RCB: ಅದೊಂದು ಕಾರಣಕ್ಕೆ ಮಹತ್ವದ ನಿರ್ಧಾರ ತೆಗೆದುಕೊಂಡ್ರಾ ವಿರಾಟ್ ಕೊಹ್ಲಿ!
2025ರ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡದ ನಾಯಕತ್ವ ವಹಿಸಿಕೊಳ್ಳುತ್ತಾರೆ ಎಂದೇ ಭಾವಿಸಲಾಗಿತ್ತು. 2025ರ ಮೆಗಾ ಹರಾಜಿನಲ್ಲಿ ಮೂವರನ್ನು ಮಾತ್ರ ಉಳಿಸಿಕೊಂಡಿದ್ದ ಆರ್ ಸಿಬಿ ಉಳಿದ ಆಟಗಾರರನ್ನು ಬಿಡುಗಡೆ ಮಾಡಿತ್ತು. ಸಂಪೂರ್ಣ ಹೊಸ ತಂಡವನ್ನು ಕಟ್ಟಿತ್ತು, ಕೊಹ್ಲಿ ಮತ್ತೆ ನಾಯಕತ್ವ ವಹಿಸಿಕೊಳ್ಳುವುದು ಪಕ್ಕಾ ಎಂದೇ ಅಭಿಮಾನಿಗಳು ಭಾವಿಸಿದ್ದರು.
ಆದರೆ ಫೆಬ್ರವರಿ 13ರಂದು ಆರ್ ಸಿಬಿ ನಾಯಕನ ಹೆಸರನ್ನು ಘೋಷಿಸಿತು. ರಜತ್ ಪಟಿದಾರ್ ಆರ್ ಸಿಬಿ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಿತು. ರಜತ್ ಪಟಿದಾರ್ ಮಧ್ಯಪ್ರದೇಶ ತಂಡದ ನಾಯಕರಾಗಿದ್ದು ತಂಡವನ್ನು ಮುನ್ನಡೆಸುವ ಅನುಭವ ಹೊಂದಿದ್ದಾರೆ. ವಿರಾಟ್ ಕೊಹ್ಲಿಗೆ ನಾಯಕತ್ವ ಸಿಗದೇ ಇರುವುದು ಅಭಿಮಾನಿಗಳಿಗೆ ಬೇಸರ ತರಿಸಿದರೂ, ರಜತ್ ಪಟಿದಾರ್ ಆಯ್ಕೆ ಉತ್ತಮ ಎಂದೇ ಹೇಳಲಾಗಿದೆ.

ಕೆ. ಶ್ರೀಕಾಂತ್ ಹೇಳಿದ್ದೇನು?
ಆರ್ ಸಿಬಿಗೆ ನಾಯಕತ್ವಕ್ಕಾಗಿ ಮೊದಲ ಆಯ್ಕೆ ವಿರಾಟ್ ಕೊಹ್ಲಿಯೇ ಆಗಿರುತ್ತಾರೆ. ಆದರೆ ಕೊಹ್ಲಿ ಜೊತೆ ಚರ್ಚೆ ನಡೆಸಿಯೇ ಫ್ರಾಂಚೈಸಿ ರಜತ್ ಪಟಿದಾರ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದೆ. ಭಾರತದ ಮಾಜಿ ಮುಖ್ಯ ಆಯ್ಕೆದಾರ ಕೆ. ಶ್ರೀಕಾಂತ್ ವಿರಾಟ್ ಕೊಹ್ಲಿ ನಾಯಕತ್ವ ತಿರಸ್ಕರಿಸಿದ್ದರ ಹಿಂದಿನ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ಮೇಲೆ ಗಮನಹರಿಸಲು ನಾಯಕತ್ವವನ್ನು ನಿರಾಕರಿಸಿದ್ದಾರೆ ಎಂದು ಕೆ. ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿರುವ ಶ್ರೀಕಾಂತ್, ಬ್ಯಾಟಿಂಗ್ ಕಡೆ ಹೆಚ್ಚಿನ ಗಮನ ಹರಿಸಲು ವಿರಾಟ್ ಕೊಹ್ಲಿ ಬಯಸಿರುವುದರಿಂದ ಅವರು ನಾಯಕತ್ವ ಬೇಡ ಎಂದಿದ್ದಾರೆ. ಆರ್ಸಿಬಿ ಕೊಹ್ಲಿಯೊಂದಿಗೆ ಚರ್ಚೆ ಮಾಡಿದ ಬಳಿಕವೇ ಪಾಟಿದಾರ್ ಅವರನ್ನು ನಾಯಕರನ್ನಾಗಿ ನೇಮಿಸಿದೆ ಎಂದು ಅವರು ಹೇಳಿದ್ದಾರೆ.
ವಿರಾಟ್ ಕೊಹ್ಲಿ ನಾಯಕತ್ವಕ್ಕೆ ಇಲ್ಲ ಎಂದೇ ಹೇಳುತ್ತಾರೆ ಎಂದು ನನಗೆ ಅನ್ನಿಸಿತ್ತು. ಅವರು ಬ್ಯಾಟಿಂಗ್ ಕಡೆ ಗಮನ ನೀಡಲು ಬಯಸುತ್ತೇನೆ ಎಂದು ಹೇಳುತ್ತಿದ್ದರು. ಕೊಹ್ಲಿ ಜೊತೆ ಚರ್ಚಿಸಿಯೇ ಈ ಆರ್ ಸಿಬಿ ಈ ನಿರ್ಧಾರ ಮಾಡಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಎಂಎಸ್ ಧೋನಿಗೆ ಹೋಲಿಕೆ
ಶ್ರೀಕಾಂತ್ ಅವರು ರಜತ್ ಪಟಿದಾರ್ ಅವರನ್ನು ಎಂಎಸ್ ಧೋನಿಗೆ ಹೋಲಿಕೆ ಮಾಡಿದ್ದಾರೆ. 2007 ರಲ್ಲಿ ಎಂಎಸ್ ಧೋನಿ ಭಾರತ ಟಿ20 ತಂಡದ ನಾಯಕರನ್ನಾಗಿ ಆಯ್ಕೆ ಮಾಡಿದ ಉದಾಹರಣೆ ನೀಡಿದ್ದಾರೆ.
ಆರ್ ಸಿಬಿ ನಾಯಕತ್ವಕ್ಕೆ ರಜತ್ ಪಟಿದಾರ್ ಉತ್ತಮ ಆಯ್ಕೆ ಎಂದಿದ್ದಾರೆ. ಪಟಿದಾರ್ ಮೇಲೆ ಯಾವುದೇ ಹೆಚ್ಚಿನ ನಿರೀಕ್ಷೆಗಳು ಇರುವುದಿಲ್ಲ, 2007 ರಲ್ಲಿ ನಾವು ಧೋನಿಯನ್ನು ಟಿ 20 ವಿಶ್ವಕಪ್ ನಾಯಕನನ್ನಾಗಿ ನೇಮಿಸಿದಾಗ, ಅವರಿಂದ ಮತ್ತು ತಂಡದಿಂದ ಹೆಚ್ಚಿನದನ್ನು ನಿರೀಕ್ಷಿಸಿರಲಿಲ್ಲ, ಪಟಿದಾರ್ ಅವರ ನಾಯಕತ್ವದಿಂದ ಕೂಡ ಹೆಚ್ಚಿನ ನಿರೀಕ್ಷೆಗಳು ಇಲ್ಲ. ಅವರು ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ವಿರಾಟ್ ಕೊಹ್ಲಿ ರಜತ್ ಪಟಿದಾರ್ ಅವರಿಗೆ ಮಾರ್ಗದರ್ಶಕ ಶಕ್ತಿಯಾಗಿರುತ್ತಾರೆ ಎಂದರು.












Click it and Unblock the Notifications