Rishabh Pant: ರಿಷಬ್ ಪಂತ್ಗಾಗಿ ಆರ್ಸಿಬಿ ಜೊತೆ ಈ ಎರಡು ತಂಡಗಳ ನಡುವೆ ಭಾರಿ ಪೈಪೋಟಿ
ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಮೆಗಾ ಹರಾಜಿಗೆ ಮುನ್ನ ಎಲ್ಲಾ ಫ್ರಾಂಚೈಸಿಗಳು ಉಳಿಸಿಕೊಂಡ ಆಟಗಾರರ ಪಟ್ಟಿ ಬಿಡುಗಡೆ ಮಾಡಿವೆ. ಅಚ್ಚರಿ ಎನ್ನುವಂತೆ ರಿಷಬ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹೊರಬಂದಿದ್ದಾರೆ. 9 ವರ್ಷಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕಾಗಿ ಆಡಿದ್ದ ಪಂತ್, ಈ ನಿರ್ಧಾರದ ಹಿಂದಿನ ಕಾರಣವೇನು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಕೆಲವು ವರದಿಗಳ ಪ್ರಕಾರ ಅಕ್ಷರ್ ಪಟೇಲ್ರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನಾಯಕರನ್ನಾಗಿ ಮಾಡಲು ಫ್ರಾಂಚೈಸಿ ನಿರ್ಧಾರ ಮಾಡಿದ್ದು, ರಿಷಬ್ ಪಂತ್ಗೆ ಇದು ಒಪ್ಪಿಗೆಯಾಗದ ಕಾರಣ ಹೊರ ಬಂದಿದ್ದಾರೆ ಎನ್ನಲಾಗಿದೆ. ಮತ್ತೊಂದು ವರದಿಯ ಪ್ರಕಾರ ಪಂತ್ ಹೆಚ್ಚಿನ ಹಣವನ್ನು ನಿರೀಕ್ಷೆ ಮಾಡಿದ್ದು ಈ ವಿಚಾರದಲ್ಲಿ ಫ್ರಾಂಚೈಸಿ ಜೊತೆ ಭಿನ್ನಾಭಿಪ್ರಾಯ ಮೂಡಿದ್ದರಿಂದ ಮೆಗಾ ಹರಾಜಿಗೆ ಬಂದಿದ್ದಾರೆ ಎನ್ನಲಾಗಿದೆ.

ರಿಷಬ್ ಪಂತ್ರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲು ಮೂರು ಫ್ರಾಂಚೈಸಿಗಳು ಇದೀಗ ತುದಿಗಾಲಲ್ಲಿ ನಿಂತಿವೆ. ಮೆಗಾ ಹರಾಜಿನಲ್ಲಿ ಈ ಮೂರು ತಂಡಗಳು ರಿಷಬ್ ಪಂತ್ಗಾಗಿ ದೊಡ್ಡ ಮೊತ್ತ ಕೂಡಲು ಸಿದ್ಧವಾಗಿದ್ದು, ದಾಖಲೆಯ ಮೊತ್ತಕ್ಕೆ ಹರಾಜಾಗುವ ಸಾಧ್ಯತೆ ಇದೆ.
ಪಂಜಾಬ್ ಕಿಂಗ್ಸ್ಗೆ ಬೇಕು ನಾಯಕ
ರಿಷಬ್ ಪಂತ್ ಮೇಲೆ ಕಣ್ಣಿಟ್ಟಿರುವ ತಂಡಗಳಲ್ಲಿ ಪಂಜಾಬ್ ಕಿಂಗ್ಸ್ ಮುಖ್ಯವಾಗಿದೆ. ಎರಡು ಕಾರಣಗಳಿಂದ ರಿಷಬ್ ಪಂತ್ ಪಂಜಾಬ್ ಕಿಂಗ್ಸ್ಗೆ ಸೇರುವ ಸಾಧ್ಯತೆ ಹೆಚ್ಚಾಗಿದೆ. ಮೊದಲನೆಯದಾಗಿ ರಿಷಬ್ ಪಂತ್ ನಾಯಕತ್ವದ ಕಾರಣಕ್ಕೆ ಡೆಲ್ಲಿ ಕ್ಯಾಪಿಟಲ್ಸ್ನಿಂದ ಹೊರಬಂದಿದ್ದರೆ ಪಂಜಾಬ್ ಕಿಂಗ್ಸ್ ತಂಡವು ಅವರಿಗೆ ನಾಯಕನ ಸ್ಥಾನವನ್ನು ಆಫರ್ ಮಾಡಬಹುದು.
ಡೆಲ್ಲಿ ಕ್ಯಾಪಿಟಲ್ಸ್ ಮಾಜಿ ಕೋಚ್ ರಿಕಿ ಪಾಂಟಿಂಗ್ ಈಗ ಪಂಜಾಬ್ ಕಿಂಗ್ಸ್ ತಂಡದ ಕೋಚ್ ಆಗಿದ್ದು, ಇಬ್ಬರ ನಡುವೆ ಉತ್ತಮ ಬಾಂಧವ್ಯ ಇದೆ. ಈ ಕಾರಣಕ್ಕೆ ಪಂಜಾಬ್ ಕಿಂಗ್ಸ್ ಸೇರಲು ರಿಷಬ್ ಪಂತ್ ಕೂಡ ಒಪ್ಪಬಹುದು ಎನ್ನಲಾಗಿದೆ. ಪಂಜಾಬ್ ಕಿಂಗ್ಸ್ ಕೇವಲ ಇಬ್ಬರು ಆಟಗಾರರನ್ನು ಉಳಿಸಿಕೊಂಡಿದೆ. ಅವರ ಬಳಿ 110.5 ಕೋಟಿ ರೂಪಾಯಿ ಪರ್ಸ್ ಇದ್ದು ದೊಡ್ಡ ಮೊತ್ತಕ್ಕೆ ಪಂತ್ರನ್ನು ಖರೀದಿ ಮಾಡುವ ಸಾಮರ್ಥ್ಯವಿದೆ.
ಚೆನ್ನೈ ಸೂಪರ್ ಕಿಂಗ್ಸ್
ಮಹೇಂದ್ರ ಸಿಂಗ್ ಧೋನಿ ಈ ಬಾರಿ ಕೂಡ ಐಪಿಎಲ್ನಲ್ಲಿ ಆಡಲು ಒಪ್ಪಿಕೊಂಡಿದ್ದಾರೆ. ಇದೇ ಅವರ ಕೊನೆಯ ಐಪಿಎಲ್ ಎನ್ನಲಾಗಿದೆ. ಭವಿಷ್ಯದಲ್ಲಿ ಸಿಎಸ್ಕೆ ತಂಡಕ್ಕೆ ವಿಕೆಟ್ ಕೀಪರ್ ಬ್ಯಾಟರ್ ಬೇಕಾಗಿದ್ದು, ರಿಷಬ್ ಪಂತ್ಗಾಗಿ ನೋಡಬಹುದು. ರಿಷಬ್ ಪಂತ್ ಎಂಎಸ್ ಧೋನಿ ಅವರ ದೊಡ್ಡ ಅಭಿಮಾನಿಯಾಗಿದ್ದು, ಧೋನಿಗಾಗಿ ಅವರು ಸಿಎಸ್ಕೆ ಸೇರಲು ಒಪ್ಪುವ ಸಾಧ್ಯತೆ ಕೂಡ ಇದೆ. ಒಂದು ವೇಳೆ ರಿಷಬ್ ಪಂತ್ ಬೇಕೇ ಬೇಕು ಎಂದರೆ ಪಂಜಾಬ್ ಕಿಂಗ್ಸ್ ಜೊತೆ ಸಿಎಸ್ಕೆ ಪಪೋಟಿಗೆ ಇಳಿಯಬಹುದು. ಸಿಎಸ್ಕೆ ಬಳಿ 55 ಕೋಟಿ ರೂಪಾಯಿ ಪರ್ಸ್ ಇದ್ದು, ದೊಡ್ಡ ಮೊತ್ತಕ್ಕೆ ಪಂತ್ಗಾಗಿ ಹೋಗುತ್ತಾರಾ ನೋಡಬೇಕಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು
ವಿರಾಟ್ ಕೊಹ್ಲಿ ಮುಂದಿನ ಐಪಿಎಲ್ನಲ್ಲಿ ನಾಯಕತ್ವ ವಹಿಸಿಕೊಳ್ಳುವುದಿಲ್ಲ ಎಂದು ಆರ್ ಸಿಬಿ ಡೈರೆಕ್ಟರ್ ಆಫ್ ಕ್ರಿಕೆಟ್ ಮೊ ಬೊಬೊಟ್ ಸ್ಪಷ್ಟನೆ ನೀಡಿದ್ದಾರೆ. ಹರಾಜಿನ ಬಳಿಕ ನಾಯಕತ್ವದ ಬಗ್ಗೆ ನಿರ್ಧಾರ ಮಾಡುವುದಾಗಿ ಹೇಳಿದ್ದಾರೆ. ಆರ್ ಸಿಬಿ ನಾಯಕನಿಗೆ ಹುಡುಕಾಟ ನಡೆಸಿದ್ದರೆ ರಿಷಬ್ ಪಂತ್ ಉತ್ತಮ ಆಯ್ಕೆಯಾಗಿದ್ದಾರೆ.
ದಿನೇಶ್ ಕಾರ್ತಿಕ್ ನಿವೃತ್ತಿ ಘೋಷಿಸಿದ ಬಳಿಕ ವಿಕೆಟ್ ಕೀಪರ್ ಕೂಡ ಬೇಕಿದ್ದು, ಪಂತ್ ನಾಯಕತ್ವದ ಜೊತೆ ವಿಕೆಟ್ ಕೀಪರ್ ಕೂಡ ಆಗಲಿದ್ದಾರೆ. ಆರ್ ಸಿಬಿ ಬಳಿ 83 ಕೋಟಿ ರೂಪಾಯಿ ಪರ್ಸ್ ಉಳಿದಿದ್ದು, ದೊಡ್ಡ ಮೊತ್ತಕ್ಕೆ ರಿಷಬ್ ಪಂತ್ರನ್ನು ಬಿಡ್ ಮಾಡುವ ಸಾಧ್ಯತೆ ಕೂಡ ಇದೆ.












Click it and Unblock the Notifications