ಕಾಲ್ಕೆರೆದುಕೊಂಡು ಜಗಳ ಆರಂಭಿಸಿದ ಶ್ರೀಲಂಕಾ ಆಟಗಾರನಿಗೆ ಬಾಲಕ ವೈಭವ್ ಸೂರ್ಯವಂಶಿ ಎಚ್ಚರಿಕೆ ಸಂದೇಶ
Vaibhav Sooryavanshi: ದಾಂಬುಲಾದಲ್ಲಿ ಜೂನ್ 15ರಂದು ನಡೆದ ಭಾರತ 'ಎ' ಮತ್ತು ಶ್ರೀಲಂಕಾ 'ಎ' ತಂಡಗಳ ನಡುವಿನ ಪಂದ್ಯವು ಕೇವಲ ಆಟವಾಗಿ ಉಳಿಯಲಿಲ್ಲ. ಬದಲಾಗಿ ಮೈದಾನದಲ್ಲಿ ನಡೆದ ಆಟಗಾರರ ನಡುವಿನ ತೀವ್ರ ಸಂಘರ್ಷಕ್ಕೆ ಸಾಕ್ಷಿಯಾಯಿತು. ಟೀಮ್ ಇಂಡಿಯಾದ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಹಾಗೂ ಶ್ರೀಲಂಕಾದ ವಿಷೇನ್ ಹಲಂಬಾಗೆ ನಡುವೆ ನಡೆದ ದೈಹಿಕ ಜಗಳ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಜೊತೆಗೆ ವಂಡರ್ ಕಿಡ್ ನೀಡಿದ ಎಚ್ಚರಿಕೆ ಸಂದೇಶ ಕೂಡ ಭಾರಿ ಸದ್ದು ಮಾಡುತ್ತಿದೆ
ಕ್ರಿಕ್ಬಜ್ ವರದಿ ಪ್ರಕಾರ, ಪಂದ್ಯ ಮುಗಿದ ಬಳಿಕವೇ ಈ ಗಲಾಟೆ ಆರಂಭಿಸಿದ್ದು ಶ್ರೀಲಂಕಾದ ಆಟಗಾರ ವಿಷೇನ್ ಹಲಂಬಾಗೆ. ಸೂಪರ್ ಓವರ್ನಲ್ಲಿ ಶ್ರೀಲಂಕಾ ತಂಡ ಜಯ ಸಾಧಿಸುತ್ತಿದ್ದಂತೆ ಮಿತಿಮೀರಿದ ಉತ್ಸಾಹದಲ್ಲಿದ್ದ ಹಲಂಬಾಗೆ ಪೆವಿಲಿಯನ್ ಕಡೆಗೆ ತೆರಳುತ್ತಿದ್ದ ವೈಭವ್ ಸೂರ್ಯವಂಶಿ ಅವರನ್ನು ನೋಡಿ ಚಪ್ಪಾಳೆ ತಟ್ಟುತ್ತಾ ಪ್ರಚೋದನಕಾರಿಯಾಗಿ ಕಿಡಿಕಾರಿದರು. ವೈಭವ್ ಅವರತ್ತ ತಿರುಗಿ 'ಮ್ಯಾಚ್ ಓವರ್... ನೌ ಯೂ ಗೋ ಹೋಮ್' (ಪಂದ್ಯ ಮುಗಿಯಿತು... ಈಗ ನೀವು ಮನೆಗೆ ಹೋಗಿ) ಎಂದು ಗೇಲಿ ಮಾಡಿದರು.

ಭಾರತದ ಯುವ ಆಟಗಾರನ ಆಕ್ರೋಶ
ಶ್ರೀಲಂಕಾ ಆಟಗಾರನ ಈ ಅವಮಾನಕಾರಿ ಮಾತುಗಳನ್ನು ಕೇಳಿ 15 ವರ್ಷದ ವೈಭವ್ ಸೂರ್ಯವಂಶಿ ಅವರಿಗೆ ಕೋಪ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಅವರು ತಕ್ಷಣವೇ ಹಿಂದೆ ತಿರುಗಿ ಹಲಂಬಾಗೆ ಅವರ ಕಡೆಗೆ ವೇಗವಾಗಿ ನಡೆದುಕೊಂಡು ಹೋಗಿ ಮಾತಿನ ಚಕಮಕಿ ಆರಂಭಿಸಿದರು. ವಿಷಯ ಕೇವಲ ಮಾತುಗಳಿಗೆ ಸೀಮಿತವಾಗದೆ, ವೈಭವ್ ಅವರು ಹಲಂಬಾಗೆ ಅವರನ್ನು ಜೋರಾಗಿ ಕೈಯಿಂದ ತಳ್ಳಿದರು.
ವೈಭವ್ ಎಚ್ಚರಿಕೆ ಸಂದೇಶ
ಈ ಇಬ್ಬರೂ ಆಟಗಾರರು ಪರಸ್ಪರ ಕೈಕೈ ಮಿಲಾಯಿಸುವ ಮತ್ತು ಹೊಡೆದಾಡಿಕೊಳ್ಳುವ ಹಂತಕ್ಕೆ ತಲುಪಿದರು. ಈ ವೇಳೆ ಶ್ರೀಲಂಕಾದ ಹಿರಿಯ ಆಟಗಾರ ವಿಕೆಟ್ ಕೀಪರ್ ನಿರೋಷನ್ ಡಿಕ್ವೆಲ್ಲಾ ಮತ್ತು ಇತರ ಆಟಗಾರರು ತಕ್ಷಣ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು. ಜಗಳದ ನಂತರ ಈ ಎರಡೂ ತಂಡಗಳ ಆಟಗಾರರು ಸಾಂಪ್ರದಾಯಿಕವಾಗಿ ಪರಸ್ಪರ ಹಸ್ತಲಾಘವ ಮಾಡಿದರು. ಇದೀಗ ವೈಭವ್ ಸೂರ್ಯವಂಶಿ ಅವರು ಕಾಲ್ಕೆರೆದು ಜಗಳಕ್ಕೆ ಆಹ್ವಾನಿಸಿದ ಶ್ರೀಲಂಕಾ ಆಟಗಾರನಿಗೆ 'ಪಂದ್ಯ ಮುಗಿಯಿತು... ಈಗ ನೀವು ಮನೆಗೆ ಹೋಗಿ ಮೊದ್ಲು,' ಎಂದು ಎಚ್ಚರಿಕೆ ನೀಡಿರುವ ಸಂದೇಶ ಭಾರೀ ವೈರಲ್ ಆಗುತ್ತಿದೆ.
ಸೂಪರ್ ಓವರ್ ವಿವಾದ
ಈ ಪಂದ್ಯದಲ್ಲಿ ಸೂಪರ್ ಓವರ್ ನಡೆಯಬಾರದಿತ್ತು ಎಂಬ ಚರ್ಚೆಯೂ ಕೇಳಿಬಂದಿದೆ. ಪಂದ್ಯ ಮುಕ್ತಾಯದ ಹಂತದಲ್ಲಿದ್ದಾಗ ಮೈದಾನದಲ್ಲಿ ಕಡಿಮೆ ಬೆಳಕು ಇತ್ತು. ಭಾರತದ ನಾಯಕ ತಿಲಕ್ ವರ್ಮಾ ಅವರು ಅಂಪೈರ್ಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿ ಸೂಪರ್ ಓವರ್ಗಾಗಿ ಒತ್ತಾಯಿಸಿದ್ದರು. ಆದರೆ ಶ್ರೀಲಂಕಾ ತಂಡಕ್ಕೆ ಆ ಸಮಯದಲ್ಲಿ ಸೂಪರ್ ಓವರ್ ಆಡಲು ಇಷ್ಟವಿರಲಿಲ್ಲ ಎಂದು ಶ್ರೀಲಂಕಾ ಕ್ರಿಕೆಟ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೂಪರ್ ಓವರ್ನಲ್ಲಿ ಶ್ರೀಲಂಕಾ ನೀಡಿದ 17 ರನ್ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ಕೇವಲ 9 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.
ಕ್ರಮ ಕೈಗೊಳ್ಳಲಾಗುತ್ತದೆಯೇ?
ಸಾಮಾನ್ಯವಾಗಿ 'ಎ' ತಂಡಗಳ ಸರಣಿಯಲ್ಲಿ ನಡೆಯುವ ಶಿಸ್ತು ಉಲ್ಲಂಘನೆಯ ವಿಷಯಗಳಲ್ಲಿ ಐಸಿಸಿ ನೇರವಾಗಿ ಹಸ್ತಕ್ಷೇಪ ಮಾಡುವುದಿಲ್ಲ ಅಥವಾ ಪಂದ್ಯದ ಅಧಿಕಾರಿಗಳನ್ನು ನೇಮಿಸುವುದಿಲ್ಲ. ಆದ್ದರಿಂದ ಈ ಆಟಗಾರರ ವಿರುದ್ಧ ಕ್ರಮ ಕೈಗೊಳ್ಳುವುದು ಆಯಾ ಕ್ರಿಕೆಟ್ ಮಂಡಳಿಗಳಿಗೆ ಬಿಟ್ಟಿದ್ದಾಗಿದೆ. ಮೂಲಗಳ ಪ್ರಕಾರ, ಶ್ರೀಲಂಕಾ 'ಎ' ತಂಡದ ಆಟಗಾರರು ತಮ್ಮ ವರ್ತನೆಗಾಗಿ ಭಾರತ ತಂಡದ ಡ್ರೆಸ್ಸಿಂಗ್ ರೂಮ್ಗೆ ಹೋಗಿ ಕ್ಷಮೆಯಾಚಿಸುವ ಬಗ್ಗೆ ಚರ್ಚೆ ನಡೆಸಿದ್ದರು ಎನ್ನಲಾಗಿದೆ.
ಇತ್ತೀಚೆಗಷ್ಟೇ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅಬ್ಬರಿಸಿದ್ದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರಿಂದ ಈ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ಕಂಡುಬರಲಿಲ್ಲ. ಅವರು ಆಡಿದ ಮೂರು ಪಂದ್ಯಗಳಲ್ಲಿ 12, 44 ಮತ್ತು 21 ರನ್ ಗಳಿಸಿದ್ದಾರೆ. ಆದರೆ ಈ ಮೈದಾನದ ಘಟನೆಯು ಸರಣಿಯ ಅತ್ಯಂತ ವಿವಾದಾತ್ಮಕ ಅಂಶವಾಗಿ ಉಳಿದುಕೊಂಡಿದೆ.












Click it and Unblock the Notifications