ಯದಲ್ಲಿ ಜಸ್ಟ್ 61 ಎಸೆತಗಳಲ್ಲಿ 6 ಸಿಕ್ಸರ್, 12 ಬೌಂಡರಿ ಸೇರಿದಂತೆ 122 ರನ್ ಬಾರಿಸಿದರು.

ಕೊಹ್ಲಿ ಯಾವಾಗ ನಿವೃತ್ತಿ ಹೊಂದಬೇಕು ಎಂದು ಅಖ್ತರ್ ಭವಿಷ್ಯ
ಆಸ್ಟ್ರೇಲಿಯಾದಲ್ಲಿ ಮಾರ್ಕ್ಯೂ ಈವೆಂಟ್ನ ನಂತರ 104 ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ ಟಿ-20 ಪಂದ್ಯಗಳಿಗೆ ನಿವೃತ್ತಿ ಹೊಂದಬಹುದು ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯಿಬ್ ಅಖ್ತರ್ ಲೆಕ್ಕ ಹಾಕಿದ್ದಾರೆ. "ಟಿ-20 ವಿಶ್ವಕಪ್ ಬಳಿಕ ಕೊಹ್ಲಿ ನಿವೃತ್ತಿಯಾಗುವ ಸಾಧ್ಯತೆ ಇದೆ. ಇತರ ಸ್ವರೂಪಗಳಲ್ಲಿ ದೀರ್ಘ ಅವಧಿಯವರೆಗೂ ಮುಂದುವರಿಯುವುದಕ್ಕೆ ಅವರು ಟಿ-20 ಪಂದ್ಯಗಳಿಗೆ ನಿವೃತ್ತಿ ಹೊಂದಬಹುದು. ನಾನು ಅವರ ಸ್ಥಾನದಲ್ಲಿದ್ದರೆ, ದೊಡ್ಡ ಪಂದ್ಯಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದೆ," ಎಂದು ಹೇಳಿದ್ದಾರೆ. ಆಸ್ಟ್ರೇಲಿಯಾದ ಅಂಗಳದಲ್ಲಿ ಸಾಕಷ್ಟು ಅನುಭವ ಹೊಂದಿರುವ ವಿರಾಟ್ ಕೊಹ್ಲಿ ಮುಂಬರುವ ಟಿ-20 ವಿಶ್ವಕಪ್ ಸರಣಿಯಲ್ಲಿ ಭಾರತ ತಂಡಕ್ಕೆ ಅತ್ಯಗತ್ಯ ಆಟಗಾರನಾಗಲಿದ್ದಾರೆ ಎಂದರು.

ಪಾಕಿಸ್ತಾನದ ಸೋಲಿಗೆ ಕಾರಣವೇ ಅದೊಂದು ನಿರ್ಧಾರ
ಏಷ್ಯಾಕಪ್ ಫೈನಲ್ನಲ್ಲಿ ಪಾಕಿಸ್ತಾನ 23 ರನ್ಗಳಿಂದ ಶ್ರೀಲಂಕಾ ವಿರುದ್ಧ ಸೋಲು ಒಪ್ಪಿಕೊಂಡಿತು. ಬಾಬರ್ ಅಜಂ ನೇತೃತ್ವದ ತಂಡವನ್ನು ಟೀಕಿಸಿದ ಶೋಯಿಬ್ ಅಖ್ತರ್, ಗೆಲುವು ತಂದು ಕೊಡಲು ಸಾಧ್ಯವಾಗದ ಮಾಜಿ ವೇಗಿ ಮೊಹಮ್ಮದ್ ರಿಜ್ವಾನ್ ವಿರುದ್ಧ ವಾಗ್ದಾಳಿ ನಡೆಸಿದರು.
"ನಾವು ಪದೇ ಪದೇ ತಪ್ಪಾದ ತಂಡವನ್ನು ಇಟ್ಟುಕೊಂಡು ಅಂಗಳಕ್ಕೆ ಇಳಿಯುತ್ತಿದ್ದೇವೆಯೇ? ಮೊಹಮ್ಮದ್ ರಿಜ್ವಾನ್ ಕುರಿತು ಹಲವು ಪ್ರಶ್ನೆ ಏಳುತ್ತವೆ. ಏಕೆಂದರೆ ಅವರು ಗೆಲುವನ್ನು ತಂದುಕೊಡುವುದಕ್ಕೆ ಸಾಧ್ಯವಾಗುತ್ತಿಲ್ಲ, ಅವರಿಗೆ ಇತರರಿಂದಲೂ ಬೆಂಬಲ ಬೇಕಾಗಿತ್ತು. ಅವರು ರನ್-ಎ-ಬಾಲ್ ಇನ್ನಿಂಗ್ಸ್ ಆಡಿದರು. ನಂತರ, ಅವರು ಪಂದ್ಯವನ್ನು ಮುಗಿಸಲು ಸಾಧ್ಯವಾಗದಿದ್ದರೆ, ಅದು ಸಮಸ್ಯೆಯಾಗಲಿದೆ. ಹಾಗಾಗಿ ಪಾಕಿಸ್ತಾನವು ಕೆಟ್ಟ ಕ್ರಿಕೆಟ್ ಆಡಿದೆ ಎಂದು ನಾನು ಭಾವಿಸುತ್ತೇನೆ. ಟಾಸ್ ಗೆದ್ದ ನಂತರ ಅವರು ಮೊದಲು ಬ್ಯಾಟಿಂಗ್ ಮಾಡಬೇಕಿತ್ತು. ಅವರ ಯೋಜನೆ ಏನು ಎಂದು ತಿಳಿದಿರಲಿಲ್ಲ, " ಎಂದು ಶೋಯಿಬ್ ಅಖ್ತರ್ ಹೇಳಿದ್ದಾರೆ.












Click it and Unblock the Notifications